ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ನಿಂತಿದೆ: ಭೈರತಿ ಬಸವರಾಜ
ದಾವಣಗೆರೆ, ಜನವರಿ 26: ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತ ಸ್ವಾತಂತ್ರ್ಯವಾಗಿದೆ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ತಿಳಿಸಿದರು.
ಸತ್ಯ, ಶಾಂತಿ ಹಾಗೂ ಅಹಿಂಸೆಯಿಂದ ಪ್ರೇರಿತಗೊಂಡು ಅಸ್ತಿತ್ವಕ್ಕೆ ಬಂದ ಭಾರತಕ್ಕೆ ಈಗ 74ರ ಹರೆಯ. ಭಾರತಕ್ಕೆ ಸಂವಿಧಾನ ಪ್ರಾಪ್ತವಾಗಿ 72 ವರ್ಷಗಳು ಸಂದಿದ್ದೂ, ಅವಿಸ್ಮರಣೀಯ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಭೈರತಿ ಬಸವರಾಜ ಹೇಳಿದರು.
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧ: ಡಿಸಿಎಂ ಅಶ್ವಥ್ ನಾರಾಯಣ
ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರೆವೇರಿಸಿ ಮಾತನಾಡಿದ ಅವರು, 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೊನಾದಂತಹ ಸಂದರ್ಭವನ್ನೂ ದೇಶ ಸಮರ್ಥವಾಗಿ ಎದುರಿಸಿ ಜನರ ನೆರವಿಗೆ ಸರ್ಕಾರ ನಿಂತಿದೆ ಎಂದರು.
ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಡಾ.ಅಂಬೇಡ್ಕರ್ ಅವರ ಸೇವೆಗೆ ದೊರೆತ ಮನ್ನಣೆಗೆ ಇವರನ್ನು "ಸಂವಿಧಾನದ ಪಿತಾಮಹ" ಎಂದು ನಾವು ಸ್ಮರಿಸುವಂತಾಗಿದೆ.
ಗಣರಾಜ್ಯವಾದ ತರುವಾಯ ದಾವಣಗೆರೆ ಜಿಲ್ಲೆಯು ಅನೇಕ ಬೆಳವಣಿಗೆಯನ್ನು ಕಂಡಿದೆ. ಈ ಜಿಲ್ಲೆಯ ಇತಿಹಾಸ ನೋಡುವುದಾದರೆ ದಾವಣಗೆರೆ ಜಿಲ್ಲೆಯು ಭೌಗೋಳಿಕವಾಗಿ ಧಾರವಾಡ ಶಿಲಾ ಪದರಿನ ವಿನ್ಯಾಸದ ಮೇಲೆ ರಚನೆಗೊಂಡಿದ್ದು, ಆಗಸ್ಟ್ 15, 1997 ರಲ್ಲಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು.
2020ರ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜಗತ್ತೇ ತಲ್ಲಣಿಸುವಂತೆ ಮಾಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಕಟ್ಟಿಹಾಕಲು ಕಾರ್ಯೋನ್ಮುಖವಾಗಿ ಮಾಡಿದ ವ್ಯವಸ್ಥಿತ ಹೋರಾಟದ ಫಲವಾಗಿ ಇಂದು ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಇದಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸುತ್ತೇನೆ. ಸಾವಿರ ಸಂಖ್ಯೆಯಲ್ಲಿದ್ದ ಕೊರೊನಾ ಪ್ರಕರಣಗಳು ಇಂದು ಎರಡಂಕಿಗೆ ಬಂದಿವೆ.
ಇದೇ ಸಂದರ್ಭದಲ್ಲಿ ಸಂಜೀವಿನಿಯಂತೆ ಬಂದಿರುವ ಲಸಿಕೆ ನಮ್ಮಲ್ಲಿ ಮತ್ತಷ್ಟು ಹುಮ್ಮಸ್ಸನ್ನು ತುಂಬಿದೆ. ಈ ಲಸಿಕೆ ಅಭಿಯಾನವು ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ನಮ್ಮ ಸರ್ಕಾರ ಎಲ್ಲ ಜನ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಕಂಕಣಬದ್ಧವಾಗಿ ಶ್ರಮಿಸಿ, ರೈತರು, ಕಾರ್ಮಿಕರು, ನೇಕಾರರು ಸೇರಿದಂತೆ ದುಡಿಯುವ ವರ್ಗಗಳ ನೆರವಿಗೆ ನಿಂತಿದ್ದು, ಇದೇ ಸಂದರ್ಭದಲ್ಲಿ ಅತಿವೃಷಿಯಿಂದಾದ ಬೆಳೆ, ಮನೆ, ಜಾನುವಾರು ಹಾನಿಗಳಿಗೆ ಪರಿಹಾರವನ್ನು ನೀಡಿ ಎಲ್ಲರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೋವಿಡ್-19ರ ಹೋರಾಟದಲ್ಲಿ ಸೇನಾನಿಗಳಾಗಿ ಕಾರ್ಯನಿರ್ವಹಿಸಿ ಮೃತಪಟ್ಟ ನಾಲ್ಕು ಪೊಲೀಸರ ಕುಟುಂಬಗಳಿಗೆ ತಲಾ 30 ಲಕ್ಷದಂತೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಡಿಎಆರ್ ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳಗಳು ಪೊಲೀಸ್ ವಾದ್ಯವೃಂದದ ಹಿಮ್ಮೇಳದಲ್ಲಿ ಶಿಸ್ತಿನ ಪಥಸಂಚಲನ ನಡೆಸಿದವು.
"ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೋಟಾ)-2003" ರ ಅಡಿಯಲ್ಲಿ ದಾವಣಗೆರೆ ನಗರ ಶೇ.90 ರಷ್ಟು ಅನುಷ್ಠಾನ ಹೊಂದಿರುವ ಪ್ರಯುಕ್ತ 'ತಂಬಾಕು ಮುಕ್ತ ದಾವಣಗೆರೆ ನಗರ' ವನ್ನಾಗಿ ಘೋಷಿಸಿದ್ದು, ಇದಕ್ಕೆ ಶ್ರಮಿಸಿದ ಅಂತರ ಇಲಾಖೆ ಅಧಿಕಾರಿಗಳಿಗೆ ಇದೇ ವೇಳೆ ಗೌರವ ಸ್ಮರಣಿಯನ್ನು ನೀಡಿ ಸನ್ಮಾನಿಸಲಾಯಿತು.
Recommended Video