ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಪರ್ಸೆಂಟೇಜ್ ಸರ್ಕಾರವಿತ್ತು: ಸಿ.ಟಿ ರವಿ ಆರೋಪ
ಚಿತ್ರದುರ್ಗ, ಅಕ್ಟೋಬರ್ 20: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸೆಂಟೇಜ್ ಸರ್ಕಾರವಿತ್ತು. ಅದಕ್ಕೆ ಅವರು ಅಂದು ಏನೆಲ್ಲಾ ಮಾಡಿದ್ದರೋ ಅದೆಲ್ಲವನ್ನು ಈಗೀನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹೇಳಿದ್ದಾರೆ.
ಸೋಮವಾರ ರಾತ್ರಿ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ""ಜಾತಿ ನಿಂದನೆ ಪ್ರಕರಣ ದಾಖಲು ಮಾಡುವುದು, ಬೆದರಿಕೆ ಹಾಕುವುದು, ಮನೆಗಳ ಮೇಲೆ ಕಲ್ಲು ತೂರಾಟ ಮಾಡುವುದೆಲ್ಲವೂ ಕನಕಪುರದ ಸಂಸ್ಕೃತಿ, ಬಿಜೆಪಿಯ ಸಂಸ್ಕೃತಿಯಲ್ಲ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
""ಕಾಂಗ್ರೆಸ್ ಪಕ್ಷವು ಬೆದರಿಕೆ ಹಾಕುವ ಸಂಸ್ಕೃತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲು ತೊಡಗಿದ್ದು, ನಾವು ಈ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ. ಕುದುರೆ ಜೂಜು ಆಡುವವರನ್ನು ಕರೆದುಕೊಂಡು ಬಂದು ರಾಜ್ಯಸಭೆ, ವಿಧಾನಸಭೆಗೆ ಆಯ್ಕೆ ಮಾಡಿದ್ದನ್ನು ನಾವು ನೋಡಿದ್ದೇವೆ. ವಿಧಾನ ಪರಿಷತ್ತು ಹಾಗೂ ರಾಜ್ಯಸಭೆಯನ್ನು ಕೂಡಾ ವ್ಯಾಪಾರ ನಡೆಸಿದ ಪಕ್ಷಗಳನ್ನು ನೋಡಿದ್ದೇವೆ'' ಎಂದು ವಾಗ್ದಾಳಿ ನಡೆಸಿದರು.

""ಬಿಜೆಪಿ ಪಕ್ಷವು ಸಾಮಾನ್ಯ ಜನರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಪಕ್ಷ. ಬೇರೆ ಪಕ್ಷಗಳಿಗೆ ಯಾರು ಯಾರೋ ಮಾಲೀಕರಾಗಿದ್ದಾರೆ. ಆದರೆ ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು. ನಮ್ಮ ಸರ್ಕಾರವು ಕೊರೊನಾ, ನೆರೆ ಎಲ್ಲವನ್ನೂ ಜೊತೆಯಾಗಿ ನಿಭಾಯಿಸುತ್ತಿದೆ ಎಂದರು.
ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಅಗತ್ಯವಾದ ಹಣಕಾಸು ನೆರವು ನೀಡಲಾಗಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ'' ಎಂದು ತಿಳಿಸಿದರು.












Click it and Unblock the Notifications