ಪ್ರಥಮ ಬಾರಿಗೆ ಕಾಡುಗೊಲ್ಲ ಮಹಿಳೆಗೆ ಹಿರಿಯೂರು ನಗರಸಭೆ ಅಧ್ಯಕ್ಷೆ ಪಟ್ಟ
ಚಿತ್ರದುರ್ಗ, ಜುಲೈ 11: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆಗೆ ಪ್ರಪ್ರಥಮವಾಗಿ ಕಾಡುಗೊಲ್ಲ ಮಹಿಳೆಗೆ ಅಧ್ಯಕ್ಷ ಸ್ಥಾನ ಪುಟ್ಟ ಒಲಿದು ಬಂದಿದ್ದು, ಹಿರಿಯೂರು ನಗರಸಭೆಗೆ ಮೊದಲ ಅವಧಿಯಲ್ಲಿ ಬಾಕಿ ಇರುವ 10 ತಿಂಗಳ ಅವಧಿಗೆ ನಗರದ ಮೂರನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಎಸ್. ಶಿವರಂಜಿನಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಮಾಜಿ ಸಚಿವ ಡಿ. ಸುಧಾಕರ್ ಅವರು ತಮ್ಮ ಕಚೇರಿಯಲ್ಲಿ ಪಕ್ಷದ ನಗರಸಭಾ ಸದಸ್ಯರು ಹಾಗೂ ಮುಖಂಡರ ಜೊತೆ ಚರ್ಚಿಸಿ ಶಿವರಂಜಿನಿ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿ, ನಾಮಪತ್ರ ಸಲ್ಲಿಸುವಂತೆ ಸೂಚಿಸಿದರು.
ಅದರಂತೆ 11 ಗಂಟೆಗೆ ನಗರಸಭೆಗೆ ಆಗಮಿಸಿದ ಶಿವರಂಜನಿ ನಾಮಪತ್ರಕ್ಕೆ ಪ್ರಭಾರ ಅಧ್ಯಕ್ಷ ಬಿ. ಎನ್. ಪ್ರಕಾಶ್ ಸೂಚಕರಾಗಿ ಜಿ. ಎಸ್. ತಿಪ್ಪೇಸ್ವಾಮಿ ಸಹಿ ಮಾಡಿದರು. ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣಕ್ಕೆ ಉಪ ವಿಭಾಗ ಅಧಿಕಾರಿಗಳು ಮಧ್ಯಾಹ್ನ 1. 20ಕ್ಕೆ ಶಿವರಂಜಿನಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಿದರು.

ಪಕ್ಷೇತರರಾಗಿ ಗಿದ್ದಿದ್ದ ಶಿವರಂಜನಿ
ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶಿವರಂಜಿನಿ ಅವರು ಬಿಜೆಪಿ ಪಕ್ಷದಿಂದ ನಗರಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಶಿವರಂಜಿನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಗರಸಭೆಯ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಅಧ್ಯಕ್ಷ ಸ್ಥಾನ ಸುಲಭವಾಗಿ ಸಿಕ್ಕಿತ್ತು. ಎರಡುವರೆ ವರ್ಷದ ಅಧಿಕಾರದ ಅವಧಿಯನ್ನು ಹಂಚಿಕೆ ಮಾಡಿದಲ್ಲಿ ತನಗೂ ಅವಕಾಶ ಸಿಗಬಹುದು ಎಂಬ ದೂರದ ಆಸೆ ಇಟ್ಟುಕೊಂಡಿದ್ದ ಶಿವರಂಜನಿಯವರು ಅಧ್ಯಕ್ಷರಾಗುವ ಮೂಲಕ ಕನಸು ನನಸಾಗಿಸಿಕೊಂಡಿದ್ದಾರೆ.

ಹಿರಿಯೂರು ಕ್ಷೇತ್ರದಲ್ಲಿ ಕಾಡುಗೊಲ್ಲ ಮತಗಳೇ ಪ್ರಾಬಲ್ಯ
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಡುಗೊಲ್ಲರು, ಕುಂಚಿಟಿಗರು ಮತ್ತು ಪರಿಶಿಷ್ಟ ಜಾತಿಯವರು ಸಮಬಲ ಸಂಖ್ಯೆಯಲ್ಲಿದ್ದು, ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಕಾಡುಗೊಲ್ಲ ಮತಗಳು ಸಿಗಬಹುದು ಎಂಬ ದೃಷ್ಟಿ ಇಟ್ಟುಕೊಂಡು ಹಾಗೂ ನಗರ ಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡುಗೊಲ್ಲ ಸಮುದಾಯದ ಎಸ್. ಶಿವರಂಜಿನಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನ ಅವಕಾಶ ಕಲ್ಪಿಸಲಾಗಿದೆ ಎಂಬ ಸುಧಾಕರ್ ಅವರ ಲೆಕ್ಕಾಚಾರವಾಗಿದೆ ಎನ್ನಬಹುದು.

ಫಲ ಕೊಟ್ಟ ನಿಯೋಗ
ಜೂಲೈ 9 ರಂದು ಕಾಡುಗೊಲ್ಲರಿಗೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಪಕ್ಷಾತೀತವಾಗಿ ಕಾಡುಗೊಲ್ಲ ಮುಂಚೂಣಿ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ಸಚಿವ ಡಿ ಸುಧಾಕರ್ರನ್ನು ಚಳ್ಳಕೆರೆ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ಒತ್ತಡ ತಂದಿದ್ದರು. ಮುಂಬರುವ ಚುನಾವಣೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಈ ಹಿಂದುಳಿದ ಸಮಾಜಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ
ನಗರಸಭೆಯ ನೂತನ ಅಧ್ಯಕ್ಷರಾಗಿ ಶಿವರಂಜನಿ ಆಯ್ಕೆ ಆಗುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮತ್ತೊಂದು ಕಡೆ ಮಾಜಿ ಸಚಿವ ಡಿ ಸುಧಾಕರ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಜೈಕಾರ ಹಾಕಿ ಹೂವಿನ ಸುರಿಮಳೆಗೈದರು. ನಂತರ ಮೆರವಣಿಗೆ ನಡೆಸಿದ, ಶ್ರೀ ತೇರು ಮಲ್ಲೇಶ್ವರ ದೇವಾಲಯ ಹಾಗೂ ಜಾಮಿಯಾ ಮಸೀದಿಗೆ ಭೇಟಿ ನೀಡಿದರು. ಇತರೇ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮತ್ತಿತರರು ಸೇರಿದಂತೆ ನೂತನ ಅಧ್ಯಕ್ಷರಿಗೆ ಶುಭಾಶಯ ತಿಳಿಸಿದರು.












Click it and Unblock the Notifications