ಚಿತ್ರದುರ್ಗ; ವೇದಾವತಿ ನದಿಯ ಪ್ರವಾಹಕ್ಕೆ ಗ್ರಾಮಗಳು ಜಲಾವೃತ, ನಿರಾಶ್ರಿತ ಶಿಬಿರ ಸ್ಥಾಪನೆ
ಚಿತ್ರದುರ್ಗ, ಸೆಪ್ಟೆಂಬರ್ 8 : ಮಳೆರಾಯನ ಆರ್ಭಟಕ್ಕೆ ಜಿಲ್ಲೆಯ ಜನತೆ ತತ್ತರಿಸಿದ್ದು, ಹಲವಾರು ಜನರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿದೆ. ವೇದಾವತಿ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಪರಶುರಾಂಪುರ ಹೋಬಳಿಯ ಪಾಲುಗೊಂಡನಹಳ್ಳಿ ಮತ್ತು ಸೂರನಹಳ್ಳಿ ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಹಾಲುಗೊಂಡನಹಳ್ಳಿ ಗ್ರಾಮದಲ್ಲಿ 21 ಕುಟುಂಬಗಳ 75 ಜನ ಮತ್ತು ಸೂರನಹಳ್ಳಿ ಗ್ರಾಮದಲ್ಲಿ 12 ಕುಟುಂಬಗಳ 50 ಜನರ ಆರೈಕೆ ಕೇಂದ್ರದಲ್ಲಿ ಈ ಜನರಿಗೆ ಬೇಕಾಗುವಂತ ದೈನಂದಿನ ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕೇಂದ್ರಗಳ ಪರಿಶೀಲನೆಗೆ ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಮತ್ತು ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಅಖಂಡ ಶಿವನ ಭಜನೆ ಕಾರ್ಯಕ್ರಮ ನಿರಾಶ್ರಿತರ ಜೊತೆ ಭಾಗಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಟಿ ರಘುಮೂರ್ತಿ, " ನಿರಾಶ್ರಿತರ ಕೇಂದ್ರದಲ್ಲಿರುವರನ್ನು ನೋಡಿದರೆ ಮನಸಿಗೆ ನೋವು ತರುತ್ತದೆ. ಒಂದು ಕಡೆ ಈ ನೋವಾದರೆ ಇನ್ನೊಂದು ಕಡೆ ಒಂದು ಶತಮಾನದಿಂದಲೂ ನದಿ ತುಂಬಿ ಹರಿಯುತ್ತಿರುವುದನ್ನು ನಾವ್ಯಾರು ಕೂಡ ನೋಡಿರಲಿಲ್ಲ. ಮುಂದಿನ ದಿನಗಳಲ್ಲಿ ರೈತನ ಬದುಕು ಸಮೃದ್ಧಿಯಾಗಲಿದೆ ಎನ್ನುವ ಖುಷಿ ಇದೆ. ಇವೆರಡನ್ನು ಕೂಡ ಸಂತ್ರಸ್ತರು ಮನಗಣಬೇಕು," ಎಂದರು.
ಮುಂದಿನ ದಿನಗಳಲ್ಲಿ ಈ ರೀತಿ ಪ್ರವಾಹ ಸಂಭವಿಸಿದಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ದೃಷ್ಟಿಯಲ್ಲಿ ಪುನರ್ವಸತಿಗೆ 10 ಎಕರೆ ಜಮೀನನ್ನು ಮೀಸಲಿಸಲಾಗಿದೆ. ಇಲ್ಲಿಯ ಸಂತ್ರಸ್ತರಿಗೆ ಆದ್ಯತೆ ಮತ್ತು ಅರ್ಹತೆಗೆ ಅನುಗುಣವಾಗಿ ಸ್ಥಳಾಂತರಿಸಲಾಗುವುದು ಹಾಗೂ ತಾಲೂಕು ಆಡಳಿತದಿಂದ ಯಾವುದೇ ಸಂತ್ರಸ್ತರಿಗೆ ಅನಾನುಕೂಲವಾಗದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಹೇಳಿದರು.

ಕೆಲವು ಕಡೆ ಸಂಪರ್ಕ ಕಡಿತ
ಚಳ್ಳಕೆರೆ ತಾಲೂಕಿನ ಟಿಎನ್. ಕೋಟೆ ಗ್ರಾಮದ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮದ ಕೆಳಕೋಟೆಯ ಹತ್ತಾರು ಮನೆಗಳಿಗೆ ನೀರು ನುಗ್ಗಿ, ಮನೆಗಳು ಜಲಾವೃತವಾಗಿವೆ.
ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಹೆಚ್ಚಳ ಹಿನ್ನೆಲೆ ತಾಲ್ಲೂಕಿನ ಅಮ್ಮನಹಟ್ಟಿ - ಕುರುಬರಹಳ್ಳಿ ಗ್ರಾಮದ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಹಿರಿಯೂರಿನಿಂದ ಅಮ್ಮನಹಟ್ಟಿ ಮಾರ್ಗವಾಗಿ ಕುರುಬರಹಳ್ಳಿ, ವಿವಿ ಪುರ ಗ್ರಾಮ ತಲುಪುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೀರಿನ ಮಟ್ಟ ಕಡಿಮೆ ಆಗುವವರೆಗೂ ಪ್ರಯಾಣಿಕರು ಈ ಭಾಗದಲ್ಲಿ ಪ್ರಯಾಣಿಸಬಾರದು ಹಾಗೂ ನದಿ ಪಾತ್ರದ ಜನರು ಎಚ್ಚರಿಕೆಯಿಂದರಲೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರೈತರಿಗೆ ಪರಿಹಾರ ಕೊಡಿಸಲು ಶಾಸಕಿ ಸೂಚನೆ
ಹಿರಿಯೂರು ತಾಲೂಕಿನಲ್ಲಿ ಅತಿಯಾದ ಮಳೆ ಗಾಳಿಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆಗಳನ್ನು ಶೀಘ್ರದಲ್ಲೇ ಸರ್ವೇ ಮಾಡಿ ಸರ್ಕಾರದ ಪರಿಹಾರಕ್ಕೆ ವರದಿ ಸಲ್ಲಿಸುವಂತೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಶಾಸಕರು ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವುದರಿಂದ ಅಧಿಕಾರಿಗಳು ನೆಪ ಹೇಳದೆ ಹಗಲು ರಾತ್ರಿ, ರಜಾದಿನಗಳಲ್ಲೂ ಒಂದೆರಡು ದಿನಗಳು ಕರ್ತವ್ಯ ನಿರ್ವಹಿಸಿ ರೈತರಿಗೆ ಪರಿಹಾರ ಕೊಡಿಸಬೇಕು. ತಾಲ್ಲೂಕಿನಲ್ಲಿ ಅಡಿಕೆ, ತೆಂಗು, ಬಾಳೆ, ಈರುಳ್ಳಿ ಹತ್ತಿ, ದಾಳಿಂಬೆ, ಪಪ್ಪಾಯಿ, ಶೇಂಗಾ ಮುಂತಾದ ಬೆಳೆಗಳು ಮಳೆಯಿಂದ ಹಾನಿಯಾಗಿದ್ದು ಹೋಬಳಿವಾರು ಸರ್ವೇ ವರದಿ ನೀಡಬೇಕೆಂದು ಶಾಸಕಿ ಸೂಚಿಸಿದರು.

ಹಲವು ಮನೆಗಳಿಗೆ ಹಾನಿ
ಭಾರಿ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 117 ಮನೆಗಳು ಭಾಗಶಃ ಹಾಗೂ 7 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ 31, ಹಿರಿಯೂರು 32, ಚಳ್ಳಕೆರೆ 5, ಹೊಸದುರ್ಗ 19, ಹೊಳಲ್ಕೆರೆ 24, ಮೊಳಕಾಲ್ಮುರು 6 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. 59 ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನದಿ ನೀರಿನ ಮಾದರಿಯಲ್ಲಿ ರಸ್ತೆ, ಜಮೀನುಗಳಿಗೆ ನೀರು ಹರಿಯಲಾರಂಭಿಸಿದೆ.

ಜಲಾಶಯದ ನೀರಿನಿಂದ ಪ್ರವಾಹ ಭೀತಿ
ವಾಣಿವಿಲಾಸ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 130 ಅಡಿ ಇದ್ದು, ಮಂಗಳವಾರ 133 ಅಡಿ ತಲುಪಿತ್ತು. ಅಣೆಕಟ್ಟೆಯ ಸುರಕ್ಷತೆ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರದಿಂದ ತೂಬಿನ ಮೂಲಕ ನಾಲೆಗಳಿಗೆ ನೀರು ಬಿಟ್ಟಿದ್ದಾರೆ. ಇದರಿಂದ ಬುಧವಾರ ಬೆಳಗಿನ ವೇಳೆಗೆ ವೇದಾವತಿ ನದಿಯಲ್ಲಿ ಮತ್ತೆ ನೀರಿನ ಮಟ್ಟ ಹೆಚ್ಚಲಿದೆ. ಮಳೆ ಮುಂದುವರಿದರೆ ನದೀ ಪಾತ್ರದ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.












Click it and Unblock the Notifications