ಚಿತ್ರದುರ್ಗದ ಜನರ ಅಟ್ಟಹಾಸಕ್ಕೆ ಬಲಿಯಾದ ಜಾಂಬವಂತ
ಚಿತ್ರದುರ್ಗ, ಜನವರಿ, 13: ಜನ ರೊಚ್ಚಿಗೆದ್ದಿದ್ದರು, ಕೈಯಲ್ಲಿ ದೊಣ್ಣೆ ಕಲ್ಲುಗಳಿದ್ದವು, ಮಾನವೀಯತೆ ಎಂಬ ಪದವೇ ಅವರ ಮನಸ್ಸುಗಳಲ್ಲಿ ಸತ್ತು ಹೋಗಿತ್ತು. ಸಾಯಿಸುವುದೊಂದೇ ಅವರ ಮುಖ್ಯ ಉದ್ದೇಶವಾಗಿತ್ತು. ಈ ಎಲ್ಲಾ ಸನ್ನಿವೇಶಗಳು ಬುಧವಾರ ಕಂಡು ಬಂದದ್ದು ಚಿತ್ರದುರ್ಗದ ಉಪನಾಯಕನಹಳ್ಳಿಯಲ್ಲಿ.
ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ ಜಾಂಬವಂತನಿಗೆ (ಕರಡಿ) ರೊಚ್ಚಿಗೆದ್ದ ಸುಮಾರು 10ಕ್ಕೂ ಹೆಚ್ಚು ಮಂದಿ ದೊಣ್ಣೆಗಳಿಂದ ಹಿಗ್ಗಾ ಮುಗ್ಗಾ ಬಾರಿಸಿದ್ದು, ಜನರ ಹೊಡೆತಕ್ಕೆ ಕರಡಿ ಸಾವನ್ನಪ್ಪಿದೆ. ಚಿತ್ರದುರ್ಗದ ಉಪನಾಯಕನಹಳ್ಳಿ ಜನರು ಮಾನವೀಯತೆ ಮರೆತವರು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.[ಚಿರತೆ ಸಂತತಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ]
ಕರಡಿಯು ಮಂಗಳವಾರ ದಾರಿ ತೋಚದೆ ದಿಕ್ಕು ತಪ್ಪಿ ಚಿತ್ರದುರ್ಗದ ಉಪನಾಯಕನಹಳ್ಳಿಯೊಳಗೆ ಬಂದಿತ್ತು. ಬುಧವಾರ ಬೆಳಿಗ್ಗೆ ಪಿಎಸ್ ಐ ಸತೀಶ್ ಹಾಗೂ ಗ್ರಾಮದ ರಘು ದಾಳಿ ಮಾಡಿದ ಸಂದರ್ಭದಲ್ಲಿ ಚಿತ್ರದುರ್ಗದ ಉಪನಾಯಕನಹಳ್ಳಿ ಗ್ರಾಮಸ್ಥರು ಕರಡಿಗೆ ಮನಬಂದಂತೆ ಹೊಡೆದಿದ್ದಾರೆ.[ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]
ಮಂಗಳವಾರ ಗ್ರಾಮದ ರೈತ ರಘು ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಕರಡಿ ಅವರ ಮೇಲೆ ದಾಳಿ ನಡೆಸಿತ್ತು. ರೈತನ ಮೇಲೆ ದಾಳಿ ಮಾಡಿದ ನಂತರ ಯಾರ ಕಣ್ಣಿಗೂ ಕಾಣದೆ ಯಾವುದೋ ಒಂದು ಬಂಡೆಯ ಸಂದಿಯಲ್ಲಿ ಅಡಗಿಕೊಂಡಿತ್ತು. ಈ ಸಂದರ್ಭದಲ್ಲಿ ಕರಡಿ ಹಿಡಿಯುವಂತೆ ಚಿತ್ರದುರ್ಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಪನಾಯಕನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದರು. ಅಧಿಕಾರಿಗಳು ಬಂದು ಕರಡಿಯನ್ನು ಹಿಡಿಯುವ ಮೊದಲೇ ಈ ಘಟನೆ ಘಟಿಸಿದೆ.