ಲೋಕಾಯುಕ್ತರಿಗೆ ಚಳ್ಳೆಹಣ್ಣು ತಿನ್ನಿಸಿದ ಚಿತ್ರದುರ್ಗ ಎಸಿ
ಚಿತ್ರದುರ್ಗ, ಫೆಬ್ರವರಿ, 26: ಕರ್ನಾಟಕ ಲೋಕಾಯುಕ್ತದಲ್ಲಿ ಮತ್ತೊಂದು ಹಗರಣದ ವಾಸನೆ ಎದ್ದಿದೆ. ದಾಳಿ ಮಾಡಲು ಹೋದ ಲೋಕಾಯುಕ್ತ ತಂಡಕ್ಕೆ ಚಿತ್ರದುರ್ಗ ಜಿಲ್ಲೆ ಉಪವಿಭಾಗಾಧಿಕಾರಿ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಭೂ ಪರಿವರ್ತನೆ ಮಾಡಲು 10 ಲಕ್ಷ ರು. ಲಂಚ ಕೇಳಿದ್ದ ಉಪವಿಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ ಲಂಚದ ಸಂಗತಿಯನ್ನೇ ದಿಢೀರ್ ಎಂದು ಕೈಬಿಟ್ಟಿದ್ದಾರೆ.
ಬಳ್ಳಾರಿ ಮೂಲದ ಉದ್ಯಮಿ ರಾಜಶೇಖರ್ ಚಿತ್ರದುರ್ಗದಲ್ಲಿ ಜಮೀನು ಖರೀದಿ ಮಾಡಿದ್ದರು. ಈ ಭೂಮಿಯನ್ನು ಉದ್ಯಮಕ್ಕೆ ಅನುಕೂಲವಾಗುವಂತೆ ಪರಿವರ್ತನೆ ಮಾಡಲು ರಾಜಶೇಖರ್ ಎಸಿ ತಿಪ್ಪೇಸ್ವಾಮಿಗೆ ಮನವಿ ಸಲ್ಲಿಸಿದ್ದರು.
ಆದರೆ ಭೂಮಿಯನ್ನು ಪರಿವರ್ತನೆ ಮಾಡಿ ಕೊಡಲು 10 ಲಕ್ಷ ರು. ಲಂಚ ನೀಡಬೇಕಾಗುತ್ತದೆ ಎಂದು ಹೇಳಿದ್ದ ತಿಪ್ಪೇಸ್ವಾಮಿ ಅದನ್ನು ಚೀಟಿಯಲ್ಲಿ ಬರೆದು ರಾಜಶೇಖರ್ ಗೆ ಕೊಟ್ಟಿದ್ದರು. ಚೀಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಆಂಜನೇಯ ಮತ್ತು ಅವರ ಕಚೇರಿಯವರಿಗೂ ಪಾಲು ನೀಡಬೇಕು ಎಂದು ಬರೆದಿದ್ದರು. ಇದನ್ನು ಆಧರಿಸಿ ರಾಜಶೇಖರ್ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ ತಂಡ ದಾಳಿ ಮಾಡಲು ಚಿತ್ರದುರ್ಗಕ್ಕೆ ಹೊರಟಿತ್ತು. [ಕರ್ನಾಟಕ ಲೋಕಾಯುಕ್ತಕ್ಕೆ ಅಂತಿಮವಾಗಿ ಯಾರು?]
ಆದರೆ ಲೋಕಾಯುಕ್ತ ದಾಳಿ ಸುಳಿವನ್ನು ಅರಿತ ತಿಪ್ಪೇಸ್ವಾಮಿ ಲಂಚದ ಸಂಗತಿಯನ್ನು ಇದ್ದಕ್ಕಿಂದಂತೆ ಕೈ ಬಿಟ್ಟಿದ್ದಾರೆ. ಎಸಿಯನ್ನು ಟ್ರ್ಯಾಪ್ ಮಾಡಲು ಹೋದ ತಂಡ ಬರಿಗೈನಲ್ಲಿ ಹಿಂದಕ್ಕೆ ಬಂದಿದೆ. ರಾಜಶೇಖರ್ ನೀಡಿದ ದೂರು ದಾಖಲಿಸಿಕೊಂಡು ಚಿತ್ರದುರ್ಗಕ್ಕೆ ತೆರಳಿದ 18 ಜನ ಲೋಕಾಯುಕ್ತ ಅಧಿಕಾರಿಗಳ ತಂಡ ಬರಿಗೈನಲ್ಲಿ ಹಿಂದಕ್ಕೆ ಬರುವಂತೆ ಆಗಿದೆ. [ಲೋಕಾಯುಕ್ತ ಹಗರಣದ ಟೈಮ್ ಲೈನ್]
ಈ ಪ್ರಕರಣ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಲೋಕಾಯುಕ್ತ ಕಚೇರಿಯಿಂದಲೇ ಮಾಹಿತಿ ಸೋರಿಕೆಯಾದ ಸಂಭವವಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಎಸಿ ತಿಪ್ಪೇಸ್ವಾಮಿ ವಿರುದ್ಧ ಲಂಚ ಕೇಳಿದ ಪ್ರಕರಣ, ಕಚೇರಿಯಿಂದಲೇ ಮಾಹಿತಿ ಸೋರಿಕೆ ಮತ್ತು ಆಂಜನೇಯ ಹೆಸರು ಕೇಳಿಬಂದಿರುವುದು ಮೂರು ಸಂಗತಿಗಳ ಬಗ್ಗೆ ಇದೀಗ ತನಿಖೆ ನಡೆಸಬೇಕಾಗಿದೆ.