ಚಿತ್ರದುರ್ಗದಲ್ಲಿ ತಡರಾತ್ರಿ ಅಬ್ಬರಿಸಿದ ವರುಣ; ಕೋಡಿ ಬಿದ್ದ ಕೆರೆಗಳು
ಚಿತ್ರದುರ್ಗ, ಸೆಪ್ಟೆಂಬರ್ 9: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ವರುಣ ಅಬ್ಬರಿಸಿದ್ದು, ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಕೆಲವು ಕಡೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
Recommended Video
ಭಾರಿ ಮಳೆಗೆ ಚಿತ್ರದುರ್ಗ ಐತಿಹಾಸಿಕ ಚಂದ್ರವಳ್ಳಿ ಕೆರೆ ಕೋಡಿ ಬಿದ್ದು ಕಿರುಜಲಪಾತ ಸೃಷ್ಟಿಯಾಗಿದೆ.. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮತ್ತೊಂದೆಡೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಕೃಷಿ ಹೊಂಡಗಳು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಇತ್ತ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ, ರೇಣುಕಾಪುರ ಹಳ್ಳಗಳು ಸಹ ಮೈದುಂಬಿ ಹರಿಯುತ್ತಿವೆ.

ಹಿರಿಯೂರು ತಾಲ್ಲೂಕಿನ ಅರಳಿಕೆರೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ. ಐಮಂಗಲ, ಮಸ್ಕಲ್, ಆರನಕಟ್ಟೆ, ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಹಿರಿಯೂರು ಒಟ್ಟು 58.6 ಮಿ.ಮೀ. ಮೀಟರ್ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಹ ಮಳೆಯಾಗಿದ್ದು ತಾಲೂಕಿನ ತೇಕಲವಟ್ಟಿ ಗ್ರಾಮದ ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯುತ್ತಿವೆ. ಹೊಸದುರ್ಗ ತಾಲ್ಲೂಕಿನಲ್ಲಿ ಹದವಾಗಿ ಮಳೆಯಾಗಿದೆ.

ಮಳೆಗೆ ಮನೆ ಗೋಡೆ ಕುಸಿದು ಬಾಲಕಿ ಸಾವು: ತಡರಾತ್ರಿ ಸುರಿದ ಮಳೆ ಆರ್ಭಟಕ್ಕೆ ಚಳ್ಳಕೆರೆ ತಾಲೂಕಿನ ಬಂಗಾರಹಟ್ಟಿಯಲ್ಲಿ ಎರಡು ಕುರಿಗಳು ಸೇರಿದಂತೆ ಒಂದು ಎತ್ತು ಬಲಿಯಾಗಿದೆ. ಇನ್ನು ರತ್ನಮ್ಮ ಎನ್ನುವವರ ಮನೆ ಚಾವಣಿ ಕುಸಿದು ಬಿದ್ದಿದೆ. ಪರುಶುರಾಂಪುರ ಹೋಬಳಿಯ ಜಾಜೂರು ಗ್ರಾಮದಲ್ಲಿ ಪಕ್ಕದ ಮನೆ ಗೋಡೆ ಕುಸಿದ ಪರಿಣಾಮ ಶೃಜನ್ಯ (06) ಎಂಬ ಬಾಲಕಿ ಮೃತಪಟ್ಟಿದ್ದಾಳೆ.












Click it and Unblock the Notifications