ವಿವಿ ಸಾಗರದಿಂದ ವೇದಾವತಿಗೆ ನೀರು; ಹೊಸ ನಿರೀಕ್ಷೆಯಲ್ಲಿ ಚಳ್ಳಕೆರೆ ಜನ
ಚಿತ್ರದುರ್ಗ, ಏಪ್ರಿಲ್ 17: ಇದೇ 22ರಿಂದ ಜಿಲ್ಲೆಯ ಏಕೈಕ ಜಲಾಶಯ ವಾಣಿವಿಲಾಸದಿಂದ ಇದೇ ಮೊದಲ ಬಾರಿಗೆ ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸಲು ಸರ್ಕಾರ ಹಸಿರು ನಿಶಾನೆ ತೋರಿರುವುದಾಗಿ ತಿಳಿದುಬಂದಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಪ್ರಕ್ರಿಯೆಯಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ವಾಣಿ ವಿಲಾಸ ಜಲಾಶಯದ ಒಟ್ಟು ಸಾಮರ್ಥ್ಯ 130 ಅಡಿ ಇದ್ದು, 30 ಟಿಎಂಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 97.05 ಅಡಿಯಲ್ಲಿ 10.16 ಟಿಎಂಸಿ ನೀರು ಸಂಗ್ರಹಗೊಂಡಿದ್ದು, 1.87 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ.
18 ಗ್ರಾಮಗಳಿಗೆ ಕುಡಿಯಲು 0.427 ಟಿಎಂಸಿ ನೀರು
ಪ್ರತಿನಿತ್ಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ನಗರ, ಡಿಆರ್ ಡಿಒ ಮತ್ತು 18 ಗ್ರಾಮಗಳಿಗೆ ಕುಡಿಯಲು 0.427 ಟಿಎಂಸಿ ನೀರು ಬೇಕಾಗುತ್ತದೆ. ಇನ್ನು 0.901 ಟಿಎಂಸಿ ನೀರು ಆವಿಯಾಗುತ್ತದೆ. ಹಾಲಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ದ್ವಿತೀಯ ಹಂತದಲ್ಲಿ ನೀರು ಹರಿಸಬೇಕಾದರೆ 1.21 ಟಿಎಂಸಿ ಅವಶ್ಯಕ ಎಂದು ಪ್ರಾದೇಶಿಕ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.
ವರ್ಷಗಳ ಬಳಿಕ ವಾಣಿವಿಲಾಸ ಸಾಗರದಿಂದ ನಾಲೆಗಳಿಗೆ ನೀರು
ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ
ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಪಾತ್ರದಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕಿನ ಕಾತ್ರಿಕೇನಹಳ್ಳಿ ಅಣೆಕಟ್ಟು ಮೂಲಕ ವೇದಾವತಿ ನದಿ ಪಾತ್ರದಲ್ಲಿ ಬರುವ ಲಕ್ಕವ್ವನಹಳ್ಳಿ ಕುಡಿಯುವ ನೀರಿನ ಬ್ಯಾರೇಜ್, ಕಸವನಹಳ್ಳಿ, ಹಳೇಯಳನಾಡು, ಕೂಡ್ಲಹಳ್ಳಿ ಮತ್ತು ಓಬೆನಹಳ್ಳಿ ಬ್ಯಾರೇಜ್ ಗಳಲ್ಲಿನ Scouring sluice gates ಗಳನ್ನು ತೆಗೆದರೆ ಸದರಿ ಬ್ಯಾರೇಜ್ ಗಳ ಮುಖಾಂತರ ನೀರು ಸರಾಗವಾಗಿ ಹರಿದು ಚಳ್ಳಕೆರೆ ತಾಲೂಕಿಗೆ ತಲುಪುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಶಾಸಕ ಟಿ. ರಘುಮೂರ್ತಿ ಹೋರಾಟದ ಫಲ
ಈ ಕುರಿತು ಮಾತನಾಡಿದ ಶಾಸಕ ಟಿ. ರಘುಮೂರ್ತಿ, "ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ವಿವಿ ಸಾಗರಕ್ಕೆ ಹರಿಸುವ ಎರಡು ಟಿಎಂಸಿ ನೀರಿನಲ್ಲಿ ವೇದಾವತಿ ನದಿಗೆ 0.25 ನೀರು ಹರಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಅದು ಪೂರ್ಣಗೊಂಡಿದೆ. ಅಂದಿನ 2015ರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ವಿಧಾನ ಸಭೆಯಲ್ಲಿ ಇದರ ಬಗ್ಗೆ ಗಮನ ಸೆಳೆದಿದ್ದೆ. ಸಂಬಂಧಪಟ್ಟ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೆ. ಆಗಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಜಿಲ್ಲೆಯಲ್ಲಿ ಐದಾರು ವರ್ಷಗಳ ಕಾಲ ಮಳೆ ಇಲ್ಲದ ಕಾರಣ ಜಲಾಶಯದಲ್ಲಿ ನೀರಿರಲಿಲ್ಲ. ಕಳೆದ ವರ್ಷ ಒಂದಿಷ್ಟು ಮಳೆಯಾಗಿದ್ದರಿಂದ ಹಾಗೂ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ನೀರು ಹರಿಸಲು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ" ಎಂದರು.
ವಿವಿ ಸಾಗರದಿಂದ ನೀರು ಹರಿಸಲು ಶಾಸಕಿ ಕೆ.ಪೂರ್ಣಿಮಾ ಚಾಲನೆ
ವಿವಿ ಸಾಗರದಿಂದ ನೀರು ಹರಿಸಿದರೆ ಅನುಕೂಲ
ಚಳ್ಳಕೆರೆ ಕ್ಷೇತ್ರ ಬರದ ನಾಡು. ನೀರಿನ ಅಭಾವದಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು ನೀರಿನ ಶೇಖರಣೆಗೆ ವೇದಾವತಿ ನದಿಗೆ ಬೊಂಬೆರಹಳ್ಳಿ, ಚೌಳೂರು ಮತ್ತು ಪರುಶುರಾಂಪುರ ಭಾಗಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ತುಂಬಿದ್ದರೂ ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಬ್ಯಾರೇಜ್ ಗಳು ಖಾಲಿಯಾಗಿವೆ. ಈಗ ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವುದರಿಂದ ರೈತರ ಪಂಪ್ ಸೆಟ್ ಗಳಿಗೆ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸಬಹುದು ಎಂದಿದ್ದಾರೆ ಶಾಸಕ ಟಿ. ರಘುಮೂರ್ತಿ.