ಚಿತ್ರದುರ್ಗ: ರೈತರಿಂದ ರೇಷ್ಮೆ ಬೆಳೆ ಮಾಹಿತಿ ಪಡೆದ ರಾಹುಲ್ ಗಾಂಧಿ
ಚಿತ್ರದುರ್ಗ, ಅಕ್ಟೋಬರ್ 13: ಸಂಸದ ಹಾಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆಯ ಕರ್ನಾಟಕದಲ್ಲಿ 14ನೇ ದಿನ ಪೂರೈಸುತ್ತಿದೆ.
ಮಳೆಯ ನಡುವೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಇಂದು ಬೆಳಗ್ಗೆ ಭಾರತ್ ಜೋಡೊ ಯಾತ್ರೆ ಆಂಭಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇಂದಿನ ಭಾರತ್ ಜೋಡೊ ಪಾದಯಾತ್ರೆಗೆ ಸಾಥ್ ನೀಡಿದರು.
ಕೋನಸಾಗರ ಹತ್ತಿರ ವಿಶ್ರಾಂತಿ ಪಡೆದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ವಿರಾಮದ ಬಳಿಕ 14ನೇ ದಿನದ ಪಾದಯಾತ್ರೆ ಗುರುವಾರ ಸಂಜೆ 4ಗಂಟೆಗೆ ಮತ್ತೆ ಆರಂಭಿಸಿದರು.ಕಾಂಗ್ರೆಸ್ ನಾಯಕರು 7 ಗಂಟೆಗೆ ಮೊಳಕಾಲ್ಮೂರು ಕಾಂಗ್ರೆಸ್ ಕಛೇರಿಯವರೆಗೆ ತಲುಪಿ ನಂತರ ರಾಂಪುರ ಬಳಿ ಮತ್ತೆ ವಿಶ್ರಾಂತಿ ಪಡೆಯಲಿದ್ದಾರೆ.

ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೊಳಕಾಲ್ಮೂರು ತಾಲೂಕಿನ ಕೋನಸಾಗರಕ್ಕೆ ಸಾಗುವ ಮಾರ್ಗದಲ್ಲಿ ಸ್ಥಳೀಯ ರೈತನ ಜಮೀನಿಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೈತ ಬೆಳೆಯುತ್ತಿರುವ ಹಿಪ್ಪುನೇರಳೆ ಹಾಗೂ ರೇಷ್ಮೆ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ದಿನದಿಂದ ದಿನಕ್ಕೆ ಹೊಸ ವಿಶೇಷತೆಗೆ ಸಾಕ್ಷಿಯಾಗುತ್ತಿದೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಉತ್ತಮ ಬೆಂಬಲ ಸಿಕ್ಕಿದ್ದು, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಕೂಲಿ ಕಾರ್ಮಿಕರು, ಮಕ್ಕಳು ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ರಾಹುಲ್ ಗಾಂಧಿಯೊಂದಿಗೆ ಪಾದಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಇನ್ನು ವಿಶೇಷವೆಂಬಂತೆ ನಿನ್ನೆ ರಾಹುಲ್ ಗಾಂಧಿ ಕರ್ನಾಟಕದ ಅಂಗಾಂಗ ದಾನಿಗಳ ಕುಟುಂಬಸ್ಥರೊಂದಿಗೆ ಭಾರತ್ ಜೋಡೋ ಯಾತ್ರೆಯ ಸಮಯ ಕಳೆದಿದ್ದರು.
ಅಕ್ಟೋಬರ್ 15 ರಂದು ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಭಾರತ್ ಜೋಡೋ ಪಾದಯಾತ್ರೆಯ ಬಹಿರಂಗ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಛತ್ತೀಸಗಢದ ಸಿಎಂ ಭೂಪೇಶ್ ಬಗೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.












Click it and Unblock the Notifications