ಹಿರಿಯೂರು: ಅಪರಾಧ ಪ್ರಕರಣ ತಡೆಯಲು ಅಬ್ಬಿನಹೊಳೆ ಪೊಲೀಸರ ಹೊಸ ಪ್ಲಾನ್
ಚಿತ್ರದುರ್ಗ, ಜುಲೈ 11: ಹಿರಿಯೂರು ತಾಲೂಕಿನಲ್ಲಿ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಕ್ರೈಂ ಘಟನೆಗಳನ್ನು ತಡೆಯಲು ಪೊಲೀಸ್ ಇಲಾಖೆ ವಿಭಿನ್ನ ರೀತಿಯಲ್ಲಿ ಮುಂದಾಗಿದ್ದಾರೆ. ಪ್ರತಿದಿನ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯಲ್ಲಿ ಈ ಒಂದು ಪೊಲೀಸ್ ಠಾಣೆ ಸಿಬ್ಬಂದಿ ಸಜ್ಜಾಗಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಅಬ್ಬಿನಹೊಳೆ ಪೊಲೀಸ್ ಠಾಣೆಯವರು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮನೆ ಕಳ್ಳತನ, ದೇವಸ್ಥಾನ ಕಳ್ಳತನ ಹಾಗೂ ಸರ ಕಳ್ಳತನ ಮತ್ತು ಕುರಿ-ದನಕರುಗಳ ಕಳ್ಳಕಾಕರ ಬಗ್ಗೆ, ಕಡ್ಡಾಯವಾಗಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ.
ಅಬ್ಬಿನಹೊಳೆ ಪೊಲೀಸ್ ಠಾಣಾ ಭಾಗಗಳಲ್ಲಿ ಬೀಗ ಹಾಕಿರುವ ಮನೆಗಳು, ದೇವಸ್ಥಾನಗಳ ಕಳ್ಳತನ ಹೆಚ್ಚಾಗಿದ್ದು ನೀವು ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಅಕ್ಕ, ಪಕ್ಕದ ಮನೆಯವರಿಗೆ ತಿಳಿಸಿ, ರಾತ್ರಿ ವೇಳೆಯಲ್ಲಿ ಹೊರಗಡೆ ಲೈಟ್ಗಳನ್ನು ಹಾಕಬೇಕು ಮತ್ತು ಇಂಟರ್ ಲಾಕ್ ಹಾಗೂ ಬಗರ್ ಅಲರಾಂ ಮತ್ತು ಸಿ.ಸಿ ಕ್ಯಾಮರ ಅಳವಡಿಸಿಕೊಳ್ಳಿ. ದೇವಸ್ಥಾನಗಳಲ್ಲಿ ದೇವಸ್ಥಾನದ ಕಮಿಟಿಯವರು ಹಾಗೂ ಪೂಜಾರಿಗಳು ಸರದಿಯಂತೆ ಪ್ರತಿ ದಿನ 4 ಜನರು ಕಾವಲು ಇರತಕ್ಕದ್ದು ಎಂದು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ದನಕರು, ಕುರಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ದನಕರುಗಳು, ಕುರಿಗಳು ಕಳ್ಳತನವಾಗದಂತೆ ನೋಡಿಕೊಳ್ಳುವುದು. ನಿಮ್ಮ ವಾಹನಗಳು ಬೈಕ್ಗಳ ಬಗ್ಗೆ ಎಚ್ಚರಿಕೆ ವಹಿಸಿ, ಬೈಕ್ನ ಹ್ಯಾಂಡ್ ಕೀ ಹಾಕುವಂತೆ ಸೂಚಿಸಿದ್ದಾರೆ.
ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದ ದೂರದ ಹೊರಗಡೆ ಇರುವ ಮನೆಗಳ ಕಡೆ ಹೆಚ್ಚು ನಿಗಾವಹಿಸಬೇಕು. ವಯಸ್ಸಾದ ವೃದ್ಧರನ್ನು ಮನೆಯಲ್ಲಿ ಬಿಟ್ಟು 2-3 ದಿನಗಳ ವರೆಗೆ ದೂರದ ಊರುಗಳಿಗೆ ಹೋಗಬೇಕಾದರೆ ಅಕ್ಕ-ಪಕ್ಕದ ಮನೆಗಳಿಗೆ ತಿಳಿಸಿ ಹೋಗಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಕಡೆ ಹಾಗೂ ವಾಹನಗಳ ಕಡೆ ಗಮನಹರಿಸಿ ಕೂಡಲೇ ತುರ್ತು ಕರೆ-112 ಗೆ ಕರೆಮಾಡಿ. ಅಥವಾ ನಿಮ್ಮ ಬೀಟ್ ಪೊಲೀಸರಿಗೆ ಕೂಡಲೇ ಕರೆಮಾಡಿ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಪಾಡನಾಡ ನೇತೃತ್ವದ ತಂಡ ಇಂತದೊಂದು ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ.












Click it and Unblock the Notifications