ಚಿತ್ರದುರ್ಗ: ನೂರಾರು ವರ್ಷಗಳ ಶ್ರೀರಾಮನ ದೇವಾಲಯ ನೆಲಸಮ
ಚಿತ್ರದುರ್ಗ, ನವೆಂಬರ್ 17 : ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀರಾಮನ ದೇವಾಲಯವನ್ನು ನೆಲಸಮ ಮಾಡಿರುವ ವ್ಯಕ್ತಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಮಟ್ಟಿ ಗಾಮ ಸಮೀಪದ ಕೂಡ್ಲಹಳ್ಳಿಗೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ಸುಮಾರು ನೂರಾರು ವರ್ಷದ ಹಳೆಯ ರಾಮನ ದೇವಾಲಯವಿತ್ತು. ಈ ದೇವಸ್ಥಾನವಿದ್ದ ಜಾಗವನ್ನು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಇತ್ತೀಚೆಗೆ ಖರೀದಿ ಮಾಡಿದ್ದು, ಆ ಜಮೀನಿನಲ್ಲಿ ಇದ್ದ ದೇವಾಲಯವನ್ನು ನೆಲಸಮ ಮಾಡಿ, ದೇವರ ವಿಗ್ರಹವನ್ನು ಬೇರೆಡೆಗೆ ಕೊಂಡೊಯ್ದಿದ್ದಾರೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಚಿತ್ರದುರ್ಗ: ರೈತರಿಗೆ ₹99.28 ಕೋಟಿ ಬೆಳೆ ಹಾನಿ ಪರಿಹಾರ ಪಾವತಿ
ಬೆಂಗಳೂರಿನ ವಿಮಲ್ ರಾಜನ್ ಎಂಬುವ ವ್ಯಕ್ತಿ ದೇವಸ್ಥಾನವನ್ನ ಹೊಡೆದು ವಿಗ್ರಹವನ್ನ ನದಿಯಲ್ಲಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ರಾತ್ರೋರಾತ್ರಿ ದೇವಾಲಯವನ್ನು ಹೊಡೆದಿದ್ದಾರೆ, ಆದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದಾರೆ. ನಮಗೆ ಆ ವಿಗ್ರಹವನ್ನು ತಂದುಕೊಟ್ಟರೆ ಬೇರೆ ದೇವಾಲಯವನ್ನು ನಿರ್ಮಿಸಿಕೊಂಡು ಪೂಜೆ ಮಾಡುತ್ತೇವೆ ಎಂದು ಮಂಜುನಾಥ್ ಮಸ್ಕಲ್ ಮಟ್ಟಿ ಎಂಬುವವರು ಆಗ್ರಹಿಸಿದ್ದಾರೆ.
ಇನ್ನು ಸ್ಥಳೀಯ ಮಾಹಿತಿ ಪ್ರಕಾರ ಈ ದೇವಸ್ಥಾನದಲ್ಲಿ ಆಗಾಗ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಬೇರೆ ಬೇರೆ ಕಡೆಯಿಂದ ಭಕ್ತರು ಬಂದು ದೇವರನ್ನು ಆರಾಧಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜಮೀನು ಖರೀದಿ ಮಾಡಿದ್ದೇನೆ ಎಂಬ ಹಿನ್ನೆಲೆಯಲ್ಲಿ ಮಾಲೀಕ ದೇವಸ್ಥಾನ ಕೆಡವಿದ್ದಾನೆ. ಈ ಜಮೀನಿನಲ್ಲಿ ಚರ್ಚ್ ನಿರ್ಮಿಸಲು ಹೊರಟಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಪೊಲೀಸರಿಗೆ ದೂರು ನೀಡಿದೆ.