ಮುರುಘಾ ಮಠಕ್ಕೆ ರಾಹುಲ್ ಭೇಟಿ, ಲಿಂಗ ದೀಕ್ಷೆ ಸ್ವೀಕಾರ!
ಚಿತ್ರದುರ್ಗ, ಆಗಸ್ಟ್ 3: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಸಿದ್ದರಾಮಯ್ಯರ 75 ಜನ್ಮದಿನದ ಅಮೃತಮಹೋತ್ಸವಕ್ಕಾಗಿ ಕರ್ನಾಟಕಕ್ಕೆ ಅವರು ಆಗಮಿಸಿದ್ದಾರೆ.
ಮಂಗಳವಾರ ರಾತ್ರಿ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ಅಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆಗೆ ಸಂವಾದ ನಡೆಸಿದ್ದರು. ಬುಧವಾರ ಬೆಳಗ್ಗೆ ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ದಾವಣಗೆರೆಗೆ ಆಗಮಿಸುವ ವೇಳೆ ಚಿತ್ರದುರ್ಗಕ್ಕೆ ಭೇಟಿ ನೀಡಿದರು.
ಚಿಕ್ಕಮಗಳೂರು; ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ನಗರದ ಐತಿಹಾಸಿಕ ಮುರುಘಾ ಮಠಕ್ಕೆ ಆಗಮಿಸಿದ ಅವರು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 20ಕ್ಕೂ ಹೆಚ್ಚು ಮಠಾಧೀಶರ ಜೊತೆಗೆ ಸಂವಾದ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆಗಿದ್ದರು.
ಈ ವೇಳೆ ರಾಹುಲ್ ಗಾಂಧಿಗೆ ಮಠದ ಅಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಲಿಂಗ ದೀಕ್ಷೆ ನೀಡಿದರು. ಲಿಂಗಪೂಜೆ ಆಚರಣೆ ಬಗ್ಗೆ ಮುರುಘಾಶ್ರೀ ಗಳಿಂದ ರಾಹುಲ್ ಗಾಂಧಿಗೆ ಪ್ರವಚನ ನೀಡಿದರು.
ಸಂವಾದದ ವೇಳೇ ಹಾವೇರಿಯ ಹೊಸಮಠ ಸ್ವಾಮೀಜಿ, "ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ" ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಈ ವೇಳೆ ಶಿವಮೂರ್ತಿ ಮುರುಘಾ ಶರಣರು ಮಧ್ಯ ಪ್ರವೇಶಿಸಿ' ನಮ್ಮ ಮಠಕ್ಕೆ ಯಾರೇ ಭೇಟಿ ನೀಡುತ್ತಾರೋ ಅವರಿಗೆ ಆಶೀರ್ವಾದ ಇರುತ್ತದೆ " ಎಂದು ಹೇಳಿ ಅವರ ಮುಂದಿನ ಸಿಎಂ ಬಗೆಗಿನ ಮಾತುಕತೆಯನ್ನು ನಿಲ್ಲಿಸಿದರು ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕೂಡಾ ಮುರುಘಾ ಮಠಕ್ಕೆ ಭೇಟಿ ನೀಡಿದ್ದರು. ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿ ಅಲ್ಲಿಯೇ ವಾಸ್ತವ್ಯ ಹೂಡಿ ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಿದ್ದರು.
ಪಾಸ್ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಜಗಳ; ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಆಗಮನದ ಹಿನ್ನಲೆ ಮಠಾಧೀಶರ ಸಂವಾದದಲ್ಲಿ ಪಾಲ್ಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆಯಿತು.
ರಾಹುಲ್ ಭೇಟಿ ಹಿನ್ನಲೆಯಲ್ಲಿ ಮಠಕ್ಕೆ ಭಾರೀ ಭದ್ರತೆ ಕಲ್ಪಿಸಲಾಗಿತ್ತು. ಮಠದ ಪ್ರವೇಶ ಹಾಗೂ ಸಂವಾದದಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ವತಿಯಿಂದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ವಿತರಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಪರಸ್ಪರ ವಾಗ್ವಾದ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ರಾಹುಲ್ ಗಾಂಧಿ ದಾವಣಗೆರೆಯಲ್ಲಿ ನಡೆಯಲಿರುವ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಿದ್ದಾರೆ. ದಾವಣಗೆರೆಯ ಹೊರವಲಯದ ಕುಂದವಾಡದಲ್ಲಿರುವ ಶಾಮನೂರು ಪ್ಲಾಲೇಸ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೆ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ.