ಹಿರಿಯೂರು ವಿಧಾನಸಭಾ ಕ್ಷೇತ್ರ: ಗೆಲುವಿಗಾಗಿ ಮಾಜಿ ಸಚಿವ ಡಿ.ಸುಧಾಕರ್ ಭರ್ಜರಿ ಪ್ರಚಾರ
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಜಯಭೇರಿ ಬಾರಿಸಿದ್ದ ಸುಧಾಕರ್, 2013ರಲ್ಲೂ ಸಹ ಮತ್ತೊಮ್ಮೆ ಮರು ಆಯ್ಕೆಯಾದರು. 2018 ರಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸುಧಾಕರ್ ಅವರಿಗೆ ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ, ಮಾರ್ಚ್ 16: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಿ. ಸುಧಾಕರ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಹಿರಿಯೂರು ನಗರದ 31 ವಾರ್ಡ್ಗಳಲ್ಲಿ ಸಂಚರಿಸಿ ಪ್ರತಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಉಳಿದಂತೆ ಗ್ರಾಮೀಣ ಪ್ರದೇಶಗಳ ಹಳ್ಳಿಗಳಿಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಇದಲ್ಲದೆ ಮದುವೆ, ನಾಮಕರಣ, ಜಾತ್ರೆ, ದೇವರ ಉತ್ಸವ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ.

2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಜಯಭೇರಿ ಬಾರಿಸಿದ್ದ ಸುಧಾಕರ್, 2013ರಲ್ಲೂ ಸಹ ಮತ್ತೊಮ್ಮೆ ಮರು ಆಯ್ಕೆಯಾದರು. 2018 ರಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸುಧಾಕರ್ ಅವರಿಗೆ ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಬ್ರೇಕ್ ಹಾಕಿದರು.
2023ರಲ್ಲಿ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸುಧಾಕರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲು ಇರುಳು ಎನ್ನದೇ ಕ್ಷೇತ್ರ ಸುತ್ತುತ್ತಿದ್ದಾರೆ. ಕ್ಷೇತ್ರದ ಎರಡು ಬಾರಿ ಶಾಸಕರಾಗಿ, 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಆಡಳಿತ ನಡೆಸಿದ್ದಾರೆ. 10 ವರ್ಷಗಳ ಕಾಲ ಆಡಳಿತದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ, 40% ಕಮಿಷನ್ ಆರೋಪ, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಮತ್ತಿತರರ ಸಮಸ್ಯೆಗಳನ್ನು ಇಟ್ಟುಕೊಂಡು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿಗೆ ಕಾಡುಗೊಲ್ಲರ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸುಮಾರು 45 ಸಾವಿರಕ್ಕೂ ಹೆಚ್ಚು ಮತಗಳಿವೆ. ಈಗಾಗಲೇ ಧರ್ಮಪುರ ಮತ್ತು ಜವನಗೊಂಡನಹಳ್ಳಿ ಹೋಬಳಿಯಲ್ಲಿ ಕಾಡುಗೊಲ್ಲರ ಬೃಹತ್ ಸಮಾವೇಶ ಏರ್ಪಡಿಸಿ, ಕಾಡುಗೊಲ್ಲ ಸಮುದಾಯವನ್ನು ಕೊಂಡಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ. ಇದಲ್ಲದೆ ಒಕ್ಕಲಿಗ, ನಾಯಕ, ತೇವರ್ ಸೇರಿದಂತೆ ಇನ್ನಿತರ ಸಮುದಾಯಗಳ ಜೊತೆ ಸಭೆ ನಡೆಸಿ, ಬೆಂಬಲ ಕೋರಿದ್ದಾರೆ.
ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಡಿ. ಸುಧಾಕರ್ ಆರೋಪ
ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕರು ಕಾಡುಗೊಲ್ಲರ ಮತ ಪಡೆದು ಕಾಡುಗೊಲ್ಲರ ಹುಡುಗರಿಗೆ ತೊಂದರೆ ಕೊಟ್ಟರು ಎಂದು ಮಾಜಿ ಸಚಿವ ಡಿ. ಸುಧಾಕರ್ ಆರೋಪಿಸಿದ್ದಾರೆ. ಹಿರಿಯೂರಿನ ಜವಗೊಂಡನಹಳ್ಳಿಯ ನಡೆದ ಬೃಹತ್ ಕಾಂಗ್ರೆಸ್ ಕಾಡುಗೊಲ್ಲರ ಸಮಾವೇಶ ಕುರಿತು ಮಾತನಾಡಿದ ಅವರು 'ನನ್ನ ಹತ್ತು ವರ್ಷದ ಆಡಳಿತದ ಅವಧಿಯಲ್ಲಿ ಕಾಡುಗೊಲ್ಲರ ಮೇಲೆ ಒಂದೇ ಒಂದು ಕೇಸ್ ಹಾಕಿಸಿಲ್ಲ. ಆದರೆ ಈಗ ಪೊಲೀಸರನ್ನು ದುರುಪಯೋಗ ಮಾಡಿಕೊಂಡು ಸಹಾಯ ಮಾಡಿದವರ ಮೇಲೆಯೇ ದಬ್ಬಾಳಿಕೆ ಮಾಡುತ್ತಿರುವುದನ್ನು ದೇವರು ಮೆಚ್ಚಲಾರ' ಎಂದಿದ್ದಾರೆ.
ಇನ್ನು ಈ ಬಾರಿ ಎಲ್ಲಾ ಗೊಲ್ಲರಹಟ್ಟಿಗಳಿಗೂ ಚುನಾವಣೆ ಪ್ರಚಾರಕ್ಕೆ ಬರುತ್ತೇನೆ. ಸೇಡು ತೀರಿಸಿಕೊಳ್ಳುವುದು, ದ್ವೇಷದ ರಾಜಕಾರಣ ಮಾಡುವುದು ಹೆಚ್ಚು ದಿನ ನಡೆಯಲ್ಲ ಎಂದು ಪೂರ್ಣಿಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೆ ಸೋಲಿನ ಭೀತಿ ಎಂದ ಸುಧಾಕರ್
ಈ ಐದು ವರ್ಷ ತಾಲೂಕನ್ನು ಅಭಿವೃದ್ಧಿ ಹೀನ ಸ್ಥಿತಿಗೆ ತಂದಿಟ್ಟಿದ್ದಾರೆ. ಬಿಜೆಪಿಯಲ್ಲಿ ಸೋಲಿನ ಭೀತಿಯಿಂದ ಇದೀಗ ಕಾಂಗ್ರೆಸ್ ಪಕ್ಷದ ಬಾಗಿಲು ಬಡಿಯುತ್ತಿದ್ದಾರೆ. ಕಾಂಗ್ರೆಸ್ ದಡ್ಡರ ಪಕ್ಷವಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡುವುದಿಲ್ಲ. ಜನರಲ್ಲಿ ಗೊಂದಲ ಬೇಡ. ಪಕ್ಷದ ಟಿಕೆಟ್ ನನ್ನದೇ ಎನ್ನುವ ಭರವಸೆ ವ್ಯಕ್ತಪಡಿಸಿದರು.
ನನ್ನ ಆಡಳಿತದ ಹತ್ತು ವರ್ಷದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಶುರು ಮಾಡಿದ್ದೆ. ತಾಲೂಕಿನ ಪ್ರತೀ ಗೊಲ್ಲರಹಟ್ಟಿಗೂ ಒಂದಲ್ಲ ಒಂದು ಕೆಲಸ ಮಾಡಿದ್ದೇನೆ. ಈ ಬಾರಿ ಕಾಡುಗೊಲ್ಲರು ನನ್ನ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆ ನನಗಿದೆ. ಕೆ.ಹೆಚ್ ರಂಗನಾಥ್ರವರ ಗೆಲುವುಗಳಲ್ಲಿ ಕಾಡು ಗೊಲ್ಲರ ಪಾತ್ರ ದೊಡ್ಡದು. ಕಾಂಗ್ರೆಸ್ ಪಕ್ಷ ಪ್ರಚಾರ ಬಯಸೊಲ್ಲ. ಸದ್ದಿಲ್ಲದೇ ಸೇವೆ ಮಾಡುವ ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಬೆನ್ನಿಗೆ ಸದಾ ನಿಂತಿದೆ ಎಂದರು.
ಕೊರೊನಾ ಸಮಯದಲ್ಲಿ, ತಾಲೂಕಿನ ಜನರ ಸಂಕಷ್ಟದಲ್ಲಿ ಸೋತರೂ ಜೊತೆಗಿದ್ದೇನೆ. ಬಿಜೆಪಿ ಮೀಸಲಾತಿ, ಸಾಮಾಜಿಕ ನ್ಯಾಯ ವಿರೋಧಿಸುವ ಪಕ್ಷ. ಹಾಗಾಗಿ ನಿಮ್ಮ ಆಯುಧವಾದ ಮತವನ್ನು ನಿಮ್ಮನ್ನು ಕಾಪಾಡುವವರ, ರಕ್ಷಣೆ ಮಾಡುವವರ, ಅಭಿವೃದ್ಧಿ ಮಾಡುವವರಿಗೆ ನೀಡಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ಮಾತ್ರ ಬಡವರ ಬದುಕು ಹಸನಾಗಲು ಸಾಧ್ಯ ಎಂದು ಸುಧಾಕರ್ ತಿಳಿಸಿದರು.












Click it and Unblock the Notifications