ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಚಿತ್ರದುರ್ಗ, ಆಗಸ್ಟ್ 2 : ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಅಬ್ಬರಿಸುತ್ತಿದೆ. ನದಿಗಳು, ಕೆರೆ ಕಟ್ಟೆಗಳು ಹಾಗೂ ಹಳ್ಳಕೊಳ್ಳಗಳು ಭರ್ತಿಯಾಗಿವೆ.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಕೆರೆ ಮತ್ತು ಗಾಂಧಿನಗರ ಕೆರೆ ಎರಡನೇ ಬಾರಿಗೆ ಕೊಡಿ ಬಿದ್ದು ಮೈದುಂಬಿ ಹರಿಯುತ್ತಿವೆ. ಹೂವಿನಹೊಳೆ ತೊರೆ ತುಂಬಿ ಹರಿಯುತ್ತಿದೆ.
ಬೆಂಗಳೂರಲ್ಲಿ ಮತ್ತೆ ಮಳೆ ಅವಾಂತರ, ಉರುಳಿ ಬಿದ್ದ ಮರಗಳು
ರೈತರ ಹೊಲ ಗದ್ದೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಇಕ್ಕನೂರಿನಲ್ಲಿ 135.2 ಮೀ. ಮೀ. ಅತ್ಯಧಿಕ ಮಳೆಯಾಗಿದೆ. ಕಸವನಹಳ್ಳಿ, ರಂಗನಾಥಪುರ, ನಂದಿಹಳ್ಳಿ, ಸೂಗೂರು, ಕುಂದಲಗೂರ, ಐಮಂಗಲ, ಈಶ್ವರೆಗೆರೆ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಜೋರು ಮಳೆಯಾಗಿದೆ.
ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದ್ದು, ಹೂವಿನಹೊಳೆ ಬಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ನದಿ ನೀರು ಹೆಚ್ಚಾಗಿ ಹರಿಯುತ್ತಿರುವ ಕಾರಣ ರೈತರ ಕೃಷಿ ಗದ್ದೆಗಳಲ್ಲಿ ನೀರು ನುಗ್ಗಿದ್ದು, ಸೋಯಾಬಿನ್, ಅಡಿಕೆ, ಬಾಳೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಮತ್ತಿತರರ ಬೆಳೆಗಳಿಗೆ ಹಾನಿಯಾಗಿದೆ.
ಪರಶುರಾಂಪುರದಲ್ಲೂ ಮಳೆಯಾಗಿದ್ದು, ವೇದಾವತಿ ನದಿ ತುಂಬಿ ಹರಿಯುತ್ತಿದೆ. ದೊಡ್ಡ ಕೆರೆಗಳಿಗೂ ನೀರು ಬರುತ್ತಿದ್ದು, ಸಣ್ಣ ಕಟ್ಟೆಗಳು ತುಂಬಿವೆ. ದನಕರುಗಳಿಗೆ ಕುಡಿಯಲು ನೀರು, ಮುಂಗಾರು ಹಂಗಾಮಿನ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಈ ಮಳೆಯಿಂದ ಅನುಕೂಲವಾಗಲಿದೆ.
ಗದಗ; ನಿರಂತರ ಮಳೆಗೆ ಬೆಳೆ ನಷ್ಟ, ಸಂಕಷ್ಟದಲ್ಲಿ ಅನ್ನದಾತ
ಮುಂಗಾರು ವಿಳಂಬದಿಂದ ಜಿಲ್ಲೆಯ ಕೆಲವೆಡೆ ಬಿತ್ತನೆಗೆ ಹಿನ್ನೆಡೆಯಾಗಿತ್ತು. ಶೇಂಗಾ ಬಿತ್ತನೆ ಸಾಧ್ಯವಾಗದೇ ರೈತರು ಪರಿತಪಿಸುತ್ತಿದ್ದರು. ಮತ್ತೆ ಬರದ ಛಾಯೆ ಆವರಿಸುವ ಆತಂಕ ಎದುರಾಗಿತ್ತು. ಆದರೆ, ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ರೈತರಲ್ಲಿ ಭರವಸೆ ಮೂಡಿಸಿದೆ.
ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 2070 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 124.25 ಅಡಿ ಸಂಗ್ರಹವಾಗಿದೆ. ಜಲಾಶಯ ನೀರಿನಿಂದ ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಿದೆ.
ಸುಮಾರು 80 ವರ್ಷಗಳ ಬಳಿಕ ಕಳೆದ ವರ್ಷ 125.50 ಅಡಿ ಸಂಗ್ರವಾಗಿದ್ದು ಇದೀಗ ಈ ವರ್ಷ ಹೆಚ್ಚು ನೀರು ಸಂಗ್ರಹವಾಗಿ ಡ್ಯಾಂ ಕೊಡಿ ಬೀಳಲು 5.75 ಅಡಿ ಬಾಕಿ ಇದ್ದು, ಹೆಚ್ಚು ಮಳೆ ಬಂದರೆ ಈ ಬಾರಿ ವಾಣಿ ವಿಲಾಸ ಜಲಾಶಯ ತುಂಬಿ ಕೊಡಿ ಬೀಳುವ ಸಾಧ್ಯತೆ ಇದೆ. ಇನ್ನು ತಾಲ್ಲೂಕಿನ ಜನತೆ ಡ್ಯಾಂ ಕೋಡಿ ಬೀಳುವುದನ್ನು ನೋಡಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಉಳಿದಂತೆ ಚಿತ್ರದುರ್ಗದಲ್ಲೂ ಉತ್ತಮ ಮಳೆಯಾಗಿದ್ದು, ಚಿತ್ರದುರ್ಗದ ಸಿರಿಗೆರೆ ಗ್ರಾಮದ ಶಾಂತಿವನ ಕಿರುಜಲಾಶಯ ತುಂಬಿ ಹರಿಯುತ್ತಿದೆ, ಚಂದ್ರವಳ್ಳಿ ಕೆರೆ ತುಂಬಿ ಕೋಡಿ ಬಿದ್ದು ಮೈದುಂಬಿದೆ. ಇನ್ನು ಚಳ್ಳಕೆರೆ,,ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲೂಕಿನ ಸಹ ಸಾಧಾರಣ ಮಳೆಯಾಗಿದೆ.