ದಾವಣಗೆರೆಯಲ್ಲಿ ಗಾಳಿ, ಮಳೆ ಅಬ್ಬರ: ಉಕ್ಕಿ ಹರಿದ ತುಂಗಾಭದ್ರಾ, ಪ್ರವಾಹ ಭೀತಿ

ದಾವಣಗೆರೆ, ಜುಲೈ 24: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದು, ತುಂಗಾಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಒಣಗಿ ಹೋಗಿದ್ದ ತುಂಗಾಭದ್ರಾ ನದಿಗೆ ಜೀವಕಳೆ ಬಂದಿದೆ.

ತುಂಗಾ ಡ್ಯಾಂನಿಂದ 57 ಸಾವಿರಕ್ಕೂ ಅಧಿಕ ನೀರನ್ನು ನೀರು ಹೊರ ಬಿಡಲಾಗುತ್ತಿದ್ದು, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ನದಿ ಪಾತ್ರದ ಸುಮಾರು 13 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ. ಹರಿಹರ ತಾಲೂಕಿನ ಪ್ರಸಿದ್ಧ ದೇಗುಲ ಶ್ರೀ ಕರಿಬಸವೇಶ್ವರ ಸ್ವಾಮಿ ಸನ್ನಿಧಾನವೂ ಜಲಾವೃತಗೊಂಡಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಆಡಳಿತ ಮಂಡಳಿ ಮುನ್ಸೂಚನೆ ಕೊಟ್ಟಿದೆ.

heavy-rain-in-davangere

ಮಲೇಬೆನ್ನೂರಿನಲ್ಲಿ ಮಳೆ ಆರ್ಭಟಕ್ಕೆ ನದಿಯ ಹರಿವು ಸತತವಾಗಿ ಹೆಚ್ಚುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸಮೀಪದ ಉಕ್ಕಡಗಾತ್ರಿ ಕ್ಷೇತ್ರ ಸಂಪರ್ಕಿಸುವ ಫತ್ಯಾಪುರ ರಸ್ತೆ ಹಾಗೂ ಸೇತುವೆ, ಸುಕ್ಷೇತ್ರದ ನದಿ ದಂಡೆಯಲ್ಲಿದ್ದ ಹೂ, ತೆಂಗಿನಕಾಯಿ ಮಾರಾಟ ಮಳಿಗೆಗಳು ತುಂಗಾಭದ್ರಾ ನದಿ ಪ್ರವಾಹದಲ್ಲಿ ಮುಳುಗಿದೆ. ಖಾಸಗಿ ವಾಹನಗಳು, ಸಾರಿಗೆ ಸಂಸ್ಥೆಯ ಬಸ್ಸು ಹಾವೇರಿ ಜಿಲ್ಲೆಯ ತುಮ್ಮಿನಕಟ್ಟೆ ಗ್ರಾಮದ ಮೂಲಕ ಸಂಚರಿಸುತ್ತಿವೆ.

ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆ ಮುಂದುವರಿದಿದೆ. ತುಂಗಾ ಅಣೆಕಟ್ಚಿನಿಂದ ಇದೇ ರೀತಿ ಹೆಚ್ಚಿನ ನೀರು ಹೊರ ಬಿಟ್ಟರೆ ಹಾಗೂ ಸತತವಾಗಿ ಮಳೆ ಸುರಿದರೆ ಹೆಚ್ಚಿನ ಅನಾಹುತ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವೂ ಬಿರುಸಿನಿಂದ ಸಾಗಿದೆ. ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಗೋವಿನಹಾಳು, ನಂದಿಗುಡಿ, ಉಕ್ಕಡಗಾತ್ರಿ, ಪಾಳ್ಯ, ಎಳೆಹೊಳೆ ಗ್ರಾಮದ ಭತ್ತದ ಗದ್ದೆ ತೋಟ ತುಂಗಾಭದ್ರಾ ನದಿ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.

ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರದ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ.

ಮಳೆ ಹೀಗೆ ಮುಂದುವರಿದರೆ ಹಾಗೂ ತುಂಗಾ ಡ್ಯಾಂನಿಂದ ಹೆಚ್ಚು ನೀರು ಹೊರಬಿಟ್ಟರೆ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇರುವುದರಿಂದ ನದಿಪಾತ್ರದ ವಾಸಿಗಳಾದ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ನಿವಾಸಿಗಳ ಮನವೊಲಿಸಿ ಬೇರೆ ಕಡೆ ಸ್ಥಳಾಂತರಿಸುವ ಕುರಿತಂತೆಯೂ ಚಿಂತಿಸಲಾಗುತ್ತಿದೆ.

ಹರಿಹರ ಪಟ್ಟಣದ ಗಂಗಾನಗರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕುರಿತಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವರುಣನ ಆರ್ಭಟ ಮುಂದುವರಿದರೆ ತುಂಗಾಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುವುದು ಖಚಿತ. ಹಾಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನೀರಿನ ಮಟ್ಟ ಹೆಚ್ಚಾದಂತೆ ಮೊಸಳೆಗಳು ಹೊರ ಬರುತ್ತವೆ. ಹೊಳೆ ನೀರಿನಲ್ಲಿ ಜನರು, ಜಾನುವಾರುಗಳು ಕೊಚ್ಚಿ ಹೋಗುವ ಭಯವೂ ಇದೆ. ನದಿ ಪಾತ್ರದ ಜನರು ಈಗಾಗಲೇ ಸೂಚನೆ ಕೊಡಲಾಗಿದೆ. ಸಾಸ್ವೆಹಳ್ಳಿ, ಚೀಲೂರು, ಅನಗವಾಡಿ, ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠ ಸೇರಿದಂತೆ ಹಲವೆಡೆ ಪ್ರತಿವರ್ಷವೂ ತುಂಗಾಭದ್ರಾ ನದಿ ಉಕ್ಕಿ ಹರಿಯುವುದರಿಂದ ಸಮಸ್ಯೆ ಎದುರಿಸುವ ಗ್ರಾಮಗಳಾಗಿವೆ.

ಈ ಹಿನ್ನೆಲೆಯಲ್ಲಿ ಪ್ರವಾಹ ಆಗದಂತೆ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 450 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದ್ರೂ, ಈ ಯೋಜನೆ ಕಾರ್ಯಗತಕ್ಕೆ ಬಂದಿಲ್ಲ. ನೆರೆ ಸಮಸ್ಯೆ ಇಲ್ಲಿ ಪ್ರತಿವರ್ಷವೂ ಕಾಡುತ್ತದೆ.

ಜಿಲ್ಲೆಯಲ್ಲಿಯೂ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಮಲೆನಾಡು ಭಾಗದಲ್ಲಿಯೂ ಮಳೆ ಹೆಚ್ಚಿದ್ದು, ದಿನ ಕಳೆದಂತೆ ಪ್ರವಾಹ ಭೀತಿಯೂ ಹೆಚ್ಚುತ್ತಿದೆ. ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಜನರು ಪ್ರವಾಹ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ

ಭಾರೀ ಮಳೆ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹರಿಹರ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಿಗೂ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+