ಮೋದಿ ಜನತಾ ಕರ್ಫ್ಯೂಗೆ ಎಚ್ ಡಿಡಿ ಸ್ವಾಗತ
ದಾವಣಗೆರೆ, ಮಾರ್ಚ್ 21: ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿರುವ ಜನತಾ ಕರ್ಫ್ಯೂವನ್ನು ಎಲ್ಲಾ ವಿರೋಧ ಪಕ್ಷದವರು ಸ್ವಾಗತಿಸಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಸ್ವಾಗತಿಸಿದ್ದಾರೆ. ಯಾರೂ ವಿರೋಧಿಸಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊರೊನಾ ಜಾಗೃತಿ ಬಗ್ಗೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ದಾವಣಗೆರೆಯ ಜಿಲ್ಲೆಯಲ್ಲಿ ಸಾಕಷ್ಟು ಕೊರೊನಾ ಭೀತಿ ಇದೆ. ಜಾಗೃತಿ ಮೂಡಿಸುವ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದೀರಿ, ತುಂಬಾ ಸಂತೋಷವಾಗಿದೆ" ಎಂದರು.
ಜನತಾ ಕರ್ಫ್ಯೂ; ಸುಮ್ಮನೆ ತಿರುಗಾಡಿದರೆ ಬೀಳತ್ತೆ ಕೇಸು
"ಜಿಲ್ಲೆಯಲ್ಲಿ ಅಂಗಡಿ ಬಂದ್ ಮಾಡಿದರೆ ಅಂಗಡಿ ಮಾಲೀಕರಿಗೆ ವೈಯಕ್ತಿಕವಾಗಿ ಒಳ್ಳೆಯದಾಗುತ್ತದೆ. ಕೊರೋನಾ ಬಗ್ಗೆ ದೇವಸ್ಥಾನ, ಮಸೀದಿ, ಚರ್ಚ್ ಗೆ ಹೋಗುವವರಿಗೆ ಮಾಹಿತಿ ನೀಡಿ. ಇದೇ ಮೊದಲ ಬಾರಿ ದೇವಸ್ಥಾನ, ಚರ್ಚ್, ಮಸೀದಿ ಬಂದ್ ಆಗಿದೆ. ಅದರಲ್ಲೂ ಪ್ರಾಣದ ಹಂಗು ತೊರೆದು ಅಮರನಾಥನ ದರ್ಶನ ಪಡೆಯಲು ಹೋಗುತ್ತಿದ್ದರು. ಆದರೆ ಅದನ್ನು ಕೂಡ ಬಂದ್ ಮಾಡಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ" ಎಂದರು.
"ಕೊರೊನಾ ದೇಶದಲ್ಲಿ ಮೂರನೇ ಹಂತಕ್ಕೆ ಬಂದರೆ ನಾವು ಇಲ್ಲಿ ಸಭೆ ಮಾಡಲೂ ಆಗುವುದಿಲ್ಲ. ಜನರಿಗೆ ಜಾಗೃತಿ ಮಾಡುತ್ತಿದ್ದೀರಿ ನಿಜ. ಹಳ್ಳಿ ಜನರಿಗೆ ಇದರ ಬಗ್ಗೆ ಕಲ್ಪನೆ ಇಲ್ಲ. ನಾವು ಸಮಾಜ ಸೇವೆ ಮಾಡುತ್ತಿದ್ದೇವೆ. ಜಾಗೃತಿ ಮಾಡಿದರೆ ಸಾಲದು, ಅವರಿಗೆ ಮನಸ್ಸಿನಲ್ಲಿ ಬರುವಂತೆ ತಿಳಿ ಹೇಳಬೇಕು. ಏನೂ ಆಗೋಲ್ಲ ಎನ್ನುವ ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಆದರೆ ನಾವು ಮೊದಲೇ ಜಾಗೃತಿ ಮೂಡಿಸಿದ್ದರಿಂದ ಸೇಫ್ ಆಗಿದ್ದೇವೆ" ಎಂದರು.