ಮಿನಿ ವಿಧಾನಸೌಧ ಹೆಸರು ಬದಲಾವಣೆ; ಆರ್. ಅಶೋಕ
ಚಿತ್ರದುರ್ಗ, ಸೆಪ್ಟೆಂಬರ್ 02; "ರಾಜ್ಯದಲ್ಲಿ ಮಿನಿ ವಿಧಾನಸೌಧ ಎಂಬ ಪದ ಬದಲಿಗೆ ತಾಲೂಕು ವಿಧಾನಸೌಧ ಎಂಬ ಹೆಸರನ್ನು ಇಡಲು ಕ್ರಮಕೈಗೊಳ್ಳುತ್ತೇನೆ" ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಗುರುವಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಶಿವನಕಟ್ಟೆ ಸರ್ವೆ ನಂ 32ರ 8 ಎಕರೆ ಜಮೀನಿನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಶಂಕುಸ್ಥಾಪನೆ ಭೂಮಿಪೂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಅಶೋಕ, "ಮಿನಿ ಎಂಬುದು ಸರಿಯಿಲ್ಲ. ಮಿನಿ ಎಂಬುದು ಇಂಗ್ಲಿಷ್ ಪದ. ಮಿನಿ ಎಂದರೆ ಚಿಕ್ಕದು, ಅದನ್ನು ತೆಗೆದು ಹಾಕಿ ತಾಲೂಕುಸೌಧ ಮಾಡಲು ಚಿಂತನೆ ನಡೆಸಲಾಗಿದೆ" ಎಂದರು.

"ಈಗಾಗಲೇ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ವಿಧಾನಸೌಧ ಉದ್ಘಾಟನೆಗೆ ಸಿದ್ದಗೊಂಡಿದೆ. ಹಿರಿಯೂರು, ಹೊಳಲ್ಕೆರೆ ತಾಲೂಕಿನಲ್ಲಿ ಸಹ 10 ಎಕರೆ ಜಾಗ ಗುರುತಿಸಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
"ತಾಲೂಕು ಕಚೇರಿಗಳಲ್ಲಿ ಬರುವ ಬಡ ಜನರಿಗೆ ಸೌಲಭ್ಯ ಸಿಗುವಂತಾಗಬೇಕು. ತಾಲೂಕು ಕಚೇರಿಗೆ ವಯಸ್ಸು ಆದವರು ವೃದ್ಯಾಪ್ಯ ವೇತನಕ್ಕೆ ಬರ್ತಾರೆ, ಅಂಗವಿಕಲರ ವೇತನ, ವಿಧವಾ ವೇತನಕ್ಕೆ ಬರ್ತಾರೆ. ವಯಸ್ಸು ಆದವರ ಗೋಳನ್ನು ನೋಡೋಕೆ ಆಗುವುದಿಲ್ಲ" ಎಂದು ಸಚಿವರು ತಿಳಿಸಿದರು.
"ವೃದ್ಧಾಪ್ಯ ವೇತನಕ್ಕೆ ಬಂದವರ ಕೆಲಸವನ್ನು ಬಗೆಹರಿಸಬೇಕು. ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ದಾರಿಯಲ್ಲಿ ಯಾರು ಅರ್ಜಿ ಹಿಡಿದು ನಿಂತುಕೊಳ್ಳಬಾರದು, ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ವೇತನ ಮಾಡಿ ಕೊಡಬೇಕು" ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
"ಕೋವಿಡ್ನಿಂದ ಮೃತಪಟ್ಟ ಪೋಷಕರ ಅಸ್ಥಿ ತೆಗೆದುಕೊಂಡು ಹೋಗಲು ಮಕ್ಕಳು ಮುಂದೆ ಬರಲಿಲ್ಲ. ಆಗ ನಾನೇ 1200 ಜನರ ಮನೆ ಮಗನಾಗಿ ಅಸ್ಥಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಬಂದಿದ್ದೇನೆ" ಎಂದು ಸಚಿವರು ತಿಳಿಸಿದರು.
"ಇನ್ನುಮುಂದೆ ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ನಲ್ಲಿ 60 ವರ್ಷ ದಾಟಿದ ಮೇಲೆ, ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಹೋಗಿ ವೃದ್ಧಾಪ್ಯ ವೇತನ ಆದೇಶ ಪತ್ರ ನೀಡಿ ಬರಬೇಕು. ಈಗಾಗಲೇ 30 ಸಾವಿರ ಜನರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಕೊಡಲಾಗಿದೆ. ಒಟ್ಟು ರಾಜ್ಯದಲ್ಲಿ 68 ಲಕ್ಷ ಜನರಿಗೆ ವೇತನ ಕೊಡಲಾಗುತ್ತಿದೆ" ಎಂದು ಸಚಿವರು ವಿವರಿಸಿದರು.
"ಕೋವಿಡ್ ಕಡಿಮೆ ಆದ ಮೇಲೆ ಜಿಲ್ಲಾಧಿಕಾರಿಗಳು ಹಳ್ಳಿಗೆ ಹೋಗಿ ಅಲ್ಲೇ ಒಂದು ದಿನ ವಾಸ್ತವ್ಯ ಹೂಡುವ ಕೆಲಸ ಆಗಬೇಕು. ಕಾಟಾಚಾರಕ್ಕೆ ಹೋಗಿ ಕೆಲಸ ಮಾಡುವಂತಿಲ್ಲ, ಜನರಿಗೆ ಮನಮುಟ್ಟುವಂತೆ ಕೆಲಸ ಮಾಡಿ. ನಾನು ಗ್ರಾಮದಲ್ಲಿ ವಾಸ್ತವ್ಯ ಹೂಡಿದರೆ ಶಾಲೆ, ಅಂಗನವಾಡಿಯಲ್ಲೇ ಮಲಗುವೆ" ಎಂದರು.
"79 ಎ ಎಂಬ ಕಾನೂನನ್ನು ತೆಗೆದುಹಾಕಿದ್ದು, ಪ್ರತಿಯೊಬ್ಬರು ಕೃಷಿ ಮಾಡುವಂತ ವ್ಯವಸ್ಥೆಯನ್ನು ಕಲ್ಪಿಸಿ ದೇಶದ ಅಭಿವೃದ್ಧಿಗೆ ಸಹಕಾರವಾಗುವಂತಹ ಕಾನೂನನ್ನು ಜಾರಿ ಮಾಡಿದ್ದೇವೆ. ಜಿಲ್ಲಾ, ತಾಲೂಕು ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಪ್ರತಿ ಮನೆಗಳ ಬಾಗಿಲಿಗೆ ಹೋಗುವ ವ್ಯವಸ್ಥೆಯಾಗಬೇಕು" ಎಂದು ಹೇಳಿದರು.
"ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ಜಮೀನನ್ನು ಕಳೆದುಕೊಂಡಿರುವವರ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಹೊಸದುರ್ಗ ಅಭಿವೃದ್ಧಿಗೆ ಶಾಸಕ ಗೂಳಿಹಟ್ಟಿ ಡಿ ಶೇಖರ್ ಏನು ಕೇಳಿದರೂ ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ. ಗೂಳಿಹಟ್ಟಿ ಶೇಖರ್ ನನ್ನ ಚಿಕ್ಕ ತಮ್ಮ ಇದ್ದಂತೆ" ಎಂದು ಸಚಿವರು ಭರವಸೆ ನೀಡಿದರು.
"ಚಿತ್ರದುರ್ಗದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಗೆ ಮುಂದಿನ 15 ದಿನಗಳಲ್ಲಿ ಶಂಕುಸ್ಥಾಪನೆ ಆಗಲಿದೆ. ರಾತ್ರಿ ಚಿತ್ರದುರ್ಗದ ಹಳೆಯ ಜಿಲ್ಲಾಧಿಕಾರಿ ಕಚೇರಿ ಭೇಟಿ ಮಾಡಿ ವೀಕ್ಷಣೆ ಮಾಡಿದ್ದೇನೆ. ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ 25 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ" ಎಂದು ಸಚಿವರು ಘೋಷಣೆ ಮಾಡಿದರು.












Click it and Unblock the Notifications