ದಾವಣಗೆರೆಯಲ್ಲಿ ಸಚಿವ ಸ್ಥಾನದ ಫೈಟ್; ರೇಣುಕಾಚಾರ್ಯ v/s ರವೀಂದ್ರನಾಥ್
ದಾವಣಗೆರೆ, ಜನವರಿ 24; ಜಿಲ್ಲೆಯಲ್ಲಿ ಇಷ್ಟು ದಿನ ಸುಮ್ಮನಿದ್ದ ಬಿಜೆಪಿ ಶಾಸಕರು ಈಗ ಬಹಿರಂಗವಾಗಿಯೇ ಸಚಿವ ಸ್ಥಾನ ನೀಡಬೇಕೆಂಬ ಕೂಗು ಎತ್ತಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಕೆಲವರನ್ನು ಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಿ ಎಂದಿದ್ದಾರೆ.
ಇನ್ನು ಗುಜರಾತ್ ಮಾದರಿನ್ನು ಇಲ್ಲಿಯೂ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಅನುಸರಿಸಬೇಕೆಂಬ ರೇಣುಕಾಚಾರ್ಯರ ಮಾತಿಗೆ ಬಿಜೆಪಿ ಹಿರಿಯ ಶಾಸಕ ಎಸ್. ಎ. ರವೀಂದ್ರನಾಥ್ ಟಾಂಗ್ ಕೊಟ್ಟಿದ್ದಾರೆ. "ಗುಜರಾತ್ ಮಾದರಿ ಅನುಸರಿಸಲಿ, ಆಗ ನಾನು ಇರಲ್ಲ, ರೇಣುಕಾಚಾರ್ಯನೂ ಇರಲ್ಲ" ಎಂದಿದ್ದಾರೆ. ಈ ಮೂಲಕ ಜಿಲ್ಲೆಯ ಶಾಸಕರಿಬ್ಬರಲ್ಲಿ ಭಿನ್ನರಾಗ ಕೇಳಿ ಬಂದಿದೆ.
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಇಲ್ಲ; ಪ್ರಹ್ಲಾದ್ ಜೋಶಿ
ಇನ್ನು ಸಂಸದ ಜಿ. ಎಂ. ಸಿದ್ದೇಶ್ವರ ಸಹ ನನ್ನ ಬಳಿ ಬಂದು ಯಾವ ಶಾಸಕರೂ ಸಚಿವ ಸ್ಥಾನ ಕೇಳಲು ಒತ್ತಡ ಹೇರಿ ಎಂದು ಬಂದಿಲ್ಲ. ನಾನಾಗಿಯೇ ಹೋಗಲು ಆಗುತ್ತಾ? ಗೌರವ ಬೇಡ್ವಾ ನನಗೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರೇಣುಕಾಚಾರ್ಯ, ರವೀಂದ್ರನಾಥ್ ಹಾಗೂ ಸಿದ್ದೇಶ್ವರ ಅವರದ್ದು ಒಂದೇ ವಿಚಾರದಲ್ಲಿ ಸಹಮತ ಇದೆ. ಅದೂ ದಾವಣಗೆರೆ ಜಿಲ್ಲೆಗೆ ಸಂಪುಟ ವಿಸ್ತರಣೆ ವೇಳೆ ಪ್ರಾಧಾನ್ಯತೆ ಕೊಡಬೇಕೆಂಬುದು.
ಡಿಕೆಶಿ ವೇಗ ತಡೆಯಲು ಹಳೇ ದ್ವೇಷ ಮರೆತು ಒಂದಾದ ಯತ್ನಾಳ್, ರೇಣುಕಾಚಾರ್ಯ
ಜಿ. ಎಂ. ಸಿದ್ದೇಶ್ವರ್ ಮಾತನಾಡಿ, "ರೇಣುಕಾಚಾರ್ಯ ಹೇಳುತ್ತಲೇ ಇರುತ್ತಾರೆ, ನಾವು ಕೇಳ್ತಾನೇ ಇರುತ್ತೇವೆ. ಸಚಿವ ಸ್ಥಾನ ನೀಡುವುದು ಬಿಡುವುದು ಸಿಎಂ ಪರಮಾಧಿಕಾರ. ಈ ಬಗ್ಗೆ ನಾನೇನೂ ಹೇಳಲು ಆಗದು. ಸುಮಾರು ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್, ಜೆಡಿಎಸ್ ನಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ" ಎಂದರು.
ದಾವಣಗೆರೆ; ಬಹಿರಂಗವಾಗಿ ಕ್ಷಮೆಯಾಚಿದ ಶಾಸಕ ರೇಣುಕಾಚಾರ್ಯ
ಎಸ್. ಎ. ರವೀಂದ್ರನಾಥ್ ಹೇಳಿದ್ದೇನು?
"ಶಾಸಕ ರೇಣುಕಾಚಾರ್ಯ ಸಚಿವನಾಗಿದ್ದನಲ್ವಾ. ನಾನು ಹೊಸಬರಿಗೆ ಅವಕಾಶ ನೀಡಿ ಎಂದು ಒತ್ತಾಯ ಮಾಡುತ್ತೇನೆ. ಈಗಾಗಲೇ ರೇಣುಕಾಚಾರ್ಯ ಮಂತ್ರಿಯಾಗಿದ್ದಾನೆ. ನಾನು ಏಳು ವರ್ಷ ಮಂತ್ರಿಯಾಗಿದ್ದೆ, ಅದಕ್ಕೆ ಸಚಿವ ಸ್ಥಾನ ಕೊಟ್ಟಿಲ್ಲ" ಎಂದು ರವೀಂದ್ರನಾಥ್ ಅಸಮಾಧಾನ ಹೊರಹಾಕಿದರು.
"ಗುಜರಾತ್ ಮಾದರಿ ಇಲ್ಲಿ ಬಂದರೆ ನಾನು ಇರಲ್ಲ,ರೇಣುಕಾಚಾರ್ಯನೂ ಇರಲ್ಲ. ರೇಣುಕಾಚಾರ್ಯನನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್. ವಿ. ರಾಮಚಂದ್ರಪ್ಪರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನಾನು ಏಳು ವರ್ಷ ಮಂತ್ರಿಯಾಗಿದ್ದ ಕಾರಣ ಸಚಿವ ಸ್ಥಾನ ಕೊಟ್ಟಿಲ್ಲ ಎಂಬುದು ನನ್ನ ಅನಿಸಿಕೆ. ಸಚಿವ ಸ್ಥಾನ ಕೊಟ್ಟರೆ ಸಂತೋಷ, ನೀಡದಿದ್ದರೆ ದುಃಖವೇನೂ ಇಲ್ಲ" ಎಂದು ಹೇಳಿದರು.
ಬಿಜೆಪಿಯ ಹಿರಿಯ ನಾಯಕ
ಇನ್ನು ರವೀಂದ್ರನಾಥ್ ಬಿಜೆಪಿ ಪಾಲಿಗೆ ಹಿರಿಯ ನಾಯಕ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಜೊತೆ ಸೇರಿ ಬಿಜೆಪಿ ಕಟ್ಟಿದವರು. ರಾಜ್ಯದಲ್ಲಿ ಬೆರಳೆಣಿಕೆ ಬಿಜೆಪಿ ಶಾಸಕರಿದ್ದಾಗ ರವೀಂದ್ರನಾಥ್ ಸಹ ಶಾಸಕರಾಗಿದ್ದವರು.
"ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಜೊತೆ ಸೇರಿ ನಾನು ಪಕ್ಷ ಕಟ್ಟಿದ್ದೇ ಅಪಾಯ ತಂತು. ದಾವಣಗೆರೆ ಜಿಲ್ಲೆಯಲ್ಲಿ ಓಡಾಡಿ ನಾನು ಪಕ್ಷ ಕಟ್ಟಿದ್ದೇನೆ. ಸಚಿವ ಸ್ಥಾನ ಸಿಕ್ಕರೆ ಒಳ್ಳೆಯ ಕೆಲಸ ಮಾಡುತ್ತೇನೆ. ದಾವಣಗೆರೆಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಶಾಸಕರೆಲ್ಲರೂ ಕೇಳಿದ್ದೇವೆ" ಎಂದು ರವೀಂದ್ರನಾಥ್ ತಿಳಿಸಿದರು.
ಎಂ. ಪಿ. ರೇಣುಕಾಚಾರ್ಯ ಹೇಳಿಕೆ
"ನಾಲ್ಕು ಸ್ಥಾನಗಳು ಖಾಲಿ ಇವೆ. ಕೆಲವರಿಗೆ ಸಂಘಟನೆ ಜವಾಬ್ದಾರಿ ನೀಡಿ. ಕೆಲವರು ಪದೇ ಪದೇ ಮಂತ್ರಿಗಳಾಗುತ್ತಿದ್ದಾರೆ. ಹೊಸಬರಿಗೂ ಅವಕಾಶ ನೀಡಿ. ಒಳ್ಳೆಯ ಕೆಲಸ ಮಾಡಲು ಸಚಿವ ಸ್ಥಾನ ನೀಡಿ ಎಂಬುದು ಕೆಲ ಶಾಸಕರ ಅಭಿಪ್ರಾಯವಾಗಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ನಮಗೆ ಆಶೀರ್ವಾದ ಮಾಡಿದ್ದಾರೆ. ನನ್ನ ಮತ್ತು ಈಶ್ವರಪ್ಪರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇತ್ತು. ಈಗ ಎಲ್ಲವೂ ಸರಿ ಹೋಗಿದೆ. ಪಕ್ಷದ ಹಿತದೃಷ್ಟಿಯಿಂದ ಹಾಗೂ ಸಂಘಟನೆ ಉದ್ದೇಶದಿಂದ ಕೆಲ ಸಚಿವರನ್ನು ಕೈಬಿಟ್ಟು ಹೊಸಮುಖಗಳಿಗೆ ಆದ್ಯತೆ ಕೊಡಿ" ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
"ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂಬುದಾಗಿ ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಹೀಗೆ ಹೇಳಿದ ಬಗ್ಗೆ ಸಾಕ್ಷ್ಯ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾಲ್ಕು ಗೋಡೆಗಳ ಮಧ್ಯೆ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಕೇಳಿದ್ದೆ. ಅದೇ ರೀತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷರಿಗೂ ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ" ಎಂದರು.
ಜಿ. ಎಂ. ಸಿದ್ದೇಶ್ವರ್ ಹೇಳಿಕೆ
"ಜಿಲ್ಲೆಗೆ ಸಚಿವ ಸ್ಥಾನ ನೀಡಿ ಎಂದು ಕೇಳಲು ನನಗೆ ಗೌರವ ಬೇಕಲ್ವಾ?, ಗೌರವ ಇಲ್ಲದೇ ನಾನು ಹೋಗಲು ಆಗುತ್ತಾ?. ಜಿಲ್ಲೆಯ ಯಾವ ಶಾಸಕರು ನನ್ನ ಬಳಿ ಬಂದು ಕೇಳಿಲ್ಲ. ಸಚಿವ ಸ್ಥಾನಕ್ಕೆ ಒತ್ತಡ ಹೇರಿ ಯಾರೂ ಬಾರದೇ ನಾನು ಹೋಗಲು ಹೇಗೆ ಸಾಧ್ಯ. ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ಕೊಡಿ ಎಂಬುದಕ್ಕೆ ನನ್ನ ಸಹಮತ ಇದೆ. ಎಲ್ಲರೂ ಒಟ್ಟಾಗಿ ಬಂದರೆ ನಾನು ಪ್ರಯತ್ನ ಪಡುತ್ತೇನೆ.ಯಾರೂ ಬಾರದೇ ನಾನು ಹೋಗಿ ಮುಜುಗರ ಅನುಭವಿಸಲಾ?" ಎಂದು ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ್ ಪ್ರಶ್ನಿಸಿದರು.
"ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪುತ್ರ ವಿಜಯೇಂದ್ರರಿಗೂ ಸಚಿವ ಸ್ಥಾನ ಕೊಡಲಿ. ರೇಣುಕಾಚಾರ್ಯರಿಗೂ ಕೊಡಲಿ, ರವೀಂದ್ರನಾಥ್ರಿಗೂ ನೀಡಲಿ, ಸಚಿವ ಸ್ಥಾನ ನೀಡಿದರೆ ಯಾರೂ ಬೇಡ ಎನ್ನುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಮತ ಇಲ್ಲ. ಸಚಿವ ಸ್ಥಾನ ಆಕಾಂಕ್ಷೆ ಎಂಬುದಕ್ಕೆ ಕೊನೆ ಇಲ್ಲ" ಎಂದರು.