ದಾವಣಗೆರೆ: ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಯುವತಿಯರಿಗೆ ಕಂಕಣ ಭಾಗ್ಯ
ದಾವಣಗೆರೆ, ಸೆಪ್ಟೆಂಬರ್ 23: ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಹಿಳಾ ನಿಲಯದಲ್ಲಿ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿರದೆ, ಬುಧವಾರದಂದು ಸಂಭ್ರಮ ಮನೆಮಾಡಿತ್ತು. ಮಂಗಳವಾದ್ಯ ಮೊಳಗುತ್ತಾ, ಅಲ್ಲೊಂದು ಶುಭ ಸಮಾರಂಭವಿರುವ ಬಗ್ಗೆ ಸಂಕೇತ ನೀಡುತ್ತಿತ್ತು.
ವಿವಿಧ ಕಾರಣಗಳಿಂದ ಶೋಷಣೆಗೆ ಒಳಗಾಗಿ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಯುವತಿಯರಿಗೆ ಬದುಕು ಕಟ್ಟಿಕೊಡುವ ಶುಭ ಸಮಾರಂಭವಾಗಿತ್ತು. 24 ವರ್ಷದ ಮಂಜುಳಾ, 19 ವರ್ಷದ ರೇಷ್ಮಾ ಹಾಗೂ 21 ವರ್ಷದ ಕುಪ್ಪಮ್ಮ ಎಂಬ ಮೂವರು ಯುವತಿಯರಿಗೆ ಸುಂದರ ಬದುಕು ಕಟ್ಟಿಕೊಡಲು ಮೂವರು ಯುವಕರು ಮುಂದಾಗಿದ್ದು, ಮೂವರು ನೂತನ ವಧು ವರರ ಪಾಲಕರು, ಸ್ನೇಹಿತರು, ಬಂಧುಮಿತ್ರರು, ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರೂ ಸೇರಿದಂತೆ ಎಲ್ಲರಲ್ಲೂ ಸಂತಸ ಮನೆಮಾಡಿತ್ತು.
ರೇಷ್ಮಾ ಅವರನ್ನು ನಾಗರಾಜ ಮದುವೆಯಾದರು
ಮಂಜುಳಾ ಇವರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೆದ್ಲಿ ಹೆನಿಯಾದ ಉಮೇಶ್ ಎಚ್.ಜಿ ಅವರು ಬಾಳ ಸಂಗಾತಿಯಾಗಿ ಸ್ವೀಕರಿಸಿದರೆ, ರೇಷ್ಮಾ ಅವರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಮುಂಡಗನಮನೆ ಗ್ರಾಮದ ನಾಗರಾಜ ಸುಬ್ರಾಯ ಹೆಗಡೆ ಅವರು ಹಾಗೂ ಕುಪ್ಪಮ್ಮ ಅವರನ್ನು ಶಿರಸಿ ತಾಲ್ಲೂಕಿನ ಶಿವಳ್ಳಿಯ ದಯಾನಂದ ಆರ್. ಭಟ್ಟ ಅವರು ಬಾಳ ಸಂಗಾತಿಯಾಗಿಸಿಕೊಂಡರು.
ಕೃಷಿ ಮಾಡುವವರಿಗೆ ಹೆಣ್ಣು ಕೊಡುವುದು ದುಸ್ಥರ
ಈ ವಿಶೇಷ ಕಾರ್ಯಕ್ರಮದಲ್ಲಿ ನವ ಜೀವನಕ್ಕೆ ಕಾಲಿಟ್ಟ ಉಮೇಶ್ ಎಚ್.ಜಿ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ""ಇಂತಹ ಮಾದರಿ ಕಾರ್ಯಕ್ರಮದಲ್ಲಿ ಮದುವೆಯಾಗುತ್ತಿರುವುದು ಸಂತಸ ತಂದಿದೆ. ಗ್ರಾಮದಲ್ಲಿ ತಾನು ಪುರೋಹಿತ ವೃತ್ತಿ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಸಮುದಾಯದಲ್ಲಿ ಪುರೋಹಿತ ವೃತ್ತಿ, ಕೃಷಿ ಮಾಡುವವರಿಗೆ ಹೆಣ್ಣು ಕೊಡುವುದು ದುಸ್ಥರವಾಗಿದೆ. ಹೀಗಾಗಿ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆದು, ನಿಯಮಾನುಸಾರ ರಾಜ್ಯ ಮಹಿಳಾ ನಿಲಯಕ್ಕೆ ಅರ್ಜಿ ಸಲ್ಲಿಸಿ, ಕುಟುಂಬದ ಒಪ್ಪಿಗೆ ಪಡೆದು, ಮದುವೆಯಾಗುತ್ತಿದ್ದೇನೆ'' ಎಂದರು. ಇವರಿಗೆ ಬಾಳ ಸಂಗಾತಿಯಾದ ಮಂಜುಳಾ ಪ್ರತಿಕ್ರಿಯಸಿ, ""ಉಮೇಶ್ ಅವರನ್ನು ಮದುವೆಯಾಗುತ್ತಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದರು.
ಮಾದರಿ ಜೀವನ ಕಟ್ಟಿಕೊಳ್ಳುವ ಯತ್ನ
ಇನ್ನೋರ್ವ ನವ ವರ ದಯಾನಂದ ಭಟ್ಟ ಮಾತನಾಡಿ, ""ತಾನು ಮಾದರಿ ಜೀವನ ಕಟ್ಟಿಕೊಳ್ಳುವ ಯತ್ನ ಮಾಡಿದ್ದು, ನಿಲಯದ ನಿವಾಸಿಯಾಗಿದ್ದ ರೇಷ್ಮಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದೇನೆ'' ಎಂದು ಸಂತಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೈಸೂರು ಪೇಟಾ ಧರಿಸಿ, ಮದುವೆ ಸಮಾರಂಭದ ನೇತೃತ್ವ ವಹಿಸಿದ್ದರು. ತಾವೇ ಮುಂದೆ ನಿಂತು ನೂತನ ವಧು-ವರರು ವಿವಾಹ ಜೀವನಕ್ಕೆ ಕಾಲಿರಿಸಿದ ಸಂಭ್ರಮಕ್ಕೆ ಸಾಕ್ಷಿಯಾದರು. ಅಲ್ಲದೆ ಅಕ್ಷತೆಯನ್ನು ನವ ದಂಪತಿಗಳಿಗೆ ಹಾಕಿ ಶುಭ ಹಾರೈಸಿದರು.
Recommended Video
ವಿಶೇಷ ಮದುವೆ ಸಮಾರಂಭ
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಅವರು ಉಪಸ್ಥಿತರಿದ್ದು, ಮದುವೆ ಸಂಭ್ರಮದ ಸಂತಸ ಹಂಚಿಕೊಂಡು, ನೂತನ ದಂಪತಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸುಜಾತಾ ಅಲ್ಲದೆ ನಿಲಯದ ಸಿಬ್ಬಂದಿಗಳು ವಿಶೇಷ ಮದುವೆ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.