ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ: ಚಿತ್ರದುರ್ಗದಲ್ಲಿ ನಿಖಿಲ್ ಸ್ಪಷ್ಟನೆ
ಚಿತ್ರದುರ್ಗ, ನವೆಂಬರ್, 13: ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ನ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಂದೇ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೊಂದಲವಿರುವ ಜೆಡಿಎಸ್ ಅಭ್ಯರ್ಥಿ ಯಾರು ಎಂದು ಘೋಷಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬುರಡುಕಂಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 19ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹಿರಿಯೂರು ಟಿಕೆಟ್ ವಿಚಾರದಲ್ಲಿ ಗೊಂದಲ ಇರುವ ಬಗ್ಗೆ ಶೀಘ್ರದಲ್ಲೇ ಬಗೆಹರಿಯಲಿದೆ. ಇನ್ನು ದೇವೇಗೌಡರ ಕುಟುಂಬದಿಂದ ವ್ಯಕ್ತಿಯೊಬ್ಬರು ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ನಮ್ಮ ಕುಟುಂಬದಿಂದ ಹಿರಿಯೂರು ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುವುದಿಲ್ಲ. ಇದು ಸುಳ್ಳು ಎಂದು ಗೊಂದಲಕ್ಕೆ ತೆರೆ ಎಳೆದರು.
ಸತೀಶ್ ಜಾರಕಿಹೊಳಿ ಬಹುಶಃ ಇತಿಹಾಸ ಓದಿಲ್ಲ: ಬಿ.ಸಿ ಪಾಟೀಲ್
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳನ್ನು ಜನರು ಗಮನಿಸಿದ್ದಾರೆ. ಇತ್ತೀಚೆಗೆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷದ ಕಡೆ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಆರೂವರೆ ಕೋಟಿ ಜನರ ಆಶಿರ್ವಾದ ಜೆಡಿಎಸ್ ಪಕ್ಷದ ಮೇಲಿರುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಸದೃಢವಾಗಿದ್ದು, ಜೆಡಿಎಸ್ ಪಕ್ಷ ಶಕ್ತಿಯುತವಾಗಿದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಎರಡು ಮೂರು ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಆಗಾಗಿ ಯಾರು ಸೂಕ್ತ ಅಭ್ಯರ್ಥಿ ಎಂದು ಗ್ರೌಂಡ್ ರಿಪೋರ್ಟ್ ಮೂಲಕ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮೀಸಲಾತಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ
ನಮ್ಮ ಪಕ್ಷದ ಹೈಕಮಾಂಡ್ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬಳಿ ಇದೆ. ನಾವೇನು ದೆಹಲಿಗೆ ಹೋಗಬೇಕಿಲ್ಲ. ಜೆಡಿಎಸ್ ಟಿಕೆಟ್ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅಲ್ಲದೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಮುಂಚಿತವಾಗಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯದ ಒಕ್ಕಲಿಗರಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ.
ಯುವಕರಿಗೆ ಮನವಿ ಮಾಡಿದ ನಿಖಿಲ್
ನಂತರ ಕೆಂಪೇಗೌಡ ಪ್ರತಿಮೆ ಅನಾವರಣ ಸಮಾರಂಭದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 500 ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿರುವ ಕೆಂಪೇಗೌಡರ ಬಗ್ಗೆ ಇಂದಿನ ಯುವಕರು ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಅವರ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ನಿಖಿಲ್ ಬಳಿ ಎಚ್ಡಿಕೆ ಹೇಳಿದ್ದೇನು?
2018ರಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಆಡಳಿತಗಾರ ಎಂದರೆ ಅದು ಕುಮಾರಸ್ವಾಮಿ ಆಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ರೈತರ ಆತ್ಮಹತ್ಯೆ ದೃಶ್ಯವನ್ನು ಕಣ್ಣಾರೆ ಕಂಡು ಎಚ್.ಡಿ. ಕುಮಾರಸ್ವಾಮಿ ಅವರು ಆಗ ರೈತರ ಬಾಳಿಗೆ ಬೆಳಕಾದರು. ನಮ್ಮ ಮನೆಯಲ್ಲಿ ತಂದೆಯವರು ನನ್ನ ಜೊತೆಗೆ ಮಾತಾಡಿದ್ದರು. ಜನರು ಸಿಎಂ ಆಗಲು ಅವಕಾಶ ಮಾಡಿ ಕೊಟ್ಟರೆ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತಾ ಹೇಳಿದ್ದರು ಎಂದರು.
ವಿವಿಧ ಯೋಜನೆಗಳನ್ನು ಒಳಗೊಂಡಿದೆ
ಇನ್ನು ನವೆಂಬರ್ 1ರ ಆರಂಭದಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಲಿಲ್ಲ. ಇದೇ ತಿಂಗಳ 19ಕ್ಕೆ ಪಂಚರತ್ನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಸೇರಿದಂತೆ ರೈತರು ಸಾಲ ಮಾಡದಂತೆ ಈ ಐದು ಯೋಜನೆಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಾ ಇದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಹೇಗೆ ನಡೆಯುತ್ತಿದೆ ಎಂದು ಗೊತ್ತಿದೆ. ಬಡವರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುವುದು ಕೂಡ ಪಂಚರತ್ನ ಯೋಜನೆಯಲ್ಲಿ ಸೇರಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನಿಮ್ಮ ಜೊತೆಗೆ ಜವಾಬ್ದಾರಿ ಇರುತ್ತದೆ ಎಂದು ತಿಳಿಸಿದರು.