ಭಾರೀ ಮಳೆಗೆ ತುಳುಕಿದ ಚಿತ್ರದುರ್ಗ, ತುಂಬಿದ ಕೊಳಗಳು
ಚಿತ್ರದುರ್ಗ, ಅಕ್ಟೋಬರ್ 07 : ನಾಲ್ಕೈದು ದಿನಗಳ ಬಿಡುವು ಪಡೆದಿದ್ದ ಮಳೆ ಚಿತ್ರದುರ್ಗದಲ್ಲಿ ಮತ್ತೆ ಸುರಿದಿದ್ದು ಭಾರೀ ಅವಾಂತರ ಸೃಷ್ಟಿಸಿದೆ. ನಗರದ ಪ್ರಮುಖ ರಸ್ತೆಗಳೆಲ್ಲ ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿದೆ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೋಟೆ ನಾಡಿನ ಮೇಲೆ ಕರುಣೆ ತೋರಿದ ವರುಣ, ರೈತರಲ್ಲಿ ಸಂತಸ
ದುರ್ಗದಲ್ಲಿ ಬರಿದಾಗಿದ್ದ ಹಲವಾರು ಕೆರೆಗಳು ತುಂಬಿ ಕಂಗೊಳಿಸುತ್ತಿವೆ. ಖಾಲಿಯಾಗಿದ್ದ ಕಲ್ಯಾಣಿಗಳು ನೀರಿನಿಂದ ತುಳುಕಾಡುತ್ತಿವೆ. ಮಳೆಯ ಹೊಡೆತಕ್ಕೆ ನಗರದಲ್ಲಿನ ಒಂದು ಮನೆಯ ಛಾವಣಿ ಕೂಡ ಕುಸಿದು ಬಿದ್ದಿದೆ. ಆದರೆ, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
ಧಾರಾಕಾರವಾಗಿ ಸುರಿದ ಮಳೆಗೆ ಹಲವಾರು ಬಡಾವಣೆಗಳು ಜಲಾವೃತವಾಗಿದ್ದು, ನಗರವೇ ಮುಳುಗಿದಂತೆ ಕಾಣಿಸುತ್ತಿತ್ತು. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು, ಬಸ್ಸುಗಳು ಪರದಾಡುತ್ತಿದ್ದು, ಮಳೆಯ ವೈಭವವನ್ನು ಜನರು ರಸ್ತೆಬದಿಯ ಅಂಗಡಿಗಳಲ್ಲಿ ನಿಂತು ನೋಡುತ್ತಿರುವುದು ಸಾಮಾನ್ಯವಾಗಿತ್ತು.
ಚಿತ್ರದುರ್ಗ ನಗರಕ್ಕೆ ಕುಡಿಯಲು ಭದ್ರಾ ನೀರು ಪೂರೈಕೆ
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಹೆಚ್ಚೂಕಡಿಮೆ ಮುಳುಗಿವೆ. ಇತ್ತೀಚಿನ ವರ್ಷಗಳಲ್ಲಿ ಇಂಥ ಮಳೆಯನ್ನು ಕಂಡಿರದಿದ್ದ ಜನರು ಈ ವರ್ಷಧಾರೆಯನ್ನು ಸಂಭ್ರಮಿಸಿದರೆ, ಜನರು ಅಡ್ಡಾಡಲಾಗದೆ ಪರದಾಡುವಂತಾಗಿದೆ.
ದುರ್ಗದ ಏಳು ಕೋಟೆಯೊಳಗಿನ ಕೊಳಗಳು ಭರ್ತಿಯಾಗಿ ನಳನಳಿಸುವಂತಾಗಿವೆ. ತುಪ್ಪದ ಕೊಳ, ಎಣ್ಣೆ ಕೊಳ, ಅಕ್ಕತಂಗಿಯರ ಕೊಳಗಳಲ್ಲಿ ನೀರು ತುಂಬಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಕೊಳಗಳಲ್ಲಿನ ಹೂಳು ತೆಗೆದಿರುವುದರಿಂದ ಸಾಕಷ್ಟು ಮಳೆನೀರು ಬಂದು ಸೇರಿಕೊಂಡಿದೆ.