ದಾವಣಗೆರೆ ಮೂಲದ ಟೆಕ್ಕಿ ಕುಟುಂಬ ಅಮೇರಿಕಾದಲ್ಲಿ ಸಾವು: ಮೃತದೇಹ ತರಿಸಿಕೊಡುವಂತೆ ಸಿಎಂಗೆ ಮನವಿ
ದಾವಣಗೆರೆ, ಆಗಸ್ಟ್ 21: ಅಮೆರಿಕದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಯೋಗೇಶ್ ಹೊನ್ನಾಳ ತಾಯಿ ಶೋಭಾ ಹೊನ್ನಾಳ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಸಿಎಂ ಭೇಟಿಯಾದ ಕುಟುಂಬಸ್ಥರು ಆದಷ್ಟು ಬೇಗ ಮೃತದೇಹಗಳನ್ನು ತರಿಸುವಂತೆ ಕೈ ಮುಗಿದು ವಿನಂತಿಸಿಕೊಂಡರು.
ಶೋಭಾ ಹೊನ್ನಾಳ ಮತ್ತು ಸಂಬಂಧಿಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಘಟನೆ ಕುರಿತಂತೆ ತಮಗಿದ್ದ ಮಾಹಿತಿ ನೀಡಿದರು. ಈ ವೇಳೆ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಹೊನ್ನಾಳ ಸಾವಿನ ಕುರಿತಂತೆ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಲ್ಲಿನ ಪೊಲೀಸರು ಶೂಟ್ ಡೆಡ್ ಎಂದಷ್ಟೇ ಹೇಳಿದ್ದಾರೆ. ಸ್ಪಷ್ಟತೆ ದೊರೆಯುತ್ತಿಲ್ಲ ಎಂದು ವಿವರಿಸಿದ್ದಾರೆ.

ಮೇಲಾಗಿ ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದರೆ ಆಗುತ್ತದೆ. ಈ ಕಾರಣಕ್ಕೆ ತಮ್ಮನ್ನು ಭೇಟಿ ಮಾಡಿದ್ದು, ಆದಷ್ಟು ಬೇಗ ಮೃತದೇಹಗಳನ್ನು ತರಿಸಿಕೊಡುವಂತೆ ಭಾರತಿ ಅವರು ಕೈ ಮುಗಿದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಮೃತ ದೇಹಗಳನ್ನು ಇಲ್ಲಿಗೆ ತರಿಸುವುದು ಸೇರಿದಂತೆ ಹಲವು ತಾಂತ್ರಿಕ ನೆರವು ಕೋರಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು. ಅಮೆರಿಕಾದಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಆದಷ್ಟು ಬೇಗ ಮೃತದೇಹ ತರಿಸಿಕೊಡುವ ಭರವಸೆ ನೀಡಿದರು. ಮಾತ್ರವಲ್ಲ, ಅಗತ್ಯ ನೆರವು ಒದಗಿಸುವಂತೆ ಮುಖ್ಯಮಂತ್ರಿಗಳು ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸೂಚಿಸಿದರು.

ಅಮೆರಿಕಾದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಹಾಗೂ ಮಗು ಅಸ್ವಾಭಾವಿಕ ಸಾವಿಗೆ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ನ ನಿವಾಸಿಗಳು, ಸ್ನೇಹಿತರು, ಸಂಬಂಧಿಕರು, ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅತ್ಯಂತ ಮುದ್ದಾದ ಕುಟುಂಬದ ದುರಂತ ಸಾವಿಗೆ ಕಂಬನಿ ಮಿಡಿದರು. ಕ್ಯಾಂಡಲ್ ಹಿಡಿದು ಕಣ್ಣೀರು ಸುರಿಸುತ್ತಾ ಸಂತಾಪ ಸೂಚಿಸಿದರು.
ಅಮೆರಿಕಾದಲ್ಲಿನ ಸಂಪ್ರದಾಯದಂತೆ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ, ಪುತ್ರ ಯಶ್ ಹೊನ್ನಾಳ ಫೋಟೋ ಇಟ್ಟು, ಕ್ಯಾಂಡಲ್ಗಳನ್ನು ಹಚ್ಚಿ ಸಂತಾಪ ಸೂಚಿಸಲಾಯಿತು. ಈ ವೇಳೆ ಮೃತರ ಆತ್ಮಕ್ಕೆ ಅಮೆರಿಕಾದ ಸಂಪ್ರದಾಯದಂತೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು.

ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ನ ಅಕ್ಕಪಕ್ಕದ ನಿವಾಸಿಗಳು, ಸ್ನೇಹಿತರು, ಅಮೆರಿಕಾದಲ್ಲಿಯೇ ಇದ್ದ ಕೆಲ ಸಂಬಂಧಿಕರು ಯೋಗೇಶ್ ಹೊನ್ನಾಳ ನೆಲೆಸಿದ್ದ ಮನೆಯೊಳಗೆ ಭಾವಚಿತ್ರಗಳನ್ನು ಇಟ್ಟು ಹೂವಿನಿಂದ ಅಲಂಕರಿಸಿ, ಕ್ಯಾಂಡಲ್ ಹಚ್ಚಿ ನೋವಿನಿಂದಲೇ ಶ್ರದ್ಧಾಂಜಲಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ನೆರೆಹೊರೆಯವರು, ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಅನೋನ್ಯವಾಗಿದ್ದರು. ಎಲ್ಲರೊಟ್ಟಿಗೆ ಬೆರೆಯುತ್ತಿದ್ದವರು. ಯಾರನ್ನೂ ಎದುರು ಹಾಕಿಕೊಂಡವರಲ್ಲ. ಒಳ್ಳೆಯ ಕುಟುಂಬವಾಗಿತ್ತು. ನೆರೆಹೊರೆಯವರ ಜೊತೆಗೂ ಉತ್ತಮ ಬಾಂಧವ್ಯ ಇತ್ತು. ಯೋಗೇಶ್ ಹಾಗೂ ಪ್ರತಿಭಾ ಅವರು ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ, ಏನಾಯ್ತು ಎನ್ನುವುದು ಇನ್ನೂ ಗೊತ್ತಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಯಶ್ ಫೋಟೋ ನೋಡಿ ಕಣ್ಣೀರು
ಯೋಗೇಶ್ ಹೊನ್ನಾಳ ಮನೆಯಲ್ಲಿ ದಂಪತಿಯ ಫೋಟೋ ಹಾಗೂ ಯಶ್ ಫೋಟೋವನ್ನು ಇಡಲಾಗಿತ್ತು. ಆದರೆ, ಗೋಡೆಯ ಮೇಲಿದ್ದ ಯಶ್ ಫೋಟೋ ನೋಡಿ ನೆರೆಹೊರೆಯವರು ಕಣ್ಣೀರು ಹಾಕಿದ್ದಾರೆ. ಎಂಟು ದಿನಗಳ ಹಿಂದೆ ಇದ್ದವರು ಇಂದು ಎಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿರಲಿಲ್ಲ. ನಾವು ನಮ್ಮ ಕೆಲಸದಲ್ಲಿ ಬ್ಯುಸಿ ಇದ್ದೆವು. ಯಾವಾಗ ಪೊಲೀಸರು ಬಂದರೋ ಆಗಲೇ ಈ ವಿಷಯ ಗೊತ್ತಾಗಿದ್ದು. ನಮಗೂ ಈ ಸಾವು ಹೇಗಾಯ್ತು ಎಂಬ ಕುತೂಹಲದ ಜೊತೆಗೆ ಆತಂಕವೂ ಇದೆ ಎಂದು ಸ್ಥಳೀಯರು ತಿಳಿಸಿದರು.












Click it and Unblock the Notifications