ಹರಿಹರದಲ್ಲಿ ಜನವರಿ 14, 15ಕ್ಕೆ ಹರಜಾತ್ರೆ: "ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ"ಕ್ಕೆ ಸಜ್ಜು
ದಾವಣಗೆರೆ, ಡಿಸೆಂಬರ್, 21: ಹರಿಹರದ ಪಂಚಮಸಾಲಿ ಪೀಠದಲ್ಲಿ ಜನವರಿ 14 ಮತ್ತು 15ಕ್ಕೆ ಪ್ರತಿ ವರ್ಷದಂತೆ ಹರಜಾತ್ರೆ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಅಖಂಡ ವೀರಶೈವ ಲಿಂಗಾಯತರಿಗೆ ಕೇಂದ್ರದ ಒಬಿಸಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ "ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ"ವನ್ನು ಆಯೋಜಿಸಲು ತೀರ್ಮಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ವಚನಾನಂದ ಶ್ರೀಗಳು, ಪ್ರಾಣಬಿಟ್ಟೇವು, ಮೀಸಲಾತಿ ಬಿಡಲಾರೆವು. ಮೀಸಲಾತಿ ಕೊಡಿ, ಇಲ್ಲ ಮಡಿ ಎಂಬುದು ನಮ್ಮ ಧ್ಯೇಯವಾಕ್ಯವಾಗಬೇಕು ಎಂದರು.
2ಎ ಮೀಸಲಾತಿಗಾಗಿ ಪಟ್ಟು
ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದ್ದಿದ್ದು, ಸಭೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಲೇಬೇಕು. ಈ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗಿದೆ. ಮೀಸಲಾತಿ ನೀಡುವವರೆಗೂ ವಿರಮಿಸುವುದು ಬೇಡ. ಸಮಾಜಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿರುವ ಹಕ್ಕು ಪಡೆಯಲೇಬೇಕಿದೆ. ಆದ್ದರಿಂದ ಸರ್ಕಾರಕ್ಕೆ ಕಾಲಾವಕಾಶ ನೀಡೋಣ. ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ. ನಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಿ ಮೀಸಲಾತಿ ಪಡೆದುಕೊಳ್ಳೋಣ ಎಂದು ಸಮಾಜದ ಮುಖಂಡರು ಅಭಿಪ್ರಾಯಪಟ್ಟರು.
ನಮ್ಮ ಬೇಡಿಕೆ ಗೌರವಿಸದಿದ್ದರೆ ಸರ್ಕಾರಕ್ಕೆ ಪೆಟ್ಟು ಕೊಡುವುದು ಶತಸಿದ್ಧ: ಪಂಚಮಸಾಲಿ ಮುಖಂಡ ಎಚ್.ಎಸ್. ಶಿವಶಂಕರ್
ಪ್ರಾಣ ಬಿಟ್ಟೇವು, ಮೀಸಲಾತಿ ಬಿಡಲಾರೆವು
ಇದಕ್ಕೆ ಪ್ರತಿಕ್ರಿಯಿಸಿದ ವಚನಾನಂದ ಶ್ರೀಗಳು, ಪ್ರಾಣಬಿಟ್ಟೇವು, ಮೀಸಲಾತಿ ಬಿಡಲಾರೆವು. ಮೀಸಲಾತಿ ಕೊಡಿ, ಇಲ್ಲ ಮಡಿ ಎಂಬುದು ನಮ್ಮ ಧ್ಯೇಯವಾಕ್ಯವಾಗಬೇಕು. ಹೆಚ್ಚು ಕೃಷಿಕರನ್ನೇ ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ಆರ್ಥಿಕ, ಶೈಕ್ಷಣಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಸಿಗಬೇಕಾದರೆ 2ಎ ಮೀಸಲಾತಿ ಸಿಗಲೇಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆಗೆ ಮುನ್ನವೇ ಯಾವುದೇ ಕಾನೂನು ತೊಡಕು ಎದುರಾಗದಂತೆ ನಮ್ಮ ಸಮಾಜಕ್ಕೆ ಮೀಸಲಾತಿ ದೊರಕಿಸಿಕೊಡುವ ವಿಶ್ವಾಸ ಇದೆ ಎಂದು ಹೇಳಿದರು.
ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ
ಇದೇ ಸಂಧರ್ಭದಲ್ಲಿ ಜನವರಿ 14 ಮತ್ತು 15ರ ಹರಜಾತ್ರೆ ನಿಮಿತ್ಯ ನಡೆಯುವ ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಂದ್ರ ಕಡಕೋಳ, ಜಂಟಿ ಕಾರ್ಯದರ್ಶಿಯಾಗಿ ಮಂಜುನಾಥ ಮಾಗಡಿ, ಸಂಘ ಮತ್ತು ಪೀಠದ ಸಮನ್ವಯಕಾರರಾಗಿ ಸೋಮನಗೌಡ ಪಾಟೀಲ, ಖಜಾಂಚಿಯಾಗಿ ಮಲ್ಲಿನಾಥ ಹಾಗೂ ಜ್ಯೋತಿ ಪ್ರಕಾಶ್ ಅವರನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ .ಉಮಾಪತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ. ಪಿ. ಪಾಟೀಲ್, ಮಾಜಿ ರಾಜ್ಯಾಧ್ಯಕ್ಷರಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರ, ಉಪಾಧ್ಯಕ್ಷರಾದ ಶಂಕರಗೌಡ, ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಧರ್ಮದರ್ಶಿ ಪಿ. ಡಿ. ಶಿರೂರ, ಮಹೇಶ್ ಹಾವೇರಿ, ನಾಗರಾಜ್, ಕಳಕನಗೌಡ, ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೂಜಾರ, ಯುವಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ನವಲಗುಂದ ಹಾಗೂ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ವಿವಿಧ ಜಿಲ್ಲೆಯ ಮಹಿಳಾ ಘಟಕದವರು, ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.