ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳುವುದೇನು?
ಬೆಂಗಳೂರು, ನ.13: 'ಡಾ. ರಾಜ್ ಕುಮಾರ್ ಅವರಿಗೆ ಸಿನಿಮಾದಲ್ಲಿ ಪೆಟ್ಟು ಬಿದ್ದರೆ ತಡೆದುಕೊಳ್ಳಲಿಕ್ಕಾಗುವುದಿಲ್ಲ. ಅಂಥದ್ದರಲ್ಲಿ ಈ ರೀತಿ ಬೆಂಕಿ ಹಚ್ಚಿದವರನ್ನು ಏನು ಮಾಡಬೇಕು? ಅವರನ್ನು ಹಾಗೆ ಸುಡಬೇಕು' ಇದು ರಾಜರಾಜೇಶ್ವರಿ ನಗರದ 50 ವರ್ಷದ ಸಾವಿತ್ರಮ್ಮ ಅವರ ಆಕ್ರೋಶ.
ವರನಟ ಡಾ.ರಾಜ್ ಕುಮಾರ್ ಪ್ರತಿಮೆಗೆ ಹಾನಿ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಚುಮು ಚುಮು ಚಳಿಯೊಂದಿಗೆ ಮಳೆ ಕಾಣಿಸಿಕೊಂಡರೆ ಇತ್ತ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದ ಗ್ಲೋಬಲ್ ಕಾಲೇಜು ಎದುರಿಗಿನ ರಾಜ್ ಪ್ರತಿಮೆಗೆ ಹಾನಿಯಾಗಿದ್ದು ವಾತಾವರಣವನ್ನು ಬಿಸಿ ಮಾಡಿತ್ತು.
ಎಲ್ಲಾ ಮಾಧ್ಯಮಗಳು ಕನ್ನಡ ಪರ ಹೋರಾಟಗಾರರು ಮುಖಂಡರನ್ನು ಮಾತನಾಡಿಸಿದವು. ಅವರ ಹೇಳಿಕೆಯಲ್ಲಿ ಯಾವುದೇ ವಿಶೇಷ ಸತ್ವ ಕಂಡುಬರಲಿಲ್ಲ. ಹಾಗಾದರೆ ನಿಜವಾಗಿ ಬಂಗಾರಪ್ಪ ನಗರದ ಸ್ಥಳೀಯರ ಅಭಿಪ್ರಾಯವೇನು? ಎಂಬುದನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ.
ಬೆಳಗ್ಗೆ ಸುದ್ದಿ ಗೊತ್ತಾದ ತಕ್ಷಣ ಬಂದು ನೋಡಿದೆವು. ಪೊಲೀಸರು ಆಗಮಿಸಿದರು. ಇಂಥ ಘಟನೆ ನಡೆಯಬಾರದಿತ್ತು. ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿಯೇ ಕನ್ನಡಕ್ಕೆ ಅಪಮಾನವಾಗಿದೆ ಎನ್ನುತ್ತಾರೆ ಬಂಗಾರಪ್ಪ ನಗರ ನಿವಾಸಿ ನಾಗರಾಜು.[ರಾಜ್ ಪ್ರತಿಮೆಗೆ ಹಾನಿ, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ]
ಇಲ್ಲಿ ಎಲ್ಲರೂ ಕನ್ನಡಾಭಿಮಾನಿಗಳೇ, ನಮ್ಮ ಏರಿಯಾಕ್ಕೆ ಸಂಬಂಧಿಸಿದವರು ಇಂಥ ಕೆಲಸ ಮಾಡಲು ಸಾಧ್ಯವಿಲ್ಲ. ಯಾರೋ ಕುಡುಕರು ಮಾಡಿರುವ ಕೆಲಸ ಇದಾಗಿರಬಹುದು ಎಂದು ರಾಜರಾಜೇಶ್ವರಿ ನಗರ ನಿವಾಸಿ ನಾಗೇಂದ್ರಪ್ಪ ಹೇಳುತ್ತಾರೆ.
ಪ್ರತಿಮೆ ಸ್ಥಾಪನೆ ಮಾಡಿರುವ ಜಾಗದಲ್ಲಿಯೆ ದೇವಸ್ಥಾನವೊಂದನ್ನು ಕಟ್ಟಬೇಕು ಎಂಬ ಒತ್ತಾಯ ಒಂದು ಗುಂಪಿನಿಂದ ಕೇಳಿ ಬಂದಿದ್ದು ಅದಕ್ಕೆ ಸಂಬಂಧಿಸಿದವರೇ ಯಾರೋ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.[ಪ್ರತಿಭಟನೆಯ ಚಿತ್ರಗಳು]
ಸ್ಥಳಕ್ಕೆ ಗೃಹ ಸಚಿವ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಪರಶೀಲನೆ ನಡೆಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ಅಲ್ಲದೇ ನವೆಂಬರ್ 23 ರಂದು ಇದೇ ಜಾಗದಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ತಿಳಿಸಿದರು.
ನೆರೆದಿದ್ದ ಸಾರ್ವಜನಿಕರು
ವರನಟ ಡಾ. ಡಾ.ರಾಜ್ ಕುಮಾರ್ ಪ್ರತಿಮೆಗೆ ಹಾನಿಯಾಗಿರುವ ಸ್ಥಳದಲ್ಲಿ ನೆರೆದಿದ್ದ ನಾಗರಿಕರು.
ಪ್ರತಿಮೆಗೆ ಬೆಂಕಿ
ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿರುವ ಡಾ. ರಾಜ್ ಪುತ್ಥಳಿ.
ರಕ್ಷಣಾ ಕವಚ
ಅಹಿತಕರ ಘಟನೆ ಸಂಭವಿಸಬಾರದು ಎಂದು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದು.
ಸಾರಾ ಗೋವಿಂದು ಖಂಡನೆ
ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ ಸಾರಾ ಗೋವಿಂದು.
ಬೀದಿಗಿಳಿದ ಹೋರಾಟಗಾರರು
ಕಿಡಿಗೇಡಿಗಳ ಕೃತ್ಯ ಖಂಡಿಸಿ ಪ್ರತಿಭಟನೆಗಿಳಿದ ಕರವೇ ಕಾರ್ಯಕರ್ತರು
ಕನ್ನಡಿಗರ ಅವಮಾನ ಸಹಿಸಲ್ಲ
ಡಾ. ರಾಜ್ ಮತ್ತು ಕನ್ನಡದ ಪರ ಘೋಷಣೆ ಕೂಗಿದ ಅಭಿಮಾನಿಗಳು.