ಮೀಸಲಾತಿ; ಯಾದವನಂದ ಶ್ರೀಗಳಿಗೆ ಕಾಡುಗೊಲ್ಲ ಮುಖಂಡರು ಸವಾಲು
ಚಿತ್ರದುರ್ಗ, ಜುಲೈ, 25 : ಕಾಡುಗೊಲ್ಲರು ದಶಕಗಳಿಂದ ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಚಿತ್ರದುರ್ಗ ಗೊಲ್ಲಗಿರಿ ಮಠದ ಯಾದವಾನಂದಶ್ರೀಗಳು ಹೋರಾಟದ ನೇತೃತ್ವ ವಹಿಸಿಲಿ, ಇಲ್ಲವಾದರೆ ಮಠದ ಪೀಠತ್ಯಾಗ ಮಾಡಲು ಸಿದ್ಧರಾಗಿ ಎಂದು ಕಾಡುಗೊಲ್ಲ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ 30ಕ್ಕೂ ಹೆಚ್ಚು ಕಾಡುಗೊಲ್ಲ ಮುಖಂಡರು ಸಭೆ ನಡೆಸಿದರು. ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಾಡುಗೊಲ್ಲ ಒಳಪಂಗಡ ಮೀಸಲಾತಿಗೆ ಬೆಂಬಲವಿಲ್ಲ ಎಂಬ ಶ್ರೀಗಳ ಹೇಳಿಕೆಯನ್ನು ಖಂಡಿಸಿದರು.
ಕಾಡುಗೊಲ್ಲ ಸಮಾಜ ಒಂದು ಉಪಜಾತಿಯಲ್ಲ. ಪ್ರತ್ಯೇಕ ಅಸ್ಮಿತೆ ಹೊಂದಿರುವ ಜಾತಿಯಾಗಿದ್ದು, ನಾವು ಒಳಮೀಸಲಾತಿ ಕೇಳುತ್ತಿಲ್ಲ. ಕಾಡುಗೊಲ್ಲರೇ ಬೇರೆ, ಊರು ಗೊಲ್ಲರೇ ಬೇರೆ. ನಮ್ಮ ಆಚರಣೆಗೂ ಅವರ ಆಚರಣೆಗಳಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಸ್ವಾಮೀಜಿಯವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮಧ್ಯ ಕರ್ನಾಟಕದಲ್ಲಿ ಕಾಡುಗೊಲ್ಲರು ಹೆಚ್ಚಾಗಿ ಇರುವುದರಿಂದ ಮುರುಘಾ ಶರಣರು ಜಾಗವನ್ನು ನೀಡಿ ಮಠ ಸ್ಥಾಪನೆಗೆ ಕೈಜೋಡಿಸಿದರು. ದೇಣಿಗೆ ಸಂಗ್ರಹಿಸಿ ಯಾದವಾನಂದ ಸ್ವಾಮೀಜಿಗೆ ಪಟ್ಟವನ್ನು ಕಟ್ಟಲಾಯಿತು.
ಎ. ಕೃಷ್ಣಪ್ಪ ಆಗಲಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಆಗಲಿ ನಿಮ್ಮನ್ನು ಆಯ್ಕೆ ಮಾಡಿಲ್ಲ. ಕಾಡುಗೊಲ್ಲ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ನೀವು ನಮ್ಮ ಸಮಾಜ ಶ್ರೀಗಳು. ಮಾಗಡಿಯಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಹೇಳಿಕೆ ನೀಡಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಆ ಹೇಳಿಕೆಯನ್ನು ಹಿಂಪಡೆದು, ಇಂದಿನಿಂದಲೇ ಬೆಂಗಳೂರು ಹಾಗೂ ದೆಹಲಿಯಲ್ಲಿ ಕಾಡುಗೊಲ್ಲ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಪೀಠತ್ಯಾಗ ಮಾಡಲು ಸಿದ್ಧರಾಗಿ. ಮಠದ ಪೀಠಾಧಿಪತಿಯಾಗಲು ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

ಯಾದವರಿಗೂ ಹಾಗೂ ಕಾಡುಗೊಲ್ಲರಗೂ ಸಂಬಂಧವಿಲ್ಲ. ಬುಡಕಟ್ಟು ಸಮಾಜವಾದ ಕಾಡುಗೊಲ್ಲರ ಬಗ್ಗೆ ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ, ಶಿವಲಿಂಗೇಗೌಡ ಅವರು ಸೇರಿದಂತೆ ಕಾಡುಗೊಲ್ಲರ ಬಗ್ಗೆ ಸಾಕಷ್ಟು ವಿಚಾರ ತಿಳಿದು ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಪ್ರಸ್ತಾಪ ಮಾಡಿದ್ದಾರೆ.
ಇಂತಹ ಸನ್ನಿವೇಶದಲ್ಲಿ ನಮ್ಮ ಸಮುದಾಯದ ಸ್ವಾಮೀಜಿಯವರು ಇಂತಹ ಅವಹೇಳನಕಾರಿ ಹೇಳಿಕೆ ನೀಡುವುದರ ಜೊತೆಗೆ ಕಾಡುಗೊಲ್ಲ ಎಂಬ ಪದ ಪೀಡೆ ಎಂದಿರುವುದು ಮನಸಿಗೆ ನೋವುಂಟು ಮಾಡಿದೆ. ಕಾಡುಗೊಲ್ಲ ಪೀಡೆ ಪದವಾದರೆ, ನಮ್ಮ ಸಹೋದರಿ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ನೀವು ಪೀಡೆಯಾಗಿದ್ದೀರಾ? ಎಂದು ಶ್ರೀಗಳಿಗೆ ಪ್ರಶ್ನೆ ಹಾಕಿದರು. ಇನ್ನಾದರೂ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಸ್ವಾಮೀಜಿಯವರು ಆಡಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್, ಮಾಜಿ ಜಿ.ಪಂ. ಸದಸ್ಯ ಸಿ. ಬಿ. ಪಾಪಣ್ಣ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.












Click it and Unblock the Notifications