Breaking: ಮುರುಘಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ಸ್ಥಳಾಂತರ
ಚಿತ್ರದುರ್ಗ, ಸೆಪ್ಟೆಂಬರ್ 2: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀ ಆರೋಗ್ಯದಲ್ಲಿ ವಿಪರೀತ ಏರುಪೇರಾಗಿರುವ ಹಿನ್ನೆಲೆಯಲ್ಲಿ ಐಸಿಯುಗೆ ಸ್ಥಳಾಂತರಿಸಲಾಗಿದೆ.
ಗುರುವಾರ ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತರ ಸ್ವಾಮೀಜಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಜೈಲಿನ ಸಿಬ್ಬಂದಿ ಉಪಾಹಾರಕ್ಕೆಂದು ಉಪ್ಪಿಟ್ಟು ಮತ್ತು ಹಾಲನ್ನು ನೀಡಿದ್ದರು. ಹಾಲನ್ನಷ್ಟೇ ಸೇವನೆ ಮಾಡಿದ ಶ್ರೀಗಳು ಉಪ್ಪಿಟ್ಟನ್ನು ನಿರಾಕರಿಸಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಜೈಲಿನ ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
Breaking: ಎದೆನೋವಿನಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮುರುಘಾ ಶರಣರು ಶಿಫ್ಟ್
ಮುರುಘಾ ಶ್ರೀಗಳಿಗೆ ವೈದ್ಯರು ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸಿದ್ದಾರೆ. ಇದೀಗ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣದಿಂದ ಐಸಿಯುಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ರಕ್ತದೊತ್ತಡ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರು ಶ್ರೀಗಳಿಗೆ ಊಟ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ವೈದ್ಯರಾದ ರೂಪಾ, ಡಾ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಶ್ರೀಗಳಿಗೆ ಉಸಿರಾಟದ ತೊಂದರೆಯೂ ಕಂಡುಬಂದಿರುವುದಾಗಿ ತಿಳಿದಿದೆ. ಹೆಚ್ಚಿನ ಅಗತ್ಯ ಬಿದ್ದರೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಎದೆ ನೋವಿನಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಶರಣರನ್ನು ದಾವಣಗೆರೆ ಸಮೀಪದ ಹೆಬ್ಬಾಳದ ವಿರಕ್ತ ಮಠದ ಹೆಬ್ಬಾಳು ಮಹಾಂತರುದ್ರ ಸ್ವಾಮಿಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪ್ರಸ್ತುತ ಮುರುಘಾಮಠದ ಪ್ರಭಾರ ಪೀಠದ ಜವಾಬ್ದಾರಿಯನ್ನು ಮಹಾಂತರುದ್ರ ಸ್ವಾಮೀಜಿಗೆ ವಹಿಸಿಕೊಡಲಾಗಿದೆ ಎಂದು ಎನ್ನಲಾಗುತ್ತಿದೆ.
ಮಾಜಿ ಶಾಸಕ ಹರಿಹರ ಶಿವ ಶಂಕರ್ ಭೇಟಿ
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಶರಣರ ಆರೋಗ್ಯ ವಿಚಾರಿಸಲು ಹರಿಹರ ಮಾಜಿ ಶಾಸಕ ಶಿವ ಶಂಕರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶ್ರೀಗಳಿಗೆ ಒಳಗಡೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವ ಹಿನ್ನಲೆಯಲ್ಲಿ ಮಾಜಿ ಶಾಸಕ ಶಿವ ಶಂಕರ್ ಹೊರಗಡೆಗೆ ಶ್ರೀಗಳನ್ನು ನೋಡಲು ಕಾದು ಕುಳಿತಿದ್ದಾರೆ.
ಜೊತೆಗೆ ಎಸ್ ಜೆಎಂ ವಿದ್ಯಾಪೀಠದ ಉದ್ಯೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ವೀರಶೈವ ಸಮಾಜದ ಮುಖಂಡರು ಹಾಗೂ ರಾಜ್ಯದ ನಾನಾಕಡೆಯ ಭಕ್ತರು ಆಗಮಿಸಿದ್ದು, ಮುರುಘಾ ಶ್ರೀ ದರ್ಶನಕ್ಕಾಗಿ ಕಾದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ