ವಿಶೇಷ ವರದಿ: ಮಾತು ತಪ್ಪಿದ ಸಚಿವ; ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕನಸು ಭಗ್ನ
ಚಿತ್ರದುರ್ಗ, ಫೆಬ್ರವರಿ 5: ಕೋಟೆನಾಡು ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜಿನ ಜೊತೆಗೆ ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಹೇಳಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಡಾ.ಕೆ ಸುಧಾಕರ್ ಅವರ ದೀಪಾವಳಿ ಗಿಫ್ಟ್ ಕನಸು ಭಗ್ನವಾಗುವಂತೆ ಕಾಣುತ್ತಿದೆ.
ವಿಧಾನಸಭಾ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕೇಳಿದ "ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡುವುದು ಯಾವ ಹಂತದಲ್ಲಿದೆ. ಇದಕ್ಕೆ ನಿಗದಿಪಡಿಸಿದ ಅನುದಾನ ಎಷ್ಟು, ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಅಂದಾಜು ಎಷ್ಟು ಮೊತ್ತದ ಮಂಜೂರಾತಿ ನೀಡಲಾಗುವುದು ಎಂದು ಪ್ರಶ್ನೆ ಕೇಳಿದರು.
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
ಆರ್ಥಿಕ ಮಿತವ್ಯಯದ ಕಾರಣ
ಇದಕ್ಕೆ ವೈದ್ಯಕೀಯ ಸಚಿವರು ಲಿಖಿತ ರೂಪದಲ್ಲಿ 2013-14ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದ್ದು, ಸರ್ಕಾರದ ಆದೇಶ ಸಂಖ್ಯೆ ಆಕುಕ 172 ಎಂಪಿಎಸ್ 2014, ದಿನಾಂಕ 12/06/2014 ರಲ್ಲಿ ಸದರಿ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಆದರೆ ಆರ್ಥಿಕ ಮಿತವ್ಯಯದ ಕಾರಣದಿಂದಾಗಿ ಆಯವ್ಯಯ ಘೋಷಣೆಯಂತೆ ಸದರಿ ಆರ್ಥಿಕ ವರ್ಷದಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಆಗಿರುವುದಿಲ್ಲ. ರಾಜ್ಯ ಸರ್ಕಾರದ ವತಿಯಿಂದ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅಂದಾಜು ರೂ 610.00 ಕೋಟಿ ರೂ.ಗಳ ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ ರೂ. 600 ಕೋಟಿಗಳ ಆವರ್ತಕ ವೆಚ್ಚದ ಅವಶ್ಯಕತೆ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ಸ್ಥಾಪನೆಗಾಗಿ ಯಾವುದೇ ಅನುದಾನವನ್ನು ಒದಗಿಸುವುದಿಲ್ಲ.
ವೈದ್ಯಕೀಯ ಶಿಕ್ಷಣ ಸಚಿವರಿಂದ ಸ್ಪಷ್ಟನೆ
ಚಿತ್ರದುರ್ಗ ಮೆಡಿಕಲ್ ಕಾಲೇಜು ಮಂಜೂರಾತಿ ಯಾವ ಕಾಲಮಿತಿಯಲ್ಲಿ ಮಾಡಲಾಗುವುದು? ಎಂದು ಕೇಳಿದ ಎರಡನೇ ಪ್ರಶ್ನೆಗೆ ಪ್ರಸ್ತುತ ಅನುದಾನದ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದಲೇ ಪೂರ್ಣ ವೆಚ್ಚ ಭರಿಸಿ, ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ ಎಂದು ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಇದರಿಂದ ಕೋಟೆನಾಡು ಚಿತ್ರದುರ್ಗದ ಜನತೆಗೆ ಸದ್ಯಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು ಮರಿಚಿಕೆಯಾಗುವಂತೆ ಕಾಣುತ್ತಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಚಿವರು ಚಿತ್ರದುರ್ಗಕ್ಕೆ ಭೇಟಿ ನೀಡಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದ್ದರು.
ನೀಲನಕ್ಷೆ ಸಿದ್ಧಪಡಿಸುವಂತೆ ಸೂಚನೆ ಕೊಟ್ಟಿದ್ದರು
ಈ ಹಿಂದೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್ ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದರು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಾಲೇಜು ನಿರ್ಮಾಣಕ್ಕೆ ಗುರುತಿಸಿದ ಸ್ಥಳವನ್ನು ನವೆಂಬರ್ ತಿಂಗಳ ಶುಕ್ರವಾರ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಅಲ್ಲದೆ ನಿಗದಿತ ಸ್ಥಳದ ವಿವರ ಪಡೆದು ವಿನ್ಯಾಸದ ನೀಲನಕ್ಷೆ ಪರಿಶೀಲಿಸಿದ್ದರು. ನಿರುಪಯುಕ್ತ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ನೂತನ ನೀಲನಕ್ಷೆ ಸಿದ್ಧಪಡಿಸುವಂತೆ ಸೂಚನೆ ಸಹ ಕೊಟ್ಟಿದ್ದರು.
ಕಾಲೇಜು ಸ್ಥಾಪನೆಗೆ ಅಂದಾಜು ರೂ. 500 ಕೋಟಿ ಅಗತ್ಯವಿದೆ
‘ದೀಪಾವಳಿಗೂ ಮೊದಲೇ ಚಿತ್ರದುರ್ಗದ ಜನರಿಗೆ ಮುಖ್ಯಮಂತ್ರಿ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುಂದಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ' ಎಂದು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದರು. ‘ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಂದಾಜು ರೂ. 500 ಕೋಟಿ ಅಗತ್ಯವಿದೆ. ಪ್ರಾರಂಭಿಕ ಹಂತದಲ್ಲಿ ಸರ್ಕಾರ ರೂ. 50 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾ ಖನಿಜ ನಿಧಿಯ (ಡಿಎಂಎಫ್) ಮೂರನೇ ಒಂದು ಭಾಗವನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ ' ಎಂದು ಮಾಹಿತಿ ನೀಡಿದ್ದರು.
Recommended Video
ಸಚಿವರು ಹಾಗೂ ಸರ್ಕಾರ ಮಾತು ತಪ್ಪಿದಂತಾಗಿದೆ
‘ವೈದ್ಯಕೀಯ ಕಾಲೇಜಿಗೆ ಸುಮಾರು 20 ಎಕರೆಯಷ್ಟು ಭೂಮಿಯ ಅಗತ್ಯವಿದೆ. ಕಾಲೇಜಿಗೆ ಗುರುತಿಸಿದ ಸ್ಥಳದಲ್ಲಿ ಹಳೆಯ ಕಟ್ಟಡಗಳಿವೆ. ಇವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ವೈದ್ಯಕೀಯ ಕಾಲೇಜಿಗೆ ಪೂರಕವಾಗಿರುವ ಅರೆ ವೈದ್ಯಕೀಯ, ನರ್ಸಿಂಗ್ ಸೇರಿ ಸುಮಾರು ಎಂಟು ಕೋರ್ಸ್ಗಳಿದ್ದು, ಅವುಗಳ ಆರಂಭಕ್ಕೂ ಒತ್ತು ನೀಡಲಾಗುವುದು' ಎಂದು ಸಚಿವರು ವಿವರಿಸಿ ಹೋಗಿದ್ದರು. ಆದರೆ ಈಗ ಮೆಡಿಕಲ್ ಕಾಲೇಜು ನಿರ್ಮಿಸಲು ಅನುದಾನ ಒದಗಿಸುವುದಿಲ್ಲ ಎಂದು ಹೇಳಿರುವುದು, ಸಚಿವರು ಹಾಗೂ ಸರ್ಕಾರ ಮಾತು ತಪ್ಪಿದಂತಾಗಿದೆ.