'ನಮ್ಮ ಬಳಿ ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯದ ವಿಡಿಯೋಗಳಿವೆ' - ಪರಶು
'ನಮ್ಮ ಬಳಿ ವಿಡಿಯೋಗಳಿವೆ. ಅವುಗಳನ್ನು ನಾವು ನೀಡುತ್ತೇನೆ. ಆದರೆ, ಅವುಗಳನ್ನು ನೀಡಲು ವಿಶೇಷ ತನಿಖಾ ದಳವನ್ನು ರಚನೆ ಮಾಡಬೇಕು ಎಂಬುದು ಸಂತ್ರಸ್ತ ಬಾಲಕಿಯರ ಹಕ್ಕೊತ್ತಾಯವಾಗಿದೆ. ಯಾಕೆಂದರೆ ಮಕ್ಕಳು ವಿಡಿಯೋದಲ್ಲಿ ಕಾಣುವುದರಿಂದ ಸರ್ಕಾರ ಕೂಡ ಇದನ್ನು ಸೂಕ್ತವಾಗಿ ಗಮನಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಅವರು ಹೇಳಿದ್ದಾರೆ.
ಮುರುಘಾ ಶ್ರೀಗಳ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು, ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಹೇಳಲು ವಿಡಿಯೋ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ಸಂತ್ರಸ್ತರು ತಮ್ಮ ಬಳಿ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಅವಶ್ಯಕತೆ ಬಿದ್ದಲ್ಲಿ ಅದನ್ನು ನೀಡುವುದಾಗಿ ಕೂಡ ಅವರು ಹೇಳಿದ್ದಾರೆ ಎಂದು ಪರಶು ಹೇಳಿದ್ದಾರೆ.
ಮಧ್ಯರಾತ್ರಿಯೇ ಮುರುಘಾ ಶ್ರೀ ನ್ಯಾಯಾಧೀಶರ ಮುಂದೆ ಹಾಜರು?
ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಫೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನವಾಗಿದೆ. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸಂತ್ರಸ್ತ ಬಾಲಕಿಯರಿಂದ ಶ್ರೀಗಳ ವಿರುದ್ಧ ಮೈಸೂರಿನಲ್ಲಿ ಆಗಸ್ಟ್ 26ರಂದು ಎಫ್ಐಆರ್ ದಾಖಲಾಗಿತ್ತು. ಜಡ್ಜ್ ಮುಂದೆ ಸಂತ್ರಸ್ತ ಬಾಲಕಿಯರು ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ಶ್ರೀಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆದವು. ರಾಷ್ಟ್ರೀಯ ಹಕ್ಕುಗಳ ಮಕ್ಕಳ ರಕ್ಷಣಾ ಆಯೋಗದಿಂದ ಶ್ರೀಗಳ ಬಂಧನಕ್ಕೆ ಒತ್ತಾಯಿಸಿತ್ತು. ಬಂಧನಕ್ಕೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಶ್ರೀಗಳ ಬಂಧನವಾಗಿದೆ.
ಶ್ರೀಗಳ ಬಂಧನ ಬಳಿಕ ಅಜ್ಞಾತ ಸ್ಥಳದಿಂದ ಶ್ರೀಗಳನ್ನು ಚಳ್ಳಿಕೆರೆ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಲಾಗಿದ್ದು ಎಸ್ಪಿ ಪರಶುರಾಮ್ ಮತ್ತು ಡಿವೈಎಸ್ಪಿ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಬಳಿಕ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಚಳ್ಳಿಕೆರೆಯ ಜಿಲ್ಲಾಸ್ಪತ್ರೆಯಲ್ಲಿ ಅವರ ವೈದ್ಯಕೀಯ ತಪಾಸಣೆ ನಡೆಸಲು ಸಿದ್ದತೆಗಳು ನಡೆಯುತ್ತಿವೆ.
ಆದರೆ ಮುರುಘಾ ಶ್ರೀಗಳನ್ನು ರಾತ್ರೋರಾತ್ರಿ ಬಂಧನದ ಹಿಂದಿನ ಕಾರಣವೇನು ಎನ್ನುವ ಅನುಮಾನ ಹುಟ್ಟುಹಾಕಿದೆ. ಮಾತ್ರವಲ್ಲದೆ ಅವರ ಬಂಧನದ ಬಗ್ಗೆ ಯಾವ ಸುಳಿವನ್ನೂ ನೀಡಿಲ್ಲ ಎಂದು ತಿಳಿದು ಬಂದಿದೆ. ಇಂದು ಯಾವ ಸಮಯಕ್ಕೂ ಮುರುಘಾ ಶ್ರೀಗಳನ್ನು ಬಂಧಿಸಬಹುದು ಎನ್ನುವ ಸೂಚನೆ ಮಠದ ಸುತ್ತ ಪೊಲೀಸ್ ಬಿಗಿಬಂದೋಬಸ್ತ್ನಿಂದ ತಿಳಿದುಬಂದಿತ್ತು. ಹೀಗಾಗಿ ಎಲ್ಲಾ ಸುದ್ದಿಗಾರರೂ ಮಠದ ಮುಂದೆ ಹಾಜರಾಗಿದ್ದರು. ಆದರೆ ಮಠದ ಹಿಂದಿನ ಬಾಗಿಲಿನಿಂದ ಶ್ರೀಗಳನ್ನು ಪೊಲೀಸರು ಬಂಧಿಸಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಇದನ್ನು ಇಷ್ಟು ಗುಪ್ತವಾಗಿ ಪೊಲೀಸರು ಯಾಕೆ ಮಾಡುತ್ತಿದ್ದಾರೆಂದು ಪ್ರಶ್ನೆಗಳು ಉದ್ಬವಿಸಿವೆ.