ಪಿಎಸ್ಐ ಹಗರಣ; ಕಾಂಗ್ರೆಸ್ ಆರೋಪಕ್ಕೆ ಸಚಿವರ ದಿಟ್ಟ ಉತ್ತರ
ಚಿತ್ರದುರ್ಗ,ಜು5: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಬಂಧನದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ನೀಡಬೇಕು ಕಾಂಗ್ರೆಸ್ ಒತ್ತಾಯಿಸಿದೆ.
ಮಂಗಳವಾರ ಚಿತ್ರದುರ್ಗದಲ್ಲಿ ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದರು. "ಅರ್ಥವಿಲ್ಲದ ಅಪಾದನೆ ಮಾಡುವುದಕ್ಕೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಆಧಾರವಿಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ" ಎಂದರು.
"ಗೃಹ ಸಚಿವರ ಇಲಾಖೆಯಲ್ಲಿ ಯಾರೇ ತಪ್ಪು ಮಾಡಿದರು ಗೃಹ ಸಚಿವರಿಗೆ ಬರುತ್ತದೆಯೇ?. ಆಧಾರವಿಲ್ಲದ ಆರೋಪ ಮಾಡುವುದು ಕಾಂಗ್ರೆಸ್ ನಾಯಕರಿಗೆ ಶೋಭೆ ತರುವುದಿಲ್ಲ" ಎಂದು ಸಚಿವರು ಹೇಳಿದರು.

"ನಮ್ಮ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಸಿದ್ದು, ಅಕ್ರಮದಲ್ಲಿ ಭಾಗಿಯಾದವರನ್ನು ಬಿಡುವ ಪ್ರಶ್ನೆ ಇಲ್ಲ. ಇದು ಇಂದಿನಿಂದ ನಡೆದಿರುವ ಅಕ್ರಮವಾಗಿದೆಯೇ?. ಅಂದು ಕಾಂಗ್ರೆಸ್ ನಾಯಕರು ಕಣ್ಣುಮುಚ್ಚಿ ಕುಳಿತಿದದ್ದರು" ಎಂದು ಆರೋಪಿಸಿದರು.
ಒಣ ಹೇಳಿಕೆ ಬೇಡ; "ಪಿಎಸ್ಐ ಅಕ್ರಮದಲ್ಲಿ ಕಿಂಗ್ ಪಿನ್ ಇದ್ದರೆ ಅವರ ಹೆಸರು ಹೇಳಿದರೆ ಸರ್ಕಾರ, ಉರುಳುತ್ತದೆ" ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಕಿಂಗ್ ಪಿನ್ ಯಾರೇ ಇರಲಿ ಅವರ ಬಗ್ಗೆ ಮಾಹಿತಿ ನೀಡಬೇಕು. ಮಾಹಿತಿ ಕೊಟ್ಟರೆ ರಾಜ್ಯಕ್ಕೆ ಒಂದೊಳ್ಳೆ ಕೆಲಸ ಮಾಡಿದಂತೆ ಆಗುತ್ತದೆ" ಎಂದರು.

"ಅವರಿದ್ದಾರೆ, ಇಲ್ಲಿದ್ದಾರೆ ಎಂದು ಹಿಟ್ ಅಂಡ್ ರನ್ ಹೇಳಿಕೆ ಕೊಡುವ ನಾಯಕರ ಬಗ್ಗೆ ಮಾತನಾಡಲ್ಲ. ಸುಮ್ಮನೆ ಒಣ ಹೇಳಿಕೆ ನೀಡುವುದು, ಪ್ರಚಾರಕ್ಕಾಗಿ ಹೇಳಿಕೆ ನೀಡುವುದು ಸರಿಯಲ್ಲ. ಹೆಸರು ಬಹಿರಂಗ ಪಡಿಸಿದರೆ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ" ಎಂದು ಹಾಲಪ್ಪ ಆಚಾರ್ ತಿಳಿಸಿದರು.
"ಹಗರಣದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಲಾಗಿದೆ. ಯಾವ ಐಎಎಸ್ ಅಧಿಕಾರಿ ಆಗಲಿ, ಐಪಿಎಸ್ ಅಧಿಕಾರಿಯಾಗಲಿ, ಮತ್ತೊಬ್ಬರಾಗಲಿ ಯಾರನ್ನು ಬಿಟ್ಟಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ಸಚಿವರು ಹೇಳಿದರು.












Click it and Unblock the Notifications