ಪರೀಕ್ಷಾ ಪೇ ಚರ್ಚಾ: ಚಿತ್ರದುರ್ಗದ ವ್ಯಕ್ತಿಗೆ ಪಿಎಂ ಕಚೇರಿಯಿಂದ ಪ್ರಶಂಸನೀಯ ಪತ್ರ
ಚಿತ್ರದುರ್ಗ, ನವೆಂಬರ್ 15: ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಕಳೆದ ಆಗಸ್ಟ್ನಲ್ಲಿ ನಡೆದ 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮ ನಡೆದಿತ್ತು. ಈ ಸಂವಾದದಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗದ ಪಾಲಕರೊಬ್ಬರಿಗೆ ಪ್ರಧಾನಿ ಕಚೇರಿಯಿಂದ ಪ್ರಶಂಸನೀಯ ಪತ್ರ ಲಭಿಸಿದೆ.
ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಗ್ರಾಮದ ಪಿ. ಕಣುಮಪ್ಪ ಅರಣ್ಯ ಇಲಾಖೆಯಲ್ಲಿ ಕಳೆದ 16 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ನವೆಂಬರ್ 05 ರಂದು ಪ್ರಧಾನಿ ಕಚೇರಿಯಿಂದ ಪತ್ರ ಬಂದಿದೆ. ಈ ಬಗ್ಗೆ ಕಣುಮಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಆ ಪತ್ರದ ಸಾರಾಂಶ ಈ ರೀತಿ ಇದೆ. ಪರೀಕ್ಷಾ ಪೆ ಚರ್ಚೆಯಲ್ಲಿ ಪೋಷಕರಾಗಿ ನಿಮ್ಮ ಉತ್ಸಾಹಭರಿತ ಉಲ್ಗೊಳ್ಳುವಿಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ. ನಿಮ್ಮ ಪಾಲ್ಗೊಳ್ಳುವಿಕೆಯು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮಾತ್ರವಲ್ಲದೇ ನಮ್ಮ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಹೊಂದಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ಮಾರ್ಗದರ್ಶಿಗಳು ಮತ್ತು ಪೋಷಕರಾಗಿ, ಪ್ರತಿಯೊಂದು ಹಂತದಲ್ಲೂ ಮಕ್ಕಳಿಗೆ ನೀವು ಅತ್ಯಂತ ಸ್ಫೂರ್ತಿ ನೀಡುತ್ತೀರಿ ಮತ್ತು ಅವರ ಆತ್ಮವಿಶ್ವಾಸ ವನ್ನು ಬಲಗೊಳಿಸಲು ನೆರವಾಗುತ್ತೀರಿ ಎಂದು ನನ್ನ ದೃಢವಾದ ನಂಬಿಕೆ. 21ನೇ ಶತಮಾನ ಅವಕಾಶಗಳ ಯುಗ. ಬಾಹ್ಯಾಕಾಶದಿಂದ ಕ್ರೀಡೆಯವರೆಗೆ, ನವೋದ್ಯಮಗಳಿಂದ ತಂತ್ರಜ್ಞಾನದವರೆಗೆ, ತಾಂತ್ರಿಕತೆಯಿಂದ ಕಲೆಯವರೆಗೆ, ಯುವ ಸಮೂಹಕ್ಕೆ ಪ್ರಜ್ವಲಿಸಲು ಹಲವಾರು ಮಾರ್ಗಗಳಿವೆ.
ಅಸಾಧಾರಣ ಕೌಶಲ್ಯ ಮತ್ತು ಅಪಾರ ಶಕ್ತಿಯುಳ್ಳ ಈಗಿನ ಯುವ ಸಮೂಹಕ್ಕೆ ಯಾವುದೇ ಕನಸನ್ನು ನನಸಾಗಿಸುವುದು ಅಸಾಧ್ಯವಲ್ಲ. ಭವ್ಯ, ಸ್ವಾವಲಂಬಿ ಭಾರತ ನಿರ್ಮಿಸಲು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಸಮರ್ಪಣ ಭಾವದ ಪ್ರಯತ್ನಗಳಿಗೆ ಇದೊಂದು ಅವಕಾಶ, ಇದು ನಮ್ಮ ಯುವ ಸಮೂಹಕ್ಕೆ ಮಾತ್ರವಲ್ಲದೇ ದೇಶದ ಭವಿಷ್ಯವೂ ರೂಪಿಸುವ ನಿರ್ಣಾಯಕ ಅವಧಿಯಾಗಿದೆ.

ಸಾಮೂಹಿಕ ಸಂಕಲ್ಪ ಮತ್ತು ಪ್ರಯತ್ನಗಳಿಗಾಗಿ ನಾವೆಲ್ಲರೂ ಒಟ್ಟಿಗೆ ಮುನ್ನಡೆಯೋಣ, ರಾಷ್ಟ್ರದ ಅಭ್ಯುದಯದಲ್ಲಿ ಎಲ್ಲರೂ ಸಕ್ರಿಯ ಪಾಲುದಾರರಾಗುತ್ತೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಪ್ರಶಂಸನೀಯ ಪತ್ರದ ಬಗ್ಗೆ ಕುರಿತು ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡಿರುವ ಕಣುಮಪ್ಪ, ನನ್ನ ಮಗಳು ನಗರದ ಸ್ಟೆಪ್ಪಿಂಗ್ ಸ್ಟೋನ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಪರೀಕ್ಷಾ ಪೇ ಚರ್ಚೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮುಂಚಿತವಾಗಿ ನೋಂದಣಿ ಮಾಡಿಸಲಾಗಿತ್ತು. ಸುಮಾರು ನಾಲ್ಕು ತಿಂಗಳ ಹಿಂದೆ ನನಗೆ ಕರೆ ಬಂದಿತ್ತು. ಆ ಕರೆಗೆ ನಾನು ಉತ್ತರಿಸಿದ್ದೆ. ಅದಾದ ನಂತರ ಎರಡು ಮೂರು ಬಾರಿ ಅವರ ಕರೆಗೆ ಪ್ರತಿಕ್ರಿಯೆ ನೀಡುತ್ತಿದ್ದೆ ಎಂದರು. ಪ್ರಧಾನಿ ಕಚೇರಿಯಿಂದ ನನಗೆ ಪತ್ರ ಬರುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಪತ್ರ ನೋಡಿ ಅಚ್ಚರಿ ಹಾಗೂ ಸಂತೋಷವಾಯಿತು. ಪಿಎಂ ಕಚೇರಿಯಿಂದ ಬಂದ ಪತ್ರ ನಮಗೆ ಇನ್ನಷ್ಟು ಸಂತಸ ಮೂಡಿಸಿದೆ ಎಂದು ತಿಳಿಸಿದರು.












Click it and Unblock the Notifications