ದಾವಣಗೆರೆ: ಬಿರುಗಾಳಿ ಮಳೆಗೆ ಹಾರಿಹೋದ ಶೆಡ್ಗಳು, ಜನರ ಪರದಾಟ
ದಾವಣಗೆರೆ, ಮೇ, 18: ಜಿಎಂಐಟಿ ಕಾಲೇಜ್ ಹಿಂಭಾಗದಲ್ಲಿ ದೊಡ್ಡಬಾತಿ ಸರ್ವೆ ನಂಬರ್ 53/1ಬಿ /1ಸಿ 11 ಹೆಕ್ಟೇರ್ 33 ಗುಂಟೆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಜನರ ಸ್ಥಳಾಂತರ ಮಾಡಿದ್ದು, ಅವರ ಬದುಕು ಈಗ ಬೀದಿಗೆ ಬಿದ್ದಿದೆ. ಯಾಕೆ ಅಂತೀರಾ ಇಲ್ಲದೆ ನೋಡಿ ಮಾಹಿತಿ.
ಭಾರೀ ಗಾಳಿ, ಮಳೆಯಿಂದಾಗಿ ಶೆಡ್ಗಳು ಹಾರಿ ಹೋಗಿವೆ. ಕೆಲ ಶೆಡ್ಗಳಂತೂ ವಿದ್ಯುತ್ ಕಂಬಗಳ ಮೇಲೆ ಹಾರಿ ಹೋಗಿವೆ. ಇದರಿಂದಾಗಿ ಜನರು ಮತ್ತೆ ಭಯದಲ್ಲಿಯೇ ಬದುಕುವ ದುಃಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಬಾಷಾ ನಗರ ಬಳಿ ರಿಂಗ್ ರಸ್ತೆ ಬಳಿ ಕಳೆದ 15 ವರ್ಷಗಳಿಂದ ವಾಸವಾಗಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಿಲ್ಲಾಡಳಿತ ಮತ್ತು
ಮಹಾನಗರ ಪಾಲಿಕೆಯು ಅವರಿಗೆ ಮನವೊಲಿಸಿ ಸ್ಥಳಾಂತರಿಸಲಾಗಿತ್ತು.
ನಿವೇಶನ ನೀಡಿ ಸ್ಥಳಾಂತರ ಮಾಡಿದ್ದರೂ, ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಗಾಳಿ, ಮಳೆಯಿಂದಾಗಿ ಜನರ ಬದುಕು ಮತ್ತೆ ಬೀದಿಗೆ ಬರುವಂತಾಗಿದೆ. ಅಧಿಕಾರಿಗಳು ಕೇವಲ ಭರವಸೆ ಮಾತ್ರ ಕೊಡುತ್ತಿದ್ದಾರೆಯೇ ವಿನಃ, ಸಮಸ್ಯೆ ಪರಿಹರಿಸುವ ಕೆಲಸ ಮಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದಿಂದಲೇ ಆಶ್ರಯ ಮನೆ ಕಟ್ಟಿ ಕೊಡುವುದಾಗಿ ಭರವಸೆ ನೀಡಿದ್ದರೂ, ಪ್ರಯೋಜನ ಮಾತ್ರ ಶೂನ್ಯ. ಬಸ್ ಸೌಲಭ್ಯ, ಕುಡಿಯುವ ನೀರಿನ ಪೂರೈಕೆ ಇಲ್ಲ. ಶಾಲೆಗಳಿಲ್ಲಿ, ರಸ್ತೆಗಳಿಲ್ಲ ಎಂಬುದೂ ಸೇರಿದಂತೆ
ಹಲವು ಸಮಸ್ಯೆಗಳ ಕುರಿತಂತೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಾಮೇಗೌಡ ಅವರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಸೂಕ್ತ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದರು. ಈ ವೇಳೆ ಮನೆಯನ್ನ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ಒಂದು ಮಳೆಗೆ ಸಂಪೂರ್ಣ ಅಲ್ಲಿರುವ ತಾತ್ಕಾಲಿಕ ಶೆಡ್ಗಳು ಬಿದ್ದಿವೆ.
ವಿದ್ಯುತ್ ಕಂಬಗಳು ಸಹ ನೆಲಕ್ಕೆ ಉರುಳಿವೆ. ತಕ್ಷಣ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ಬಿಟ್ಟು ಕಾರ್ಯರೂಪಕ್ಕೆ
ತರಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆಯು ಮಹಾನಗರ ಪಾಲಿಕೆ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಕಳೆದ 2-3 ದಿನದಿಂದ ಭಾರೀ ಸಿಡಿಲು, ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ತಾತ್ಕಾಲಿಕವಾಗಿ ನಮಗೆ ನೀಡಿದ್ದ ತಾಡುಪಾಲು ಹರಿದು ಹೋಗಿವೆ. ತಗಡು ಗಾಳಿ ಹೊಡೆತಕ್ಕೆ ಕಿತ್ತು ಹೋಗಿವೆ. ಆಕಸ್ಮಾತ್ ಹೀಗೆ ನಾವು
ಇರುವಂತಹ ಪ್ರದೇಶದಲ್ಲಿ ಏನಾದರೂ ಅನಾಹುತ, ಅಪಾಯ, ಸಾವು ನೋವು ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬಲವಂತವಾಗಿ ಹೆಗಡೆ ನಗರ ನಿವಾಸಿಗಳನ್ನು ಇಲ್ಲಿ ಸ್ಥಳಾಂತರಿಸಿದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ,
ಆಯುಕ್ತರು ಸೇರಿದಂತೆ ಅಧಿಕಾರಿಗಳು ಒಂದೇ ಒಂದು ದಿನ ಬಂದು, ಹೆಗಡೆ ನಗರ ಸಂತ್ರಸ್ಥರು ಬಾಳಿದ ನಿರ್ಜನ ಪ್ರದೇಶದಲ್ಲಿ ಬದುಕಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ನೂರಾರು ಕುಟುಂಬಗಳಿಗೆ ಸಂಕಷ್ಟ: ರಾಮಕೃಷ್ಣ ಹೆಗಡೆ ನಗರದ ನೂರಾರು ಸಂತ್ರಸ್ಥ ಕುಟುಂಬಗಳು ಸಾಮಾನು, ಸರಂಜಾಮು ಸಮೇತ ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದ ಮೂಲ ಸ್ಥಳಕ್ಕೆ ಮರಳಿವೆ. ನಗರ, ಜಿಲ್ಲೆಯಾದ್ಯಂತ ವಿವಿಧೆಡೆ ಮಳೆ ಬಿಟ್ಟು ಬಿಡದೇ ಸುರಿದಿದೆ. ಇನ್ನು ಆಗಾಗ ಮಿಂಚು, ಗುಡುಗು, ಸಿಡಿಲಿನ ಆರ್ಭಟದ ಮಧ್ಯೆ ಜೋರು ಗಾಳಿಯಿಂದಾಗಿ ಹೆಗಡೆ ನಗರ ನಿವಾಸಿಗಳು ತಮ್ಮನ್ನು ಸ್ಥಳಾಂತರಿಸಿದ್ದ ಸ್ಥಳದಲ್ಲಿ ರಾತ್ರಿ ಇಡೀ ತೀವ್ರ ಸಂಕಷ್ಟ ಅನುಭವಿಸಿದರು.
ವಿದ್ಯುತ್ ಕಂಬಗಳು ಧರೆಗುರುಳಿ, ಶೀಟ್ಗಳು ಕಿತ್ತು ಹೋಗಿದ್ದರಿಂದಾಗಿ ದಿಕ್ಕು ತೋಚದಂತಾದ ಹಲವಾರು ಕುಟುಂಬ ರಾತ್ರೋರಾತ್ರಿ ಹೆಗಡೆ ನಗರಕ್ಕೆ ಮರಳಿವೆ.
ಐದು ತಿಂಗಳ ಹಿಂದೆ ಜಿಲ್ಲಾಡಳಿತ, ನಗರ ಪಾಲಿಕೆಯಿಂದ ಪೊಲೀಸ್ ಬಂದೋಬಸ್ತ್ನಲ್ಲಿ ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದ ನಿವಾಸಿಗಳು ಜಿಲ್ಲಾ ಕೇಂದ್ರದಿಂದ ಏಳೆಂಟು ಕಿಲೋ ಮೀಟರ್ ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದ್ದವು. ಅಲ್ಲಿ ಮನೆ ಕಟ್ಟಿಕೊಡುವವರೆಗೆ ತಾತ್ಕಾಲಿಕವಾಗಿ ತಗಡಿನ ಶೆಡ್ಗಳನ್ನು ನಿರ್ಮಿಸಿ, ಸಂತ್ರಸ್ಥರಿಗೆ ಉಳಿಯಲು ವ್ಯವಸ್ಥೆ ಮಾಡಿದ್ದವು.
ಬೇಸಿಗೆಯಲ್ಲಿ ಉರಿಬಿಸಿಲಿನಲ್ಲೂ ಜೀವನ ನಡೆಸಿದ್ದ ಸಂತ್ರಸ್ಥರು, ಮಳೆಯಿಂದಾಗಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಹ ಸ್ಥಿತಿ ತಲುಪಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ?: ಹೆಗಡೆ ನಗರದಲ್ಲಿ ನೆರಕೆ ಗೋಡೆ, ಮಣ್ಣಿನ ಪುಟ್ಟ ಗೂಡು ಕಟ್ಟಿಕೊಂಡು ಜೀವನ ನಡೆಸಿದ್ದೆವು. 5 ತಿಂಗಳ ಹಿಂದೆ ಏಕಾಏಕಿ ಅಲ್ಲಿಂದ ಎಲ್ಲರನ್ನೂ ಒಕ್ಕಲೆಬ್ಬಿಸಿ, ಈ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಸ್ಥಳಾಂತರಿಸಿದರು. ಈವರೆಗೆ ನಮಗೆ ಇಲ್ಲಿ ಶುದ್ಧ ನೀರು, ಶೌಚಾಲಯ, ಸಾರಿಗೆ, ಆರೋಗ್ಯ ವ್ಯವಸ್ಥೆ, ಮಕ್ಕಳ ಶಿಕ್ಷಣ, ಪಡಿತರ ವ್ಯವಸ್ಥೆ ಹೀಗೆ ಯಾವುದೇ ಮೂಲ ಸೌಕರ್ಯ ನೀಡದೇ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಸುಮಾರು 500 ಕುಟುಂಬಗಳ ಜೀವನವೇ ಅತಂತ್ರವಾಗಿದೆ. ನಾವು ಯಾರ ಬಳಿ ನಮ್ಮ ದುಃಖ ದುಮ್ಮಾನ ಹೇಳಿಕೊಳ್ಳಬೇಕು ಎಂದು ಜನರು ಪ್ರಶ್ನಿಸಿದ್ದಾರೆ.












Click it and Unblock the Notifications