ಜುಲೈ 1ಕ್ಕೆ ಹಿರಿಯೂರು ಬಂದ್, 2ಕ್ಕೆ ವಿ.ವಿ. ಸಾಗರ ಡ್ಯಾಂ ಮುತ್ತಿಗೆ
ಹಿರಿಯೂರು, ಜೂನ್ 30: ವಿ.ವಿ.ಸಾಗರ (ವಾಣಿವಿಲಾಸ ಸಾಗರ) ಹೋರಾಟ ಸಮಿತಿಯಿಂದ ಜುಲೈ 1ರಂದು "ಡೆಡ್ ಸ್ಟೋರೆಜ್ ನೀರು ಉಳಿಸಿ ಅಣೆಕಟ್ಟು ರಕ್ಷಿಸಿ" ಹೋರಾಟ ಹಿನ್ನೆಲೆಯಲ್ಲಿ ಹಿರಿಯೂರು ಬಂದ್ ಗೆ ಕರೆಕೊಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಬಂದ್ ಗೆ ಸಹಕರಿಸಲು ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಎಲ್ಲ ಶಾಲಾ- ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಲಾಗಿದೆ. ಇನ್ನು ಖಾಸಗಿ ಬಸ್ ಮಾಲೀಕರ ಸಂಘದವರು ಬಸ್ ಸಂಚಾರ ನಡೆಸದಿರಲು ತೀರ್ಮಾನಿಸಿದ್ದಾರೆ. ಆಸ್ಪತ್ರೆ, ಕ್ಲಿನಿಕ್, ಔಷಧ ಕೇಂದ್ರಗಳು, ಹಾಲಿನ ಕೇಂದ್ರಗಳು ಮಾತ್ರ ತೆರೆದಿರುತ್ತವೆ. ವರ್ತಕರು, ಸಣ್ಣಪುಟ್ಟ ಅಂಗಡಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ವಿವಿಧ ಸಂಘಟನೆಗಳು, ಆಟೋ ಮಾಲಿಕರ ಮತ್ತು ಚಾಲಕರ ಸಂಘದವರು, ವಿವಿಧ ಸಮಾಜದ ಸಂಘಟನೆಗಳು, ರಾಜಕೀಯ ಮುಖಂಡರು, ಮುಸ್ಲಿಂ ಸಮುದಾಯ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಇನ್ನಿತರ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ ನಲ್ಲಿ ಭಾಗವಹಿಸುವ ಪ್ರತಿಭಟನಾಕಾರರಿಗೆ ಹಿರಿಯೂರು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜದ ಅಧ್ಯಕ್ಷ ಸಿ. ನಾರಾಯಣಾಚಾರ್ ತಿಳಿಸಿದ್ದಾರೆ.

ಶನಿವಾರ ನಡೆದ ಪ್ರತಿಭಟನಾ ಸಮಾವೇಶ ಯಶಸ್ವಿಯಾಗಿದ್ದು, ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪ್ರವಾಸಿ ಮಂದಿರದಲ್ಲಿ ಸೇರಿ, ಟಿ.ಬಿ. ಸರ್ಕಲ್ ಬಳಿ ಇರುವ ಹಳೇ ಕೆಇಬಿ, ಕೊರ್ಟ್, ಸರ್ವೀಸ್ ರಸ್ತೆ , ರಂಜಿತ್ ಹೋಟೆಲ್ ಮೂಲಕ ಬೈಕ್ ಜಾಥಾ ನಡೆಸುತ್ತಾರೆ. ಗಾಂಧಿ ಸರ್ಕಲ್ ನಲ್ಲಿ "ಡೆಡ್ ಸ್ಟೋರೆಜ್ ನೀರು ಉಳಿಸಿ ಡ್ಯಾಂ ರಕ್ಷಿಸಿ" ಘೋಷಣೆ ಕೂಗಿ, ಆ ನಂತರ ತಹಶೀಲ್ದಾರ್ ಗೆ ಮನವಿ ಸಲ್ಲಿಸುತ್ತಾರೆ.
ಮಂಗಳವಾರದಂದು ವಾಣಿವಿಲಾಸ ಸಾಗರ ಡ್ಯಾಮ್ ಗೆ ಹೋಗಿ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಕಡೆಗೆ ಪಂಪಿಂಗ್ ಮೂಲಕ ಕೊಡುವ ನೀರು ನಿಲ್ಲಿಸಲು ಮುತ್ತಿಗೆ ಹಾಕಲಾಗುವುದು ಎಂದು ಹೋರಾಟ ಸಮಿತಿಯವರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೋರಾಟ ಸಮಿತಿಯವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಹೋರಾಟ ಸಮಿತಿಯವರ ಜತೆ ಸಭೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications