ಚಿತ್ರದುರ್ಗ : ಇನ್ಫೋಸಿಸ್ನಿಂದ ಮಕ್ಕಳಿಗೆ ವಿಜ್ಞಾನ ಪರಿಕರ ವಿತರಣೆ
ಚಿತ್ರದುರ್ಗ, ನವೆಂಬರ್ 13 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಶಾಲೆಗೆ ಇನ್ಫೋಸಿಸ್ ಸಮರ್ಪಣಾ ಟ್ರಸ್ಟ್ ಮೂಲಕ ವಿಜ್ಞಾನ ಪರಿಕರವನ್ನು ವಿತರಣೆ ಮಾಡಲಾಯಿತು.
ಇನ್ಫೋಸಿಸ್ ಸಮರ್ಪಣಾ ಟ್ರಸ್ಟ್ ಮೂಲಕ ಸರ್ಕಾರಿ, ಖಾಸಗಿ ಸೇರಿದಂತೆ ರಾಜ್ಯದ ವಿವಿಧ ಶಾಲಾ ಮಕ್ಕಳಿಗೆ ವಿಜ್ಞಾನ ಪರಿಕರವನ್ನು ನೀಡುತ್ತಿದೆ. 12ನೇ ಶಾಲೆಯಾಗಿ ಹೂವಿನಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ವಿಜ್ಞಾನ ಪರಿಕರಗಳನ್ನು ಹೂವಿನಹೊಳೆ ಪ್ರತಿಷ್ಠಾನದ ಮೂಲಕ ನೀಡಲಾಯಿತು.

11 ವಿಜ್ಞಾನ ಪರಿಕರಗಳ ಸೆಟ್ ಅನ್ನು ಇನ್ಫೋಸಿಸ್ನಲ್ಲಿ ಇಂಜಿನಿಯರಿಂಗ್ ಲೀಡ್ ನಲ್ಲಿ ಕೆಲಸ ಮಾಡುವ ಮಹೇಶ್ ಕುಮಾರ್, ಪ್ರೋಗ್ರಾಂ ಲೀಡ್ ರಿತೇಶ್ ಅವರು ಹಸ್ತಾಂತರ ಮಾಡಿದರು.
ಹಿರಿಯೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಹಾಗೂ ಹೂವಿನಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ದಿವ್ಯನಾಥ್, ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಅವರುಗಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, 'ಹೂವಿನಹೊಳೆ ಶಾಲೆಯನ್ನು ಇನ್ಫೋಸಿಸ್ನ ಸಮರ್ಥನಾ ಟ್ರಸ್ಟ್ 12ನೇ ಶಾಲೆಯಾಗಿ ಆಯ್ಕೆ ಮಾಡಿಕೊಂಡಿದ್ದು ಸಂತಸ ತಂದಿದೆ. ಈ ವಿಜ್ಞಾನ ಪರಿಕರಗಳನ್ನು ಧರ್ಮಪುರ ವ್ಯಾಪ್ತಿಯ ಹೂವಿನಹೊಳೆ ಸಮೀಪದ ಕೋಡಿಹಳ್ಳಿ, ವೇಣುಕಲ್ಲುಗುಡ್ಡ, ಈಶ್ವರಗೆರೆ, ದೇವರಕೊಟ್ಟ, ಅಬ್ಬಿನಹೊಳೆ, ಕಂಬತ್ತನಹಳ್ಳಿ, ಇಕ್ನೂರು, ಕೂಡ್ಲಹಳ್ಳಿ, ಶಾಲೆಗಳು ಸಮರ್ಪಕವಾಗಿ ಬಳಸಿಕೊಂಡು, ಮಕ್ಕಳಿಗೆ ವಿಜ್ಞಾನದ ಬಗ್ಗೆ ಪರಿಪೂರ್ಣ ಜ್ಞಾನ ಮೂಡಿಸುವಂತೆ ಆದೇಶಿಸಲಾಗುತ್ತದೆ' ಎಂದರು.

'ಇನ್ನೂ ನಮ್ಮ ತಾಲೂಕಿನ ಇತರೆ ಶಾಲೆಗಳಿಗೆ ಇಂತಹ ಪರಿಕರಗಳನ್ನು ವಿತರಣೆ ಮಾಡುವಂತೆ ಸಮರ್ಥನಾ ಟ್ರಸ್ಟ್ ಸದಸ್ಯರ ಜೊತೆಗೆ ಕೈಜೋಡಿಸಲಿದ್ದೇನೆ. ಗ್ರಾಮೀಣ ಶಾಲೆಗಳ ಉನ್ನತಿಗೆ ಹೂವಿನಹೊಳೆ ಪ್ರತಿಷ್ಠಾನದಂತಹ ಸಂಸ್ಥೆಗಳು ಶ್ರಮಿಸುವುದು ಶ್ಲಾಘನೀಯ' ಎಂದು ಹೇಳಿದರು.
ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಮಾತನಾಡಿ, 'ನಮ್ಮ ಹೂವಿನಹೊಳೆ ಶಾಲೆಗೆ ವಿಜ್ಞಾನ ಪರಿಕರವನ್ನು ನೀಡಿದ್ದು ಖುಷಿ ತಂದಿದೆ. ಕರ್ನಾಟಕದದ ಗ್ರಾಮೀಣ ಭಾಗದ ಶಾಲೆಗಳಿಗೆ ಈ ರೀತಿಯ ಪರಿಕರಗಳನ್ನು ನೀಡುವುದರಿಂದ ಉನ್ನತ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಹ ಸಿಗುವಂತಾಗುತ್ತದೆ' ಎಂದರು.
ಕಾರ್ಯಕ್ರಮದಲ್ಲಿ ಈಶ್ವರಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ನಳಿನಾಕ್ಷಿ, ಹೂವಿನಹೊಳೆ ಪ್ರತಿಷ್ಠಾನದ ಜಂಟಿಕಾರ್ಯದರ್ಶಿ ಶ್ರೀಧರ್ ಬಿ ಈಶ್ವರಗೆರೆ, ಕಾರ್ಯಕಾರಿ ಸಮಿತಿಯ ಸದಸ್ಯೆ ಚೈತ್ರ ಹೂವಿನಹೊಳೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications