ಓಬವ್ವ, ಟಿಪ್ಪು ಜಯಂತಿ ಆಯ್ಕೆ ಜನರದ್ದು; ಸುನೀಲ್ ಕುಮಾರ್
ಚಿತ್ರದುರ್ಗ, ಡಿಸೆಂಬರ್ 28; "ರಾಜ್ಯದಲ್ಲಿ ಓಬವ್ವ ಜಯಂತಿ ಆಚರಣೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಕೋ? ಅಥವಾ ಟಿಪ್ಪು ಜಯಂತಿ ಆಚರಣೆ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕೋ? ರಾಜ್ಯದ ಜನತೆ ತಿರ್ಮಾನ ಮಾಡಬೇಕು" ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಮಂಗಳವಾರ ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ತೆಗೆದು ಹಾಕುತ್ತವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. "ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರ ಮಾಡುವ ಭ್ರಮೆಯಲ್ಲಿದ್ದಾರೆ" ಎಂದು ವ್ಯಂಗ್ಯವಾಡಿದರು.
"ಗೋಹತ್ಯೆ ಕಾನೂನು ನಿಷೇಧ ಮಾಡುತ್ತೇವೆ, ಟಿಪ್ಪು ಜಯಂತಿಯನ್ನು ಮತ್ತೆ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ರೀತಿಯಲ್ಲಿ ಸಿದ್ದರಾಮಯ್ಯ ಹೇಳುತ್ತಾರೆ ಅಂದರೆ ಯಾವ ಸಂದೇಶವನ್ನು ಈ ರಾಜ್ಯಕ್ಕೆ ಕಾಂಗ್ರೆಸ್ ಕೊಡುತ್ತಿದೆ?. ಇದನ್ನು ರಾಜ್ಯದ ಜನ ಗಂಭೀರವಾಗಿ ಗಮನಿಸುತ್ತಿದ್ದಾರೆ" ಎಂದು ಸಚಿವರು ತಿಳಿಸಿದರು.

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಬಾರದೆಂದು ಕಾನೂನಿನಲ್ಲಿದೆ. ಆದರೆ ಬಲತ್ಕಾರದಿಂದ, ಆಸೆ-ಆಮಿಷಗಳಿಂದ ಮತಾಂತರ ಆಗಬಾರದು. ಮತಾಂತರ ಆಗುವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಕೊಡಲಿ ಎಂದು ಕಾಯ್ದೆಯಲ್ಲಿದೆ ಇದ್ಯಾವುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳತ್ತಿಲ್ಲ" ಎಂದರು.
"ಸಿದ್ದರಾಮಯ್ಯ ರಾಜ್ಯಕ್ಕೆ ಒಂದು ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಇವರು ಏನೇ ಹೇಳಲಿ ನಮ್ಮ ನಿಲುವು ನಾವು ಬಿಡುವುದಿಲ್ಲ. ನಾವು ಇದನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತೇವೆ" ಎಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, "ಇದೆಲ್ಲಾ ಒಂದು ಊಹಾಪೋಹ, ದಾವಣಗೆರೆಯಲ್ಲಿ ಅಮಿತ್ ಶಾ ಹಾಗೂ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ ಎಂದು. ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ಶಿಸ್ತಿನ ಕ್ರಮ ತೆಗೆದುಕೊಂಡಿದ್ದೇವೆ; "ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದವರ ವಿರುದ್ದ ಶಿಸ್ತಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂತಹ ಪುಂಡಾಟಿಕೆಗಳನ್ನು ಸಹಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ನಮ್ಮ ಮಹಾಪುರುಷರ ಬಗ್ಗೆ ಗೌರವವಿದೆ, ಎಲ್ಲರೂ ಗೌರವಿಸಬೇಕು. ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಎಲ್ಲರೂ ಗೌರವ ನೀಡಬೇಕು" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆಗಿರುವ ಸುನೀಲ್ ಕುಮಾರ್ ಹೇಳಿದರು.
"ಇಂತಹ ಘಟನೆಗಳು ನಡೆದಾಗ ಗೃಹ ಇಲಾಖೆಯು ಎಚ್ಚರಿಕೆಯನ್ನು ತೆಗೆದುಕೊಂಡಿದೆ. ಸರ್ಕಾರ ಕೂಡ ಸ್ಪಂದನೆ ಕೊಟ್ಟಿದೆ. ಇದಲ್ಲದೆ ಕನ್ನಡ ಪರ ಸಂಘಟನೆಗಳ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದೆ. ಈ ತರಹದ ಘಟನೆಗಳು ನಡೆದಾಗ ಪ್ರತಿಭಟನೆಯ ಮೂಲಕ ಬಂಧನವಾಗಬೇಕು ಎಂದು ಹೇಳುವುದು ಸರಿಯಲ್ಲ, ಪ್ರತಿಭಟನೆ ಕೈಬಿಡಿ, ಸರ್ಕಾರದ ಜೊತೆ ಸಹಕರಿಸಿ" ಎಂದು ಸಚಿವರು ಮನವಿ ಮಾಡಿದರು.












Click it and Unblock the Notifications