ಆಟೋ ಚಾಲಕರಿಗೆ 15 ದಿನಗಳ ಡೆಡ್ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ?
ದಾವಣಗೆರೆ, ಜುಲೈ 31: ಆಟೋ ಚಾಲಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಟಫ್ ರೂಲ್ಸ್ ಜಾರಿಗೊಳಿಸಲು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂದಾಗಿದ್ದಾರೆ. ಮಾತ್ರವಲ್ಲ ಆಗಸ್ಟ್ 15 ರವರೆಗೆ ಡೆಡ್ಲೈನ್ ನೀಡಿದ್ದಾರೆ.
ಎಲ್ಲಾ ಆಟೋಗಳಿಗೆ ಮೀಟರ್ನ್ನು ಕಡ್ಡಾಯವಾಗಿ ಅಳವಡಿಸಬೇಕು. ಮೀಟರ್ ಇಲ್ಲದೆ ಆಟೋ ಓಡಿಸಿದರೆ ಇನ್ಮುಂದೆ ನಡೆಯಲ್ಲ. ಸಾರಿಗೆ ಇಲಾಖೆಯ ಕಾನೂನು ಪ್ರಕಾರ ಮೀಟರ್ ಅಳವಡಿಕೆ ಮಾಡಲೇಬೇಕು. 15 ದಿನಗಳೊಳಗೆ ಆಟೋಗಳಿಗೆ ಮೀಟರ್ ಅಳವಡಿಸದೆ ಇದ್ದಲ್ಲಿ ಡ್ರೈವರ್ಗಳ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ.
ಆಟೋ ಚಾಲಕರು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಡಿಮೆ ದೂರ ಇದ್ದರೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ರಾತ್ರಿ ವೇಳೆಯಂತೂ ಜನರಿಂದ ಆಟೋ ಚಾಲಕರು ಬಾಯಿಗೆ ಬಂದಂತೆ ಹಣ ಕೇಳುತ್ತಾರೆ ಎಂಬ ಮಾಹಿತಿಯೂ ಇದೆ. ಈ ಎಲ್ಲಾ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಿ ಪೊಲೀಸ್ ಇಲಾಖೆಯು ಈ ನಿರ್ಧಾರಕ್ಕೆ ಬಂದಿದೆ.

ಎಷ್ಟು ಆಟೋಗಳಿವೆ?
"ದಾವಣಗೆರೆ ನಗರ ತಾಲೂಕಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಎಷ್ಟೋ ಆಟೋರಿಕ್ಷಾ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ. ಇನ್ಶುರೆನ್ಸ್, ವಾಯು ಮಾಲಿನ್ಯ ನಿರಾಪೇಕ್ಷಣ ಪತ್ರವೂ ಇರಲ್ಲ. ಸಮವಸ್ತ್ರವೂ ಧರಿಸಲ್ಲ ಎಂಬುದು ಗಮನಕ್ಕೆ ಬಂದಿದೆ,'' ಎಂದು ಎಸ್ಪಿ ರಿಷ್ಯಂತ್ ಹೇಳಿದರು.
"ಈಗಾಗಲೇ ಆಟೋ ಚಾಲಕರ ಯೂನಿಯನ್ ಹಾಗೂ ಚಾಲಕರ ಸಂಘದ ಮುಖಂಡರ ಜೊತೆ ಎಸ್ಪಿ ಕಚೇರಿಯಲ್ಲಿ ಈಗಾಗಲೇ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಮೀಟರ್ ಚಾರ್ಜ್ 25 ರೂಪಾಯಿ ಇದ್ದರೂ ಕೂಡ 50ರಿಂದ 60 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಬಂದಿದ್ದು, ರಾತ್ರಿ ವೇಳೆಯಲ್ಲೂ ದೂರದಿಂದ ಬಂದವರಿಗೆ ಆಟೋ ಡ್ರೈವರ್ಗಳು ಹೇಳಿದ್ದೇ ರೇಟ್ ಎಂಬುದು ಮರುಕಳಿಸಬಾರದು,'' ಎಂದು ಎಚ್ಚರಿಕೆ ನೀಡಿದರು.

ಕೆಲವರು ಓಕೆ, ಮತ್ತೆ ಕೆಲವರು ವಿರೋಧ!
ಇನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಈ ನಡೆಗೆ ಕೆಲ ಆಟೋ ಡ್ರೈವರ್ಗಳು ಸ್ವಾಗತ ಮಾಡಿದ್ದರೆ, ಮತ್ತೆ ಕೆಲವರು ವಿರೋಧ ಮಾಡಿದ್ದಾರೆ. ಹತ್ತು ಸಾವಿರ ಆಟೋಗಳಿದ್ದರೂ ಬೆರಳೆಣಿಕೆಯಷ್ಟೇ ಮೀಟರ್ ಅಳವಡಿಕೆ ಮಾಡಲಾಗಿದೆ.
"ದಾವಣಗೆರೆಯಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಸಂಚಾರಕ್ಕೆ ತೊಂದರೆ ಆಗುತ್ತೆ. ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿದ್ದು, ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದೇವೆ. ಎರಡು ತಿಂಗಳು ಬಾಡಿಗೆ ಇಲ್ಲದೇ ಕಂಗಾಲಾಗಿದ್ದೇವೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಖರ್ಚು- ವೆಚ್ಚ ನಿರ್ವಹಣೆ ಮಾಡುವುದೇ ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಇಂಥ ಕಠಿಣ ನಿರ್ಧಾರಕ್ಕೆ ಬಂದರೆ ಹೇಗೆ,'' ಎಂಬುದು ಆಟೋ ಚಾಲಕರ ಸಂಘದ ಪ್ರಮುಖ ಬಸವರಾಜ್ ಹೇಳಿದರು.
ಎಸ್ಪಿ ಹೇಳಿದ್ದೇನು?
"ಆಟೋ ಚಾಲಕರಿಗೆ ತೊಂದರೆ ಆಗದಂತೆ ದರ ನಿಗದಿ ಮಾಡೋಣ. ನಾವು ಮಾಡುತ್ತಿರುವುದು ಯಾರಿಗೋ ಸಮಸ್ಯೆ ಮಾಡುವುದಕ್ಕಲ್ಲ. ನೀವು ಕೂಡ ಜನರಿಗೆ ತೊಂದರೆಯಾಗದಂತೆ ವ್ಯವಹರಿಸಿ. ಮೀಟರ್ ಅಳವಡಿಕೆ ಮಾಡಿದರೆ ನಿಮಗೆ ಒಳ್ಳೆಯದು. ವಾಹನದ ಎಲ್ಲಾ ದಾಖಲಾತಿ ಸರಿ ಇದ್ದರೆ ಅಪಘಾತ ಸೇರಿದಂತೆ ಯಾವ ಸಮಸ್ಯೆ ಎದುರಾಗದು. ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಇದನ್ನು ನಿರ್ಲಕ್ಷಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವುದು ಗ್ಯಾರಂಟಿ. ಪ್ರತಿಯೊಬ್ಬ ಆಟೋ ಚಾಲಕರು ಸಹಕರಿಸಬೇಕು. ನಾವು ಕೊಟ್ಟ ಡೆಡ್ಲೈನ್ ಮೀರಿದ ಬಳಿಕ ಸಾರಿಗೆ ಇಲಾಖೆಯ ಜೊತೆ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
Recommended Video
ಈ ಹಿಂದೆಯೂ ಮೀಟರ್ ಅಳವಡಿಕೆ ಕಡ್ಡಾಯ ಮಾಡಿದ್ದರೂ ಪರಿಣಾಮಕಾರಿ ಅನುಷ್ಠಾನಕ್ಕೆ ಬಂದಿಲ್ಲ. ಈಗ ಎಸ್ಪಿ ತೆಗೆದುಕೊಂಡಿರುವ ಈ ಕ್ರಾಂತಿಕಾರಕ ನಿರ್ಧಾರ ಎಷ್ಟು ಯಶಸ್ವಿಯಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications