ಚಿಕನ್ ಅಂಗಡಿ ಹುಡುಗನ ಲವ್ ಕಹಾನಿ, ಮರ್ಯಾದಾ ಹತ್ಯೆ ಜಡ್ಜ್ ಮೆಂಟ್
ದಾವಣಗೆರೆ, ಏಪ್ರಿಲ್ 20: ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಬೇಡ ಎಂದು ಮಗಳನ್ನೇ ಕೊಂದ ಆರೋಪ ಹೊತ್ತು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದ ತಂದೆ "ಮರ್ಯಾದೆ ಹತ್ಯೆ"ಯಿಂದ ಆರೋಪ ಮುಕ್ತರಾಗಿದ್ದಾರೆ. ಸಾಕ್ಷಾಧಾರಗಳ ಕೊರತೆಯಿಂದ ಮರ್ಯಾದೆ ಹತ್ಯೆ ಆರೋಪ ಹೊತ್ತ ಮೃತಳ ತಂದೆ ಆರೋಪ ಮುಕ್ತರಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪ್ರೇಮ್ ಕಹಾನಿ ಮರ್ಯಾದೆ ಹತ್ಯೆಯ ಜಡ್ಜ್ ಮೆಂಟ್ ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.
ನ್ಯಾಯಾಲಯದ ಮಹಾ ತೀರ್ಪು :
ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ನಿವಾಸಿ ಕಲ್ಲೇಶಪ್ಪ ಮರ್ಯಾದೆ ಹತ್ಯೆ ಆರೋಪದಿಂದ ಮುಕ್ತಿ ಪಡೆದು ಜೈಲಿನಿಂದ ಬಿಡುಗಡೆಯಾದವರು. ಕೆಳ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ಮದುವೆಗೆ ಅಡ್ಡಿ ಪಡಿಸಿ ಆಕೆಯನ್ನು ತನ್ನದೇ ಅಡಿಕೆ ತೋಟದಲ್ಲಿ ಹತ್ಯೆ ಮಾಡಿದ ಆರೋಪ ಕಲ್ಲೇಶಪ್ಪನ ಮೇಲೆ ಹೊರಿಸಲಾಗಿತ್ತು. ಅನಿತಾ ಎಂಬಾಕೆ ನಿಗೂಢ ಸಾವಿನ ಸಂಬಂಧ ಜಗಳೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದರಲ್ಲಿ ಮೃತ ಯುವತಿಯ ತಂದೆ ಮರ್ಯಾದೆ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿತ ಕಲ್ಲೇಶಪ್ಪನಿಗೆ ಈ ಪ್ರಕರಣದಲ್ಲಿ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿತ್ತು.
ವಾದ ಪ್ರತಿವಾದ:
ಮರ್ಯಾದೆ ಹತ್ಯೆ ಮಾಡಿದ ಆರೋಪ ಹೊತ್ತ ಕಲ್ಲೇಶಪ್ಪನ ಪರ ವಾದ ಮಂಡಿಸಿದ್ದ ವಕೀಲ ಬಿ. ಸಿದ್ದೇಶ್ವರ, ಕಲ್ಲೇಶಪ್ಪನ ಪುತ್ರಿ ಅನಿತಾ ಎಂಬಾಕೆ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲಂಬಾಣಿ ತಾಂಡಾದ ಹುಡುಗನನ್ನು ಪ್ರೀತಿಸುತ್ತಿದ್ದು ನಿಜ. ಆದರೆ ಆತ ಈಕೆಯನ್ನು ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ್ದ. ಹೀಗಾಗಿ ಆತನನ್ನು ಹುಡುಕಿಕೊಂಡು ಅನಿತಾ ಹೋಗಿದ್ದಳು. ನ್ಯಾಯ ಕೋರಿ ಅನಿತಾ ಐಮಂಗಲ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. ಮಿಗಿಲಾಗಿ ಮೃತ ಅನಿತಾಳನ್ನು ಆಕೆಯ ತಂದೆ ಕಲ್ಲೇಶಪ್ಪ ಹಿಂಬಾಲಿಸಿಕೊಂಡು ಹೋಗಿರಲಿಲ್ಲ. ಅನಿತಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಜಾಗದಲ್ಲಿ ಕಲ್ಲೇಶಪ್ಪ ಇದ್ದ ಎಂಬುದಕ್ಕೆ ಪೊಲೀಸರು ಸುಳ್ಳು ಸಾಕ್ಷ ಸೃಷ್ಟಿಸಿದ್ದಾರೆ.
ಘಟನೆ ನಡೆದ ಜಾಗದಲ್ಲಿ ಬೈಕ್ನ್ನು ನಿಲ್ಲಿಸಿ ಸಾಕ್ಷಿ ಸೃಷ್ಟಿಸಿದ್ದಾರೆ. ಇನ್ನು ತನ್ನ ಮಗಳನ್ನು ಕಲ್ಲೇಶಪ್ಪ ಕೊಲೆ ಮಾಡಿದ್ದೇ ಆದಲ್ಲಿ ಆಕೆಯ ದೇಹದ ಮೇಲೆ ಆಪಾದಿತ ತಂದೆಯ ಬೆರಳು ಗುರುತು ಇರಬೇಕಿತ್ತು. ವೃದ್ಧ ತಂದೆ ಯುವತಿಯನ್ನು ಕೊಲೆ ಮಾಡುವಷ್ಟು ಬಲಾಢ್ಯವಾಗಿರಲಿಲ್ಲ. ಪೊಲೀಸರ ತನಿಖೆಯಲ್ಲಿ ಇದ್ಯಾವುದು ಉಲ್ಲೇಖವಿಲ್ಲ. ಕಲ್ಲೇಶಪ್ಪ ತನ್ನ ಮಗಳನ್ನು ಕೊಲೆ ಮಾಡಿಲ್ಲ ಎಂದು ವಾದ ಮಂಡಿಸಿದ್ದರು. ವಕೀಲರಾದ ಬಿ. ಸಿದ್ದೇಶ್ವರ ಮಂಡಿಸಿದ ವಾದವನ್ನು ಪರಿಗಣಿಸಿದ ದಾವಣಗೆರೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಕಲ್ಲೇಶಪ್ಪನನ್ನು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ಏನಿದು ಪ್ರೇಮ ಕಹಾನಿ :
ಜಗಳೂರಿನ ಬಿಸ್ತುವಳ್ಳಿ ಗ್ರಾಮದ ಕಲ್ಲೇಶಪ್ಪನ ಪುತ್ರಿ ಅನಿತಾ ದ್ವಿತೀಯ ಪಿಯುಸಿಯಲ್ಲಿ ನಪಾಸು ಆಗಿದ್ದಳು. ಭರಮಸಾಗರ ಎಂಬ ಊರಿಗೆ ಹೋಗಿ ಬರುತ್ತಿದ್ದಳು. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲಂಬಾಣಿ ತಾಂಡಾದ ಯುವಕನೊಬ್ಬ ಈಕೆಗೆ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಪ್ರೀತಿ ಮೀರಿದ ಸಂಬಂಧ ಬೆಳೆಸಿಕೊಂಡಿದ್ದರು. ಆನಂತರ ಲಂಬಾಣಿ ಹುಡುಗ ಮತ್ತು ಅನಿತಾ ಇಬ್ಬರೂ ಓಡಿ ಹೋಗಿದ್ದರು. ಇದಾದ ಕೆಲವೇ ದಿನಗಳ ಬಳಿಕ ಆಕೆಯನ್ನು ಬಿಟ್ಟು ಕಳಿಸಿದ್ದ. ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಅನಿತಾ ಹಠ ಹಿಡಿದಿದ್ದಳು.
ಲಂಬಾಣಿ ಹುಡುಗ ಮದುವೆಯಾಗಲು ನಿರಾಕರಣೆ ಮಾಡಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಹುಡುಗನನ್ನು ಹುಡುಕಿಕೊಂಡು ತೆರಳಿದ್ದಳು. ಐಮಂಗಲ ಬಸ್ ನಿಲ್ದಣದಲ್ಲಿ ಏಕಾಂಗಿಯಾಗಿದ್ದ ಅನಿತಾಳನ್ನು ಐಮಂಗಲ ಪೊಲೀಸರು ಠಾಣೆಗೆ ಕರೆದುಕೊಂಡುಹೋಗಿ ವಿಚಾರಣೆ ನಡೆಸಿ ಮರುದಿನ ಬೆಳಗ್ಗೆ ಪೋಷಕರಿಗೆ ಒಪ್ಪಿಸಿದ್ದರು. ಪ್ರಿಯಕರ ದೂರವಾದ ಹಿನ್ನೆಲೆಯಲ್ಲಿ ಅನಿತಾ ಖಿನ್ನತೆಗೆ ಒಳಗಾಗಿದ್ದಳು.
ಯುವತಿ ಸಂಶಯಾಸ್ಪದ ಸಾವು:
2019 ಜ. 30 ರಂದು ಅನಿತಾ ತನ್ನ ಅಡಿಕೆ ತೋಟದಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ತನ್ನ ತೋಟದಲ್ಲಿ ಸಾವನ್ನಪ್ಪಿದ್ದಳು. ಅನಿತಾಳ ನಿಗೂಢ ಸಾವಿನ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜಗಳೂರು ಪೊಲೀಸರು, ಮೃತಳ ತಂದೆಯನ್ನು ಬಂಧಿಸಿದ್ದರು. ಕೆಳಜಾತಿಯ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದ ಮಗಳನ್ನು ಸ್ವತಃ ಆಕೆಯ ತಂದೆಯೇ ಹತ್ಯೆ ಮಾಡಿದ್ದಾರೆ. ಇದೊಂದು ಮರ್ಯಾದೆ ಹತ್ಯೆ. ಯುವತಿ ಓಡಿ ಹೋಗಿದ್ದ ವೇಳೆ ಆಕೆಯನ್ನು ಅವರ ತಂದೆ ಹಿಂಬಾಲಿಸಿದ್ದಾರೆ.
ಆಕೆಯನ್ನು ಹತ್ಯೆ ಮಾಡಿ, ಆಕೆಯ ವೇಲ್ನಿಂದಲೇ ನೇಣು ಬಿಗಿದ ಸ್ಥಿತಿಯಲ್ಲಿ ಮರಕ್ಕೆ ಕುಣಿಕೆ ಹಾಕಿ ಸಾಕ್ಷಾಧಾರಗಳನ್ನು ಮರೆ ಮಾಚಿದ್ದಾರೆ. ಅನಿತಾಳದ್ದು ಮರ್ಯಾದೆ ಹತ್ಯೆ, ಆಕೆಯ ತಂದೆಯೇ ಹತ್ಯೆ ಮಾಡಿದ್ದಾರೆ ಎಂದು ಅರೋಪಿಸಿ ಜಗಳೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೇ ವಾಸ್ತವ ಮುಂದಿಟ್ಟು ಸಾರ್ವಜನಿಕ ಅಭಿಯೋಜಕರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು.
ಪ್ರಕರಣದ ತನಿಖೆಯಲ್ಲಿ ಪೊಲೀಸರು ಪ್ರಸ್ತಾಪಿಸಿರುವ ಸಾಂದರ್ಭಿಕ ಸಾಕ್ಷಾಧಾರಗಳಿಗೂ, ಘಟನೆಯ ವಾಸ್ತವಾಂಶಕ್ಕೂ ಹೊಂದಾಣಿಕೆಯಾಗಿಲ್ಲ. ಮಿಗಿಲಾಗಿ ಪೊಲೀಸರೇ ಬೈಕ್ನ್ನು ಘಟನಾ ಸ್ಥಳಕ್ಕೆ ತಂದು ನಿಲ್ಲಿಸಿ ಮಹಜರು ಮಾಡಿಸಿರುವುದು ವಿಚಾರಣೆ ವೇಳೆ ಪ್ರತಿವಾದಿ ವಕೀಲರು ಪ್ರಸ್ತಾಪಿಸಿ ವಾದ ಮಂಡಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಉಲ್ಲೇಖಿಸಿದ್ದ ಸಾಂದರ್ಭಿಕ ಸಾಕ್ಷಾಧಾರಗಳು ನಂಬಿಕೆಗೆ ಅರ್ಹವಲ್ಲದ ಅಂಶಗಳನ್ನು ವಕೀಲರಾದ ಸಿದ್ದೇಶ್ವರ ಬಿ. ನ್ಯಾಯಾಲಯಕ್ಕೆ ಮನರಿಕೆ ಮಾಡಿಕೊಟ್ಟಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಧೀಶರು, ಕಲ್ಲೇಶಪ್ಪನನ್ನು ಮರ್ಯಾದೆ ಹತ್ಯೆ ಆರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.



Click it and Unblock the Notifications














