ತಳಕು ಬಳಿ ಆ್ಯಂಬುಲೆನ್ಸ್ ಗೆ ರೈಲು ಡಿಕ್ಕಿ: ಬಾಣಂತಿ ಸೇರಿ 4 ಸಾವು
ಬಾಣಂತಿಯನ್ನು ಮಗುವಿನೊಂದಿಗೆ ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ನಡೆದಿರುವ ಅಪಘಾತ; ಸ್ಥಳದಲ್ಲೇ ಇಬ್ಬರು ಹಾಗೂ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವು
ತಳಕು (ಚಿತ್ರದುರ್ಗ), ಮಾರ್ಚ್ 14: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಹತ್ತಿರವಿರುವ ರೈಲ್ವೇ ಸಿಗ್ನಲ್ ನಲ್ಲಿ ರೈಲು ಮತ್ತು ಆ್ಯಂಬುಲೆನ್ಸ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಒಬ್ಬ ಬಾಣಂತಿ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆದರೆ, ಬಾಣಂತಿಯ ಗಂಡು ಮಗು ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ.
ಬಂಡೆತಿಮ್ಮನಹಳ್ಳಿಯವರಾದ ಗಂಗಮ್ಮ ಎಂಬಾಕೆಗೆ ಏಳು ದಿನಗಳ ಹಿಂದೆ ತಳುಕಿನ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಅವರನ್ನು ಮನೆಗೆ ಕರೆದೊಯ್ಯಲು ಆಕೆಯ ಮನೆಯವರು ಆ್ಯಂಬುಲೆನ್ಸ್ ಸಹಾಯ ಪಡೆದಿದ್ದರು.

ಹೀಗೆ, ಬಾಣಂತಿ, ಮಗು, ಬಾಣಂತಿಯ ಸಂಬಂಧಿ ಕದುರಮ್ಮ (35) ಹಾಗೂ ಇನ್ನಿಬ್ಬರು ಆ್ಯಂಬುಲೆನ್ಸ್ ನಲ್ಲಿ ಸಾಗುತ್ತಿದ್ದರು. ಆದರೆ, ಮಾರ್ಗ ಮಧ್ಯೆ ರೈಲ್ವೇ ಕ್ರಾಸಿಂಗ್ ಬಳಿ ಹೊಸಪೇಟೆಯಿಂದ ಬೆಂಗಳೂರಿಗೆ ಧಾವಿಸುತ್ತಿದ್ದ ರೈಲು, ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಗಂಗಮ್ಮ (30) ಇಬ್ಬರು ಸ್ಥಳದಲ್ಲೇ ಹಾಗೂ ಉಳಿದ ಮೂವರು ತಳಕಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ಮೃತಪಟ್ವವರ ಮತ್ತಿಬ್ಬರ ಹೆಸರು, ವಿವರ ಲಭ್ಯವಾಗಿಲ್ಲ.












Click it and Unblock the Notifications