ಚಿತ್ರದುರ್ಗ: ರಸ್ತೆ ಕಾಮಗಾರಿ ಅನುದಾನ ಗುಳುಂ ಮಾಡಿದ್ರಾ ಅಧಿಕಾರಿಗಳು?
ಚಿತ್ರದುರ್ಗ, ಡಿಸೆಂಬರ್ 20: ಗ್ರಾಮೀಣ ಪ್ರದೇಶಗಳ ರಸ್ತೆ ಕಾಮಗಾರಿ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆಂದು ಸರ್ಕಾರ ಕೋಟಿ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ.
ಆದರೆ, ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಮಾತಿನಂತೆ, ಸಿಕ್ಕಿದ್ದೇ ಸಿರುಂಡೆ ಎನ್ನುವ ಹಾಗೆ ಅಧಿಕಾರಿಗಳು ಕಾಮಗಾರಿ ಮಾಡದೇ ಲಕ್ಷ ಲಕ್ಷ ರೂಪಾಯಿ ಹಣವನ್ನು ಗುಳುಂ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಆ ರಸ್ತೆ ಯಾವುದು, ಆ ಅಧಿಕಾರಿ ಯಾರು ಅಂತೀರಾ ಮುಂದೆ ಓದಿ...
ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಗುಯಿಲಾಳು ಗ್ರಾಮದಿಂದ ಮಲ್ಲಪ್ಪನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಎಸ್.ಸಿ.ಪಿ/ ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ ನಿರ್ಮಿತಿ ಕೇಂದ್ರದ 2017-2018ನೇ ಸಾಲಿನಲ್ಲಿ ಸಿಸಿ ರಸ್ತೆ ಹಾಗೂ ಡಾಂಬರೀಕರಣ ರಸ್ತೆ ನಿರ್ಮಾಣ 20 ಕಾಮಗಾರಿಗಳನ್ನು ಒಟ್ಟು 10 ಕೋಟಿ ರೂ.ಗಳಿಗೆ ಅನುಷ್ಠಾನಗೊಳಿಸಲು ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರು.

ಆದರೆ ಅಧಿಕಾರಿಗಳು ರಸ್ತೆ ಕಾಮಗಾರಿ ಪ್ರಾರಂಭ ಮಾಡಿ ಜಲ್ಲಿಕಲ್ಲು ಹಾಕಿ, ಡಾಂಬರೀಕರಣ ಮಾಡದೇ ಕಾಮಗಾರಿ ಅರ್ಧಕ್ಕೆ ಮುಗಿಸಿದ್ದಾರೆ. ಇದೀಗ ರಸ್ತೆ ತುಂಬೆಲ್ಲಾ ಜೆಲ್ಲಿ ಕಲ್ಲು, ಮಣ್ಣು ಎದ್ದು, ಗುಂಡಿ ಬಿದ್ದಿವೆ ಎನ್ನಲಾಗಿದೆ. ಮೂರು ವರ್ಷ ಕಳೆದರೂ ಡಾಂಬರೀಕರಣ ಕಾಮಗಾರಿ ಮಾಡದೇ ಲಕ್ಷ ಲಕ್ಷ ರೂಪಾಯಿ ಹಣವನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಗ್ರಾಮಸ್ಥರು "ಡಿ. ಸುಧಾಕರ್ ಅವರು ಶಾಸಕರಾಗಿದ್ದಾಗ, ಭದ್ರಾ ಮೇಲ್ದಂಡೆ ಯೋಜನೆಯಿಂದ 50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿ ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೆ ಯಾವುದೇ ರಸ್ತೆ ಅಭಿವೃದ್ಧಿ ಡಾಂಬರೀಕರಣ ಮಾಡಿಲ್ಲ. ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ ಇತ್ತ ಕಡೆ ಗಮನ ಹರಿಸಿಲ್ಲ," ಎಂದು ಗ್ರಾಮಸ್ಥರು ಆರೋಪಿಸಿದರು.

"ದಿನನಿತ್ಯ ನೂರಾರು ಜನರು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಹುಲಿತೊಟ್ಲು ಗ್ರಾಮದಿಂದ ಸೊಂಡಕೆರೆ ಗ್ರಾಮಕ್ಕೆ ಈ ರಸ್ತೆ ಮಾರ್ಗವಾಗಿ ತಾಯಿ, ತಂದೆ, ಮಗಳು ಹೋಗುತ್ತಿದ್ದಾಗ ರಸ್ತೆಯಲ್ಲಿ ಕಲ್ಲುಗಳಿದ್ದರಿಂದ ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆ ಯಾರು ಹೊಣೆ," ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದರು.
ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರ ವಿರುದ್ಧ ದೂರು ದಾಖಲು ಮಾಡಬೇಕಾಗುತ್ತದೆ. ಈ ವ್ಯಕ್ತಿ ಬಿದ್ದು ಗೊಯಗೊಂಡಿರುವ ಆಸ್ಪತ್ರೆಯ ವೆಚ್ಚವನ್ನು ವ್ಯವಸ್ಥಾಪಕರೇ ಭರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

"2018ರಲ್ಲಿ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ನಮ್ಮೂರಿನ ಗ್ರಾಮದ ಜನರು ರಾಷ್ಟ್ರೀಯ ಹೆದ್ದಾರಿ ಹಾಗೂ ಚಿತ್ರದುರ್ಗಕ್ಕೆ ಹೋಗಬೇಕಾದರೆ ಸುತ್ತಿ ಬಳಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ," ಎಂದು ರೈತ ಮುಖಂಡ ಪರಮೇಶ್ ಹೇಳಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭ ಮಾಡಿ ಡಾಂಬರೀಕರಣ ಪೂರೈಸಿ ಗ್ರಾಮದ ಜನರಿಗೆ ಮುಕ್ತವಾಗಿ ಓಡಾಟಕ್ಕೆ ಅವಕಾಶ ಮಾಡಿ ಕೊಡುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications