ಪೀಠತ್ಯಾಗ ತ್ಯಾಗ ಮಾಡಿ: ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮಾಜಿ ಸಚಿವರ ಆಗ್ರಹ
ಚಿತ್ರದುರ್ಗ, ಜೂನ್, 19: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಅವರು ನೈತಿಕ ಹೊಣೆ ಹೊತ್ತು ಪೀಠ ತ್ಯಾಗ ಮಾಡಲಿ ಎಂದು ಮಾಜಿ ಸಚಿವ ಎಚ್.ಏಕಾಂತಯ್ಯ ಚಿತ್ರದುರ್ಗದಲ್ಲಿ ಹೇಳಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುರುಘಾ ಶ್ರೀಗಳು ಸಬ್ ರಿಜಿಸ್ಟರ್ ಕಚೇರಿಯ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಮಠದ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

1. ಬೆಂಗಳೂರಿನ ಸೋಲಿಕೆರೆ ಗ್ರಾಮದಲ್ಲಿ ಸರ್ವೆ ನಂಬರ್ 34ರಲ್ಲಿ 7 ಹೆಕ್ಟೇರ್ 18 ಗುಂಟೆ ಜಮೀನನ್ನು ಆನಂದ್ ಕುಮಾರ್ ಎಂಬುವರಿಗೆ 79 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದು ಸಬ್ ರಿಜಿಸ್ಟರ್ ಕಚೇರಿಯ ಮಾರ್ಗಸೂಚಿಯಂತೆ 3 ಕೋಟಿ 59 ಲಕ್ಷದ 50,000 ಬೆಲೆ ಬಾಳುತ್ತದೆ. ಆದರೆ ಶ್ರೀಗಳು ಹಣ ಪಡೆದಿರುವುದು ಕೇವಲ 49 ಲಕ್ಷಗಳು ಮಾತ್ರ ಎಂದರು.
2. ಅಲ್ಲದೆ ಹಾವೇರಿಯಲ್ಲಿ ಸರ್ವೆ ನಂಬರ್ 229ರಲ್ಲಿ 21 ಹೆಕ್ಟೇರ್ 12 ಗುಂಟೆ ಜಾಗವನ್ನು 3 ಹೆಕ್ಟೇರ್ 25 ಗುಂಟೆಯಂತೆ ಒಂದೊಂದು ಬ್ಲಾಕ್ಗಳಾಗಿ ವಿಂಗಡಿಸಿದ್ದು, 4,75,000ಗಳಿಗೆ ಮಾರಾಟ ಮಾಡಲಾಗಿದೆ. ಇದರ ನಿಜವಾದ ಬೆಲೆ 10 ಲಕ್ಷದ 65,000 ಆಗಿದೆ ಎಂದು ತಿಳಿಸಿದರು.
3. ಇನ್ನು ಎಸ್ಜೆಎಂ ಕಾಲೇಜು ಪಕ್ಕದ ಸರ್ವೆ ನಂಬರ್ ಸರ್ವೆ ನಂಬರ್ 9ರಲ್ಲಿ 6 ಹೆಕ್ಟೇರ್ 20 ಗುಂಟೆ ಜಮೀನನ್ನು 1990ರಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮತ್ತು ಆಟದ ಮೈದಾನಕ್ಕಾಗಿ ಅಲಿಗೇಶನ್ ಮಾಡಿಸಿಕೊಂಡಿದ್ದರು. ಶ್ರೀಗಳು 10-10-1990ರಲ್ಲಿ 1 ಹೆಕ್ಟೇರ್ 22ಗುಂಟೆ ಆಟದ ಮೈದಾನವನ್ನು 21 ಸೈಟ್ಗಳಾಗಿ ಮಾರಾಟ ಮಾಡಿದ್ದಾರೆ. ಹೀಗೆ ಹಂತ ಹಂತವಾಗಿ ಪ್ರತಿಯೊಂದು ವ್ಯವಹಾರವನ್ನು ಯಾರ ಗಮನಕ್ಕೆ ತರದೆ ಅಥವಾ ತಿಳಿಸದೆ ಗೌಪ್ಯವಾಗಿ ನಡೆಸಿದ್ದಾರೆ ಎಂದು ಹೇಳಿದರು.
ಇತ್ತ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿರುವ ಮುರುಘಾ ಶರಣರ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಬಹುತೇಕ ಫಲಾನುಭವಿಗಳು ಸ್ವಾಮೀಜಿಯ ಶಿಷ್ಯರಾಗಿದ್ದಾರೆ. ಆದ್ದರಿಂದ ಇಂತಹ ಅನ್ಯಾಯದ ವಿರುದ್ಧ ನಾನು ಹೋರಾಟಕ್ಕೆ ಇಳಿದಿದ್ದೇನೆ ಎಂದು ತಿಳಿಸಿದರು.
ಮುರುಘಾ ಮಠಕ್ಕೆ ಉಸ್ತುವಾರಿ ನೇಮಕ
ಹಾಗೆಯೇ ಚಿತ್ರದುರ್ಗದ ಮುರುಘಾ ಮಠಕ್ಕೆ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಅವರನ್ನು ಇತ್ತೀಚೆಗಷ್ಟೇ ಆಯ್ಕೆ ಮಾಡಲಾಗಿದೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಇತ್ಯರ್ಥ ಆಗುವವರೆಗೂ ತಾತ್ಕಾಲಿಕ ಆಡಳಿತ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆಯೇ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಮೇ 28ರಂದು ಸಭೆ ನಡೆಸಿತ್ತು. ಈ ವೇಳೆ ಬಸವಪ್ರಭು ಸ್ವಾಮೀಜಿ ಅವರನ್ನು ಮಠದ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿತ್ತು.
ಹಾಗೆಯೆ ಇದೇ ಸಮಯದಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಸಮಿತಿಯ ಕಾರ್ಯದರ್ಶಿಯನ್ನಾಗಿ ಮಾಡಲು ಕೂಡ ಸರ್ವಾನುಮತದಿಂದ ತೀರ್ಮಾನಿಸಲಾಗಿತು. ಅಷ್ಟೇ ಅಲ್ಲದೆ ಆಡಳಿತ ಸಮಿತಿಯ ಸ್ವರೂಪ ಹಾಗೂ ಪದಾಧಿಕಾರಿಗಳ ಹೆಸರನ್ನು ಶೀಘ್ರವೇ ಹೈಕೋರ್ಟ್ಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.












Click it and Unblock the Notifications