ಸಿದ್ದರಾಮಯ್ಯ ಸಿಎಂ ಆಗುವ ಮುನ್ಸೂಚನೆ ಕೊಟ್ಟಿದ್ದೇ ಬೆಣ್ಣೆನಗರಿ ದಾವಣಗೆರೆ: ಹೇಗೆ ಅಂತೀರಾ? ಇಲ್ಲಿದೆ ಕುತೂಹಲಕರ ವರದಿ
ದಾವಣಗೆರೆ, ಮೇ, 18: ಮಧ್ಯ ಕರ್ನಾಟಕದ ಹೆಬ್ಬಾಗಿಲಾಗಿರುವ ದಾವಣಗೆರೆಯು ರಾಜಕಾರಣದ ಇತಿಹಾಸದಲ್ಲಿ ಎಲ್ಲಾ ಪಕ್ಷಗಳಿಗೂ ಅದೃಷ್ಟದ ನೆಲ ಆಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ನಂಬಿರುವುದು ಹಳೆಯ ವಿಚಾರ. ಆದರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಆಗಿದ್ದಾರೆ. ಈ ಬಾರಿ ಸಿಎಂ ಗಾದಿಗೇರಲು ಸಿದ್ದರಾಮಯ್ಯರಿಗೆ ಕಾರಣವಾಗಿದ್ದೇ ಸಿದ್ದರಾಮೋತ್ಸವ ಅಂದರೆ ತಪ್ಪಾಗುವುದಿಲ್ಲ.
ರಾಹುಲ್ ಗಾಂಧಿ ಅವರು ಕೂಡ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಸೇರಿದ್ದ ಜನರನ್ನು ಕಂಡು ಬೆರಗಾಗಿದ್ದರು.ರಾಜ್ಯದ ಇತಿಹಾಸದಲ್ಲಿ ನಾಯಕನೊಬ್ಬನ ಹುಟ್ಟುಹಬ್ಬ ಆಚರಣೆಗೆ ಸಿಕ್ಕ ಸ್ಪಂದನೆ, ಸೇರಿದ ಜನಸ್ತೋಮ ಇದಕ್ಕೆ ಸಾಕ್ಷಿ. ಮಾಜಿ ಸಿಎಂ ಬಂಗಾರಪ್ಪ ಅವರು ಕೆಸಿಪಿ ಪಕ್ಷ ಕಟ್ಟಿದ್ದಾಗ ಜನಸ್ತೋಮವೇ ಸೇರಿತ್ತು. ಸಿದ್ದರಾಮೋತ್ಸವದ ಯಶಸ್ಸು ಅಷ್ಟೇ ಇತಿಹಾಸ ಸೃಷ್ಟಿಸಿತ್ತು.

ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಸಂಭ್ರಮ
ದಾವಣಗೆರೆಯಲ್ಲಿ ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವ ನಡೆಯಿತು. ಈ ಮಹೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಈ ಜನಸಾಗರ ಕಂಡು ಸ್ವತಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಚ್ಚರಿಪಟ್ಟಿದ್ದರು. ಅಲ್ಲದೆ ಮಳೆ ನಡುವೆಯೂ ಜನರು ಬಂದಿದ್ದು ಸಂಘಟಕರ ನಿರೀಕ್ಷೆಗೂ ಹೆಚ್ಚಿನದ್ದಾಗಿತ್ತು.
ಕಾಂಗ್ರೆಸ್ಗೆ ನವಚೈತನ್ಯ ತಂದುಕೊಟ್ಟಿದ್ದೇ ಸಿದ್ದರಾಮೋತ್ಸವ ಎಂದರೆ ತಪ್ಪಾಗುವುದಿಲ್ಲ. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೂ ವಿರೋಧ ಪಕ್ಷದ ನಾಯಕನ ಹುಟ್ಟುಹಬ್ಬಕ್ಕೆ ಜನರು ಸೇರಿದ್ದ ಪರಿ ಅಧಿಕಾರದಲ್ಲಿದ್ದ ನಾಯಕರ ಹುಬ್ಬೇರುವಂತೆ ಮಾಡಿತ್ತು. ಹತ್ತಕ್ಕೂ ಹೆಚ್ಚು ಕಿಲೋ ಮೀಟರ್ವರೆಗೆ ಜನವೋ ಜನ. ರಾಹುಲ್ ಗಾಂಧಿ, ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ನಾಯಕರು ಸಮಾವೇಶ ಸ್ಥಳಕ್ಕೆ ಬರಲು ಹರಸಾಹಸವೇ ಪಡಬೇಕಾಯಿತು.
ಸಿದ್ದರಾಮಯ್ಯ ಅವರ ಜನಪ್ರಿಯತೆಯ ಅನಾವರಣ
ಇನ್ನು ಸಿದ್ದರಾಮಯ್ಯ ಅವರು ಕಾರಿನಲ್ಲಿ ಕುಳಿತು ವೇದಿಕೆಯತ್ತ ಸಾಗುವವರೆಗೆ ಜನರು ಎರಡೂ ಬದಿಯಲ್ಲಿ ನಿಂತು ಜೈಘೋಷಗಳನ್ನು ಮೊಳಗಿದ್ದರು. ವೇದಿಕೆಯಲ್ಲಿ ಮಾತನಾಡಿದ್ದ ಪ್ರತಿಯೊಬ್ಬ ರಾಜ್ಯ ಕಾಂಗ್ರೆಸ್ ನಾಯಕರು ನಾವು ಇಷ್ಟೊಂದು ಜನರನ್ನು ಯಾವ ಕಾರ್ಯಕ್ರಮದಲ್ಲೂ ನೋಡಿರಲಿಲ್ಲ, ಕಂಡಿರಲಿಲ್ಲ. ವೇದಿಕೆಗೆ ಬರಲು ಇಷ್ಟೊಂದು ಕಷ್ಟ ಪಟ್ಟಿರಲಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರ ಜನಪ್ರಿಯತೆ, ಶಕ್ತಿ, ವಿರಾಟ್ ರೂಪ ಅನಾವರಣಗೊಂಡಿದ್ದು ದಾವಣಗೆರೆ ನೆಲದಲ್ಲಿ ಎಂಬುದು ವಿಶೇಷವಾಗಿದೆ ಎಂದಿದ್ದರು.
ರಾಹುಲ್ ಗಾಂಧಿ ಮಾತನಾಡಿ, ನಾನು ಯಾವಾಗಲೂ ಯಾರ ಹುಟ್ಟುಹಬ್ಬಕ್ಕೂ ಹೋಗುವುದಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ನನಗೆ ವಿಶೇಷ ಪ್ರೀತಿಯಿದೆ. ಆ ಕಾರಣಕ್ಕೆ ಬಂದಿದ್ದೇನೆ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದರು. ಅಲ್ಲದೆ ಇದೇ ವೇಳೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಡುವಿನ ಕಂದಕ ಸರಿಮಾಡುವ ಪ್ರಯತ್ನವನ್ನು ಮಾಡಿದ್ದರು. ನಂತರ ಇಬ್ಬರು ತಬ್ಬಿಕೊಂಡು ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದರು.
ಇನ್ನು ಡಿ ಕೆ.ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಜನರು ಅಷ್ಟೇನೂ ಕೂಗು ಹಾಕಲಿಲ್ಲ. ಯಾವಾಗ ಸಿದ್ದರಾಮಯ್ಯ ಅವರ ಹೆಸರು ಹೇಳಿದರೋ ಆಗ ಮುಗಿಲು ಮುಟ್ಟುವಂತೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯರ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಇದರ ಜೊತೆಗೆ ಸಿದ್ದರಾಮಯ್ಯ ಪರ ಜೈಘೋಷಗಳನ್ನು ಹಾಕಿದರು.
ಹೀಗೆ ಸಿದ್ದರಾಮಯ್ಯ ಅವರ ಪರ ಜೈಕಾರ ಹಾಕಿದ್ದಕ್ಕೆ ವೇದಿಕೆಯಲ್ಲಿದ್ದ ನಾಯಕರೆಲ್ಲರೂ ಬೆರಗಾಗಿದ್ದರು. ಆಗ ರಾಹುಲ್ ಗಾಂಧಿ ಅವರು ಜನರತ್ತ ಮತ್ತೆ ಮತ್ತೆ ನೋಡತೊಡಗಿದರು. ಎಲ್ಲಿ ನೋಡಿದರೂ ಜನರ ಶಿಳ್ಳೆ, ಚಪ್ಪಾಳೆಯದ್ದೇ ಸದ್ದು ಮೊಳಗಿತ್ತು. ಅಲ್ಲದೆ ಸಿದ್ದರಾಮಯ್ಯ ಅವರ ಮೇಲೆ ಜನರು ತೋರಿದ ಪ್ರೀತಿಗೆ ರಾಹುಲ್ ಗಾಂಧಿ ಅವರು ನಿಬ್ಬೆರಗಾಗಿದ್ದರು.
ನಂತರ ಸಿದ್ದರಾಮಯ್ಯ ಅವರ ಭಾಷಣ ಕೇಳಿದ ಜನರು ಹುಚ್ಚೆದ್ದು ಕುಣಿದರು. ಹಾಗೆಯೆ ಸಿದ್ದರಾಮಯ್ಯರು ಎಲ್ಲೇ ಹೋದರೂ ಸಿದ್ದರಾಮಯ್ಯ ಕೀ ಜೈ, ಸಿದ್ದರಾಮಯ್ಯ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಎಷ್ಟೋ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಂತೆ ಜನರಿಂದ ಕೇಕೆ, ಚಪ್ಪಾಳೆಯ ಸದ್ದು ಕೇಳಿಬರುತ್ತಿತ್ತು.
ಸಿದ್ದರಾಮೋತ್ಸವದ ಬಳಿಕ ರಾಹುಲ್ ಗಾಂಧಿ ಅವರು ಸಹ ಸಿದ್ದರಾಮಯ್ಯ ಅವರ ಜನಶಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಸಮಸ್ಯೆ ಆಗಬಾರದು. ಎಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಲುವಾಗಿ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂಬುದನ್ನೂ ಸಹ ಘೋಷಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದು ಸಹ ದಾವಣಗೆರೆ ನೆಲದಲ್ಲಿಯೇ ಎಂಬುದು ವಿಶೇಷ.
ಸಿದ್ದರಾಮಯ್ಯರಿಗೆ ಅಷ್ಟೇ ಇಷ್ಟವಾದ ನೆಲವೆಂದರೆ ಬೆಣ್ಣೆನಗರಿ ದಾವಣಗೆರೆ. ಜೆಡಿಎಸ್ನಿಂದ ಹೊರಬಂದು ಅಹಿಂದ ಸಮಾವೇಶ ಮಾಡಿದಾಗ ದಾವಣಗೆರೆಯಲ್ಲಿ ಸಿಕ್ಕ ಅಭೂತಪೂರ್ವ ಸ್ಪಂದನೆ ಇಂದಿಗೂ ಮರೆತಿಲ್ಲ. ಅದೇ ರೀತಿಯಲ್ಲಿ ಸಿದ್ದರಾಮೋತ್ಸವದ ಯಶಸ್ಸು, ಜನಸ್ಪಂದನೆ, ಜನಸ್ತೋಮವೂ ಇದಕ್ಕೆ ಸಾಕ್ಷಿ ಆಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಹೊರತುಪಡಿಸಿದರೆ ಹೆಚ್ಚು ಜನಸಂಖ್ಯೆ ಇರುವುದು ಕುರುಬ ಸಮಾಜದ್ದು. ಹರಿಹರ, ದಾವಣಗೆರೆ, ಹೊನ್ನಾಳಿ ಸೇರಿದಂತೆ ಬೇರೆ ಬೇರೆ ತಾಲೂಕುಗಳಲ್ಲಿಯೂ ಈ ಸಮಾಜದ ಪಾರುಪತ್ಯ ಇದೆ. ಸಿದ್ದರಾಮಯ್ಯ ಅವರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಸಮಾಜವು ಕಾಂಗ್ರೆಸ್ ಕೈ ಹಿಡಿದಿದೆ. ಹೀಗೆ ಜಿಲ್ಲೆಯಲ್ಲಿ ಆರು ಸ್ಥಾನಗಳು ಬರುವಲ್ಲಿ ಈ ಸಮಾಜದ ಬೆಂಬಲ ಮುಖ್ಯವಾಗಿದ್ದು, ಇದನ್ನು ಅಲ್ಲಗಳೆಯುವಂತಿಲ್ಲ.












Click it and Unblock the Notifications