ಹುಟ್ಟು ಹಬ್ಬ ಹಿನ್ನೆಲೆ ಹಿರಿಯೂರಿನಲ್ಲಿ ಜನಾರ್ಧನ್ ರೆಡ್ಡಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ
ಚಿತ್ರದುರ್ಗ, ಜನವರಿ, 11: ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿ ಅವರು 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯೂರು ನಗರದಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ಜನಾರ್ಧನ್ ರೆಡ್ಡಿ ಅವರ ಭಾವಚಿತ್ರಕ್ಕೆ ಕ್ಷೀರಭಿಷೇಕ ಮಾಡಿದ್ದಾರೆ. ಜೊತೆಗೆ ಕಟೌಟ್ಗೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸುವ ಮೂಲಕ ರೆಡ್ಡಿಯವರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸಿದರು.
ಹಿರಿಯೂರು ನಗರದ ರಂಜಿತಾ ಹೋಟೆಲ್ ಮುಂಭಾಗದಲ್ಲಿ ಜನಾರ್ಧನ್ ರೆಡ್ಡಿಯವರ ಬೃಹತ್ ಕಟೌಟ್ಗೆ ಹಾಲಿನ ಅಭಿಷೇಕ ನೆರವೇರಿಸಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ವಿತರಿಸಲಾಯಿತು. ಅಲ್ಲದೇ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಿದರು.
ಗಾಲಿ ಜನಾರ್ಧನ್ ರೆಡ್ಡಿಯನ್ನು ಭೇಟಿಯಾದ ಹಿರಿಯೂರಿನ ಸ್ಥಳೀಯ ಅಭ್ಯರ್ಥಿ
ಸುದ್ದಿಗಾರರೊಂದಿಗೆ ಮಾತನಾಡಿದ ಕೆಆರ್.ಪಿಪಿ ಪಕ್ಷದ ಅಭ್ಯರ್ಥಿ ಗನ್ನಾಯಕನಹಳ್ಳಿ ಎಚ್.ಮಹೇಶ್ ಅವರು, ನಮ್ಮ ಪಕ್ಷದ ನಾಯಕರು, ಮಾಜಿ ಸಚಿವರು ಹಾಗೂ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿ ಅವರ 56ನೇ ಹುಟ್ಟುಹಬ್ಬವಿದ್ದು, ಇದರ ಅಂಗವಾಗಿ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಕ್ಷೇತ್ರದಿಂದ ಶುಭಾಶಯ ಕೋರಲಾಯಿತು ಎಂದು ತಿಳಿಸಿದರು.
ವಲಸಿಗರ ಮುಂದೆ ಕೈ ಚಾಚಿ ನಿಲ್ಲಬಾರದು
ನಮ್ಮ ಕ್ಷೇತ್ರದಲ್ಲಿ ಇದುವರೆಗೂ ಮತದಾರರು ಹೊರಗಿನವರಿಗೆ ಅವಕಾಶ ಕಲ್ಪಿಸುವ ಮೂಲಕ ಅವರ ಮುಂದೆ ಅಡಿಯಾಳಾಗಿ ಕೈ ಕಟ್ಟಿಕೊಂಡು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇಂಗ್ಲಿಷ್ನಲ್ಲಿ ಒಂದು ಮಾತು ಇದೆ, think before ink ಅಂತಾ. ನಾವು ಮತವನ್ನು ಚಲಾಯಿಸುವುದಕ್ಕಿಂತ ಮೊದಲು ಆಲೋಚನೆ ಮಾಡಬೇಕು. ಜನಪರ ಕಾಳಜಿಯುಳ್ಳ, ನಮ್ಮ ಕಷ್ಟಗಳಿಗೆ ಸ್ಪಂದಿಸುವ, ರೈತರು, ಬಡವರ ಕಷ್ಟ ನೋವುಗಳನ್ನು ಅರ್ಥ ಮಾಡಿಕೊಂಡಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಾವು ವಲಸಿಗರ ಮುಂದೆ ಕೈ ಚಾಚಿ ನಿಲ್ಲಬಾರದು ಎಂದರು.
ಕಾರ್ಯಕರ್ತರಿಗೆ ಎಚ್.ಮಹೇಶ್ ಮನವಿ
ನಮ್ಮದು ಕೊಡುವ ಕೈಯಾಗಬೇಕೇ ಹೊರತು ಬೇಡುವ ಕೈಯಾಗಬಾರದು. ಇಂತಹ ಸ್ಥಿತಿಗೆ ಹಿರಿಯೂರು ತಲುಪಬಾರದು. ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆಯಾಗಿ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಇಲ್ಲಿನ ಜನತೆಯ ಒಲವನ್ನು ಬಯಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಇಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸುವ ಮೂಲಕ ಈ ಕ್ಷೇತ್ರವನ್ನು ನಿಮ್ಮ ಕೈಗಳಿಗೆ ಅರ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿನ ಜನರು ವಲಸಿಗರನ್ನು ದೂರವಿಟ್ಟು, ಸ್ವಾಭಿಮಾನವನ್ನು ತೋರಿಸಿ. ವಲಸಿಗರು ಸಾಕು, ಸ್ಥಳೀಯರು ಬೇಕು ಎಂಬ ಧ್ಯೇಯ ವಾಕ್ಯದ ಸ್ವಾಭಿಮಾನ ತೋರಬೇಕಿದೆ ಎಂದರು.
ಬೈಕ್ ರ್ಯಾಲಿ ರದ್ದು, ಮಹೇಶ್ ಆಕ್ರೋಶ
ಜನಾರ್ಧನ್ ರೆಡ್ಡಿಯವರ ಹುಟ್ಟು ಹಬ್ಬದ ಅಂಗವಾಗಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ನಂತರ ಅನುಮತಿಯನ್ನು ರದ್ದುಗೊಳಿಸಿದ್ದಾರೆ. ಇದರಲ್ಲಿ ರಾಜಕೀಯ ಕೂಹಕ ಅಡಗಿದೆ. ನಮ್ಮ ಪಕ್ಷದ ಯಶಸ್ಸನ್ನು ಸಹಿಸಲಾರದೆ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರಗಳಿಗೆ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
ನಾವು ಹೇಡಿಗಳಾಗಬಾರದೆಂದು ಸೂಚನೆ
ಬರುವ ಚುನಾವಣೆಯಲ್ಲಿ ದಿಟ್ಟ ಉತ್ತರ ಕೊಡುವ ಮೂಲಕ ಅವರಿಗೆ ನಾಚಿಕೆ ತರುವಂತೆ ಮಾಡುತ್ತೇವೆ. ತಾಲೂಕಿನ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಿಂದಲೋ ಬಂದು ನಮ್ಮನ್ನು ಬೆದರಿಸುವ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ನಾವು ಹೇಡಿಗಳಾಗಬಾರದು, ಸ್ವಾಭಿಮಾನವನ್ನು ಬಿಟ್ಟುಕೊಡದೆ ಸದಾ ಶಕ್ತಿ ಹಾಗೂ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ಕೊಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರ್ತಿಕೋಟೆ ತಿಪ್ಪೇಸ್ವಾಮಿ, ಹೇಮದಳ, ವೀರಭದ್ರ, ಚಂದ್ರಪ್ಪ, ಕಾಂತೇಶ್ವರ, ಮಧು ವಾಲ್ಮೀಕಿ, ಮಂಜು ವಾಲ್ಮೀಕಿ, ಮಹಮದ್ ಅಲಿ, ಶಾಂತಪ್ಪ, ಈಶ್ವರಪ್ಪ, ಸಿದ್ದೇಶ್, ತೇಜಸ್, ಸಂತೋಷ್, ಸೋಮಣ್ಣ, ಮಂಜು, ಸುರೇಶ್, ಶಿವಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.