ಚಿತ್ರದುರ್ಗ: ಸನ್ಯಾಸಿ ಮನೆಯಲ್ಲಿತ್ತು ಒಂದಲ್ಲ..ಎರಡಲ್ಲ.. ಬರೋಬ್ಬರಿ 30 ಲಕ್ಷ
ಚಿತ್ರದುರ್ಗ, ಜೂನ್ 30: ಇತ್ತೀಚೆಗಷ್ಟೇ ಮೃತಪಟ್ಟಿದ್ದ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಮನೆಯಲ್ಲಿ 10, 20, 50, 100, 200 ಹಾಗೂ 500 ಮುಖಬೆಲೆಯ ನೋಟುಗಳು ಸೇರಿದಂತೆ ಲಕ್ಷ ಲಕ್ಷ ಹಣ ಸಿಕ್ಕಿರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ನಂದೀಶ್ವರ ಮಠದ ಅನುಯಾಯಿಯಾಗಿದ್ದ ಗಂಗಾಧರಯ್ಯ ಶಾಸ್ತ್ರಿಗಳು ಹೊಳಲ್ಕೆರೆ ಪಟ್ಟಣದ ಮದಕರಿ ವೃತ್ತದ ಬಳಿಯಿರುವ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಜೊತೆಗೆ ಸನ್ಯಾಸಿಯಾಗಿದ್ದರು. ಒಬ್ಬರೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಬೇರೆಯವರು ಮಾಡಿದ ಅಡುಗೆಯನ್ನು ಸೇವನೆ ಮಾಡುತ್ತಿರಲಿಲ್ಲ.

ಗಂಗಾಧರಯ್ಯ ಶಾಸ್ತ್ರಿ ಅವರಿಗೆ 4 ಎಕರೆ ಜಮೀನು ಇದೆ. ಇವರು ಶಾಸ್ತ್ರ ಹೇಳುತ್ತಿದ್ದರು. ಮದುವೆ, ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಕಾರ್ಯಗಳನ್ನು ಮಾಡಿಸುತ್ತಿದ್ದರು. ಈ ವೃತ್ತಿ ಜೀವನದಲ್ಲಿ ಸರಳವಾಗಿ ಜೀವನ ನಡೆಸುತ್ತಿದ್ದರು.
ಗಂಗಾಧರಯ್ಯ ಶಾಸ್ತ್ರಿಗಳಿಗೆ ತೆಂಗಿನ ತೋಟವಿತ್ತು. ತೋಟದಿಂದ ಬಂದಿದ್ದ ಹಣ ಹಾಗೂ ಭಕ್ತರು ನೀಡಿದ ಕಾಣಿಕೆ ರೂಪದ ಹಣವನ್ನು ಸಂಗ್ರಹಿಸಿಟ್ಟಿದ್ದರು. ಮೃತ ಗಂಗಾಧರಯ್ಯ ಶಾಸ್ತ್ರಿಗಳ ಸಾವಿನ ಬಳಿಕ ಭಕ್ತರ ಸಮ್ಮುಖದಲ್ಲಿ ಮನೆಯನ್ನು ಪರಿಶೀಲಿಸಿದಾಗ ಹಣ ಇರುವುದು ತಿಳಿದು ಬಂದಿದೆ. ನಂತರ ಹಣವನ್ನು ಎಣಿಕೆ ಮಾಡಿ ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿದು ಬಂದಿದೆ.

ನೋಟು ತುಂಬಿದ ಹಲವು ಚೀಲಗಳು, ಹಣ ತುಂಬಿದ ಕೊಡವೊಂದು ಸಿಕ್ಕಿರುವುದು ಜನರನ್ನು ಅಚ್ಚರಿ ಮೂಡಿಸಿದೆ. ಸಿಕ್ಕ ಹಣವನ್ನೆಲ್ಲಾ ಜನರು ಎಣಿಸಿದಾಗ ಒಂದಲ್ಲ, ಎರಡಲ್ಲ ಬರೋಬ್ಬರಿ 30 ಲಕ್ಷ ರೂ. ಇರುವುದು ಗೊತ್ತಾಗಿದೆ. ಗಂಗಾಧರಯ್ಯ ಶಾಸ್ತ್ರಿ ಮನೆಯಲ್ಲಿ ತೆಂಗಿನಕಾಯಿ ರಾಶಿ ಕೆಳಗಡೆ ಹಾಗೂ ಅಟ್ಟದ ಮೇಲೆ ಹಣ ಪತ್ತೆಯಾಗಿದೆ ಎನ್ನಲಾಗಿದೆ.
ಗಂಗಾಧರಯ್ಯ ಶಾಸ್ತ್ರಿಗಳು ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕಳೆದ ವಾರ ದೇವಸ್ಥಾನದಲ್ಲಿ ಕೊನೆಯುಸಿರೆಳೆದಿದ್ದಾರೆ.h












Click it and Unblock the Notifications