ವಾಣಿ ವಿಲಾಸ ಸಾಗರ ಕೋಡಿ ಬೀಳಲು ಅರ್ಧ ಅಡಿ ಬಾಕಿ, ಮುನ್ನೆಚ್ಚರಿಕೆ ಕ್ರಮಗಳೇನು?
ಚಿತ್ರದುರ್ಗ, ಆಗಸ್ಟ್, 31: ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರಸ್ತುತ ಜಲಾಶಯದಲ್ಲಿ129.50 ಅಡಿ ನೀರು ಸಂಗ್ರಹವಾಗಿದ್ದು, ಕೋಡಿ ಬೀಳಲು ಅರ್ಧ ಅಡಿ ಬಾಕಿ ಇದೆ. ಬುಧವಾರದ ವರದಿಯಂತೆ ಡ್ಯಾಂಗೆ ಒಳಹರಿವು 4,028 ಕ್ಯೂಸೆಕ್.
ಡ್ಯಾಂ ಕೋಡಿ ಬೀಳಲು ಅರ್ಧ ಅಡಿ ನೀರು ಬಾಕಿ ಇರುವುದರಿಂದ ಜನತೆಯ ಚಿತ್ತ ಡ್ಯಾಂನತ್ತ ಹರಿದಿದೆ. 1933ರಲ್ಲಿ 130.25 ಅಡಿ ಭರ್ತಿಯಾಗಿ ಕೋಡಿ ಬಿದ್ದು ಇತಿಹಾಸ ನಿರ್ಮಾಣ ಆಗಿತ್ತು. ಇದೀಗ 88 ವರ್ಷಗಳ ನಂತರ ಎರಡನೇ ಬಾರಿಗೆ ಕೋಡಿ ಬೀಳಲು ಒಂದೆರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಐತಿಹಾಸಿಕ ಕ್ಷಣದ ದೃಶ್ಯವನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು; ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಕೋಡಿ ಬೀಳಲು ಅರ್ಧ ಅಡಿ ಮಾತ್ರ ಬಾಕಿ ಇದೆ. ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ತಾಲೂಕು ಆಡಳಿತದೊಂದಿಗೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತುರ್ತು ಸಭೆ ನಡೆಸಿದ್ದಾರೆ. ನದಿ ಪಾತ್ರದ ಜನರಿಗೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದು, ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಾಳಜಿ ಕೇಂದ್ರಗಳ ಸ್ಥಾಪನೆ; ತುರ್ತು ಪರಿಸ್ಥಿತಿ ನಿರ್ವಹಿಸಲು 7 ಆಂಬುಲೆನ್ಸ್ ಸಜ್ಜಾಗಿವೆ. 24*7 ವೈದ್ಯರ ಲಭ್ಯತೆ, ಔಷಧಿಗಳನ್ನು ಸಂಗ್ರಹಿಸಲಾಗಿದ್ದು, ಪಿಡಬ್ಲ್ಯೂಡಿ ಇಲಾಖೆಗೆ ಸುರಕ್ಷತೆಯನ್ನು ಕಾಪಾಡಲು ಸೂಚಿಸಿಲಾಗಿದೆ. ಎನ್ಡಿಆರ್ಎಫ್ ತಂಡಕ್ಕೆ ತುರ್ತು ಪರಿಸ್ಥಿತಿ ನಿರ್ವಹಿಸಲು ಮನವಿ ಮಾಡಲಾಗಿದೆ.
ಪ್ರವಾಹದ ಸಂದರ್ಭದಲ್ಲಿ 5 ಹಾಸ್ಟೆಲ್ಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಜನರ ರಕ್ಷಣೆಗೆ 24*7 ಸಹಾಯವಾಣಿ ತೆರೆಯಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಅಭಾವ ಆಗದಂತೆ ಬೆಸ್ಕಾಂಗೆ ಸೂಚಿಸಲಾಗಿದೆ.

ಉಳಿದಂತೆ ಹಿರಿಯೂರು ನಗರದ 8, 9, 11, 12, 16 ವಾರ್ಡ್ಗಳಲ್ಲಿ, ಮಿರ್ಜಾ ಬಡಾವಣೆ ಮತ್ತು ಸಿಎಂ ಲೇಔಟ್ಗಳನ್ನು ಪ್ರವಾಹದ ಸ್ಥಳಗಳೆಂದು ಗುರುತಿಸಲಾಗಿದೆ. ವೇದಾವತಿ ನದಿ ಪಾತ್ರದ ಗ್ರಾಮಗಳಾದ ವಾಣಿವಿಲಾಸಪುರ, ಕಾತ್ರಿಕೇನಹಳ್ಳಿ, ಕೂನಿಕೆರೆ, ಲಕ್ಕವ್ವನಹಳ್ಳಿ, ಯಳನಾಡು, ಕೂಡ್ಲಳ್ಳಿ ಮಾರುತಿ ನಗರಗಳನ್ನು ನದಿ ಪಾತ್ರದ ಗ್ರಾಮಗಳೆಂದು ಗುರುತಿಸಲಾಗಿದೆ.












Click it and Unblock the Notifications