ಚಿತ್ರದುರ್ಗದಲ್ಲಿ ಇನ್ಫೋಸಿಸ್ನಿಂದ ಮಕ್ಕಳಿಗೆ ವಿಜ್ಞಾನ ಪರಿಕರ
ನಮ್ಮಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಸ್ಪಷ್ಟವಾದ ಅರಿವು ಮೂಡಿಸುವಂತಾಗಬೇಕು. ವಿಶ್ವದ ರಚನೆ ಹೇಗಿದೆ, ಅದು ಸೃಷ್ಟಿಯಾದದ್ದು ಹೇಗೆ, ಗ್ರಹಗಳು ನಕ್ಷತ್ರಗಳು ಆಗಸದಲ್ಲಿ ಯಾವ ಆಧಾರದ ಮೇಲೆ ಅಸ್ತಿತ್ವ ಕಂಡುಕೊಂಡಿವೆ, ಯಾಕೆ ಈ ವಿಶ್ವದ ರಚನೆಯ ಹಿಂದೆ ಯಾವುದೇ ಉದ್ದೇಶವಿಲ್ಲ, ಕಾಲ, ಬಯಲು ಕಣಗಳು, ಕಣಗಳಿಂದ ಕೂಡಿದ ವಸ್ತುಗಳು ಹೀಗೆ ಸಮಗ್ರವಾದ ಅರಿವನ್ನ ಮಕ್ಕಳಿಗೆ ತಲುಪಿಸಬೇಕು.
ಈ ಬೇಸಿಕ್ ಜ್ಞಾನವನ್ನ ನಾವು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ತಲುಪಿಸಿದ್ದೇ ಆದರೆ ಖಂಡಿತ ಒಂದಷ್ಟು ದಶಕಗಳಲ್ಲೇ ಮನುಷ್ಯನ ನಿಜವಾದ ಅಸ್ತಿತ್ವದ ಅರಿವು ಎಲ್ಲರಲ್ಲೂ ಮೂಡುತ್ತದೆ, ಉಳಿದೆಲ್ಲ ಪ್ರಕೃತಿಯ ಭಾಗವಾಗಿ ಗೋಚರಿಸುತ್ತದೆ, ಈ ಕೆಲಸ ತುರ್ತಾಗಿ ಆಗಬೇಕಿದೆ.
ಈ ನಿಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಗಳು ಕಟ್ಟಿಕೊಂಡ 'ಸಮರ್ಪಣ್ ಟ್ರಸ್ಟ್' ಎನ್ನುವ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್, ಇನ್ಫೋಸಿಸ್ ಸೈನ್ಸ್ ಫೌಂಡೇಶನ್, ಅಗಸ್ತ್ಯ ಫೌಂಡೇಶನ್ ನಿರಂತರವಾಗಿ ನಾಡಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಪರಿಕರಗಳನ್ನು ನೀಡುವ ಮೂಲಕ ದೊಡ್ಡದೊಂದು ಬದಲಾವಣೆಗೆ ಕಾರಣವಾಗುತ್ತಿದೆ.
ಇದುವರೆಗೂ ಕರ್ನಾಟಕ ರಾಜ್ಯದ 11 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಈ ಯೋಜನೆ ತಲುಪಿದೆ. ಇದೀಗ 12ನೇ ಜಿಲ್ಲೆಯಾಗಿ ಚಿತ್ರದುರ್ಗ ಜಿಲ್ಲೆಯನ್ನು ಅಯ್ಕೆ ಮಾಡಿಕೊಂಡು ಹಿರಿಯೂರು ತಾಲ್ಲೂಕಿನ ಈಶ್ವರಗೆರೆ ಕ್ಲಸ್ಟರ್ ವ್ಯಾಪ್ತಿಯ ಮತ್ತು ಸುತ್ತಮುತ್ತಲಿನ 20 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ವಿಜ್ಞಾನ ಪರಿಕರಗಳನ್ನು ಉಚಿತವಾಗಿ ನೀಡುತ್ತಿದೆ.
ಹೂವಿನಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 11, 2017 ಶನಿವಾರ ಬೆಳಗ್ಗೆ 11 ಗಂಟೆಗೆ "ಉಚಿತ ವಿಜ್ಞಾನ ಪರಿಕರಗಳ ವಿತರಣಾ ಸಮಾರಂಭ"ವನ್ನು ಹೂವಿನಹೊಳೆ ಪ್ರತಿಷ್ಠಾನದ ಮೂಲಕ ಹಮ್ಮಿಕೊಂಡಿದೆ.