ಡಿವೈಎಸ್ ಪಿ ಎಂದು ಹೇಳಿಕೊಂಡು ವಂಚನೆಗೆ ಇಳಿದಿದ್ದ ತಂಡ ಅಂದರ್
ಚಿತ್ರದುರ್ಗ, ಡಿಸೆಂಬರ್ 27: ಚಿತ್ರದುರ್ಗದ ಎಸಿಬಿ ಇಲಾಖೆಯ ಡಿವೈಎಸ್ ಪಿ ಎಂದು ಪರಿಚಯಿಸಿಕೊಂಡು ವಂಚನೆ ಎಸಗುತ್ತಿದ್ದ ತಂಡವೊಂದನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಈಚೆಗೆ ಈ ತಂಡ, "ನಾವು ಎಸಿಬಿ ಇಲಾಖೆಯ ಡಿವೈಎಸ್ ಪಿ. ನಿಮ್ಮ ಮೇಲೆ ಬೆಂಗಳೂರಿನ ಎಸಿಬಿ ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗಿದೆ" ಎಂದು ಹೆದರಿಸಿ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್.ಟಿ. ಶ್ರೀರಂಗಪ್ಪ ಎಂಬುವವರಿಂದ 1,24,000 ಸಾವಿರ ರೂಪಾಯಿಯನ್ನು ಖಾತೆಗೆ ಜಮಾ ಮಾಡಿಸಿಕೊಂಡಿತ್ತು.

ವಂಚನೆ ಆರೋಪದಲ್ಲಿ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಾದಿ ಹಿಡಿದ ಸಿಪಿಐ ಚನ್ನೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಾದ ರಜನಿಕಾಂತ್, ಚಿದಾನಂದ, ಅರುಳ್ ರೇಗಸ್, ಹೇದರ್, ಮುರಿಗೆಪ್ಪ ನಿಂಗಪ್ಪ ಕುಂಬಾರ, ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೊಬೈಲ್, ಸಿಮ್, ಒಂದು ಮೋಟರ್ ಸೈಕಲ್, ಎರಡು ಚಿನ್ನದ ಉಂಗುರ ಮತ್ತು 52 ಸಾವಿರ ನಗದನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications