ಕಾವೇರಿ ಹೋರಾಟಕ್ಕಿಳಿದ 5 ವರ್ಷದ ಬಾಲಕ: ಬೆಳ್ಳಂಬೆಳಗ್ಗೆ ಪ್ರತಿಭಟನೆಗೆ ಹಾಜರ್
ದಾವಣಗೆರೆ, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ದಾವಣಗೆರೆಯಲ್ಲಿ ಹೋರಾಟಗಳು ಆರಂಭಗೊಂಡಿದೆ. ಕಾವೇರಿ ನೀರಿಗಾಗಿ ದಾವಣಗೆರೆ ಬಂದ್ಗೆ ಸಹ ಕರೆ ನೀಡಲಾಗಿದೆ.
ದಾವಣಗೆರೆಯಲ್ಲಿ ಕಾವೇರಿ ಹೋರಾಟದಲ್ಲಿ ಐದು ವರ್ಷದ ಬಾಲಕ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ದಾವಣಗೆರೆಯ ಕೆ.ಬಿ. ಬಡಾವಣೆಯ ಅವಿನಾಶ್ ಹಾಗೂ ಚೈತ್ರಾ ದಂಪತಿ ಪುತ್ರ ಮೇಹಿತ್, ಬೆಳ್ಳಂಬೆಳಿಗ್ಗೆ ತನ್ನ ತಾಯಿಯ ಜೊತೆ ಜಗಳವಾಡಿಕೊಂಡು ಪ್ರತಿಭಟನೆಗೆ ತಯಾರಾಗಿ ಬಂದಿದ್ದಾನೆ. ಜಯದೇವ ವೃತ್ತಕ್ಕೆ ಆಗಮಿಸಿದ ಮೇಹಿತ್ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಕೂಡಲೇ ನೀರು ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

ನಮಗೆ ಭತ್ತ, ಬೇಳೆ ಸೇರಿದಂತೆ ಇತರೆ ಬೆಳೆಯಲು ನೀರಿಲ್ಲ. ಕುಡಿಯಲು ನೀರು ಸರಿಯಾಗಿ ಸಿಗುತ್ತಿಲ್ಲ. ಕಾವೇರಿ ನದಿ ನೀರು ನಮ್ಮದು, ಯಾವುದೇ ಕಾರಣಕ್ಕೂ ನೀರು ಹರಿಸಬೇಡಿ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ. ನಾನು ಟಿವಿಯಲ್ಲಿ ಕಾವೇರಿಗಾಗಿ ಹೋರಾಟ ನಡೆಯುತ್ತಿರುವುದನ್ನು ನೋಡಿದೆ. ನನಗೂ ಹೋರಾಟಕ್ಕೆ ಧುಮಕಬೇಕು ಎಂಬ ಬಯಕೆ ಬಂತು. ಹಾಗಾಗಿ, ಬೆಳಿಗ್ಗೆಯೇ ಬಂದಿದ್ದೇನೆ. ಕನ್ನಡಪರ ಸಂಘಟನೆಗಳ ಜೊತೆ ನಾನೂ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದಾನೆ.
ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಿರುತ್ತಿರುವುದು ತಪ್ಪು. ಮೊದಲು ರಾಜ್ಯದ ಜನರ ಹಿತ ಕಾಪಾಡಬೇಕು. ರೈತರ ನೆರವಿಗೆ ಧಾವಿಸಬೇಕು. ಕಾವೇರಿ ನೀರು ಹರಿಸಬಾರದು ಎಂಬ ಬೇಡಿಕೆ ನನ್ನದು. ಕೂಡಲೇ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುವ ಮೂಲಕ ಗಮನ ಸೆಳೆದರು.

ಎಂದಿನಂತೆ ಶಾಲಾ- ಕಾಲೇಜುಗಳು
ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ದಾವಣಗೆರೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದ್ದು, ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
26ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿರುವ ಬಂದ್ ಬೆಳಿಗ್ಗೆಯಿಂದಲೇ ಆರಂಭವಾಗಿದೆ. ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ಕನ್ನಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಬಸ್ ಚಾಲಕರು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಬಂದ್ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಕಾವೇರಿ ನೀರು ಹರಿಸುವಿಕೆ ಕೂಡಲೇ ನಿಲ್ಲಿಸಬೇಕು. ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು. ತಮಿಳುನಾಡು ಒತ್ತಡಕ್ಕೆ ಮಣಿಯಬಾರದು. ಕಾವೇರಿ ನದಿ ನೀರು ನ್ಯಾಯಾಧೀಕರಣದಲ್ಲಿ ಪ್ರಬಲ ವಾದ ಮಂಡಿಸಿ, ಕೂಡಲೇ ನೀರು ನಿಲುಗಡೆಗೆ ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರಕ್ಕೆ ಒತ್ತಾಯ
ಇನ್ನು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ದಾವಣಗೆರೆ ಬಂದ್ ಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಕ್ಕೆ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ರಾಜಕೀಯ ಇಚ್ಚಾಶಕ್ತಿ ತೋರಿಸದ ಕಾರಣ ಇಂಥ ಸಮಸ್ಯೆ ತಲೆದೋರಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಜೊತೆಗೆ ಕುಡಿಯಲು ನೀರು ಸಹ ಸರಿಯಾಗಿ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ 3000 ಕ್ಯೂಸೆಕ್ ನೀರು ಹರಿಸುವುದು ಸರಿಯಲ್ಲ. ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವಿಕೆ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಿರುವುದರ ಬಗ್ಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉದ್ಬವಿಸಿರುವ ಕಾವೇರಿ ವಿವಾದ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ಪ್ರತಿ ನಿತ್ಯ ನದಿನೀರು ಹರಿಸುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಬದ್ಧತೆ ಹಾಗೂ ರಾಜ್ಯದ ಜನರ ಹಿತ ಕಾಡಾಡಬಹುದಿತ್ತು. ಈ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 245 ವರ್ಷಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಮದ್ರಾಸ್ ಪ್ರಾಂತ್ಯದ ಈ ಹಿಂದೆ ರಚಿಸಿರುವ ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರ ಸಮಿತಿಯ ವಿಸರ್ಜಿಸಿ, ಹೊಸ ಸದಸ್ಯರ ನೇಮಕ ಆಗಬೇಕು. ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುವಂಥ ತಜ್ಞರ ನೇಮಕ ಮಾಡಬೇಕು. ತಮಿಳುನಾಡು ಕೇಳಿದಂತೆ ನೀರು ಹರಿಸುವುದನ್ನು ಬಿಡಬೇಕು. ಮೊದಲು ರಾಜ್ಯಕ್ಕೆ ಆದ್ಯತೆ ನೀಡಿ. ಆಮೇಲೆ ತಮಿಳುನಾಡಿಗೆ ನೀರು ಹರಿಸಲಿ. ಡ್ಯಾಂನಲ್ಲಿಯೇ ಹೆಚ್ಚು ನೀರಿಲ್ಲ. ಬೇರೆ ರಾಜ್ಯಕ್ಕೆ ನೀರು ಹರಿಸಿದರೆ ಇಲ್ಲಿನ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಸಂಸದರು ಪ್ರಧಾನಿಗೆ ಒತ್ತಡ ಹೇರಬೇಕು
ಕೇಂದ್ರ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಬೇಕು. ರಾಜ್ಯದಿಂದ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆ. ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು. ರಾಜಕೀಯ ಮರೆತು ರಾಜ್ಯದ ರೈತರ, ಜನರ ಹಿತಕ್ಕಾಗಿ ಒತ್ತಾಯ ಹೇರಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು. ಅಲ್ಲಿಯವರೆಗೆ ಈ ಸಮಸ್ಯೆ ಬಗೆಹರಿಯದು ಎಂದು ಪ್ರತಿಭಟನಾಕಾರರು ಹೇಳಿದರು.
ಕರ್ನಾಟಕ ಬಂದ್ಗೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ನಲ್ಲಿ ಕನ್ನಡಪರ ಸಂಘಟನೆಗಳು ತೊಡಗಿಸಿಕೊಂಡರೆ, ಮತ್ತೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಒಟ್ಟಾರೆ ದಾವಣಗೆರೆಯಲ್ಲಿ ಕರ್ನಾಟಕ ಬಂದ್ಗೆ ಸ್ವಲ್ಪ ಮಟ್ಟಿಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಬಹುದು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭದ್ರಾ ಜಲಾಶಯದಿಂದ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ ದಾವಣಗೆರೆ ಬಂದ್ಗೆ ಕರೆ ಕೊಡಲಾಗಿತ್ತು. ಈಗ ಮತ್ತೆ ಬಂದ್ ನಡೆಸಲಾಗುತ್ತಿದ್ದರೂ ಕಾವೇರಿಗಾಗಿ ಬೆಣ್ಣೆನಗರಿಯ ಜನರು ಬೆಂಬಲ ಸೂಚಿಸುತ್ತಿದ್ದಾರೆ.












Click it and Unblock the Notifications