ಹಿರಿಯೂರು ಶಾಸಕ ಡಿ.ಸುಧಾಕರ್ ವಿರುದ್ಧ ಎಫ್ಐಆರ್
ಹಿರಿಯೂರು, ಏಪ್ರಿಲ್ 02: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ವಿರುದ್ಧ ಅಬ್ಬಿನಹೊಳೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಪುರದ ಜಾಮೀಯ ಮಸೀದಿಯಲ್ಲಿ ಭಾಷಣ ಮಾಡಿದ ಆರೋಪ ಹೊರೆಸಲಾಗಿದ್ದು, ದೂರು ದಾಖಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಕಿಲಾರದಹಳ್ಳಿ ಗೊಲ್ಲರಹಟ್ಟಿಯಲ್ಲಿ ಈಗ ಗ್ರಾಮ ವಾಸ್ತವ್ಯದ ಸಂಭ್ರಮದಲ್ಲಿ ಶಾಸಕ ಸುಧಾಕರ್ ಪಾಲ್ಗೊಂಡಿದ್ದರು ಇದಾದ ಬಳಿಕ ಜಾಮೀಯ ಮಸೀದಿಗೆ ತೆರಳಿದ್ದರು.

ಹಿರಿಯೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗೊಲ್ಲ ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ. ಗೊಲ್ಲರಹಟ್ಟಿಗಳಿಗೆ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.
ಅನುದಾನದಲ್ಲಿ ಹೆಚ್ಚು ಗೊಲ್ಲರಿಗೆ ಸೌಲಭ್ಯ ಕಲ್ಪಿಸಿದ್ದೇನೆ. ಈ ವರ್ಷದಲ್ಲಿ 70 ಗಂಗಾಕಲ್ಯಾಣ ಬೋರ್ ವೆಲ್ ಗಳನ್ನ ಕೊಡಲಾಗಿದೆ ಎಂದು ಹೇಳಿದ್ದರು.

ಇದೇ ರೀತಿ ಮಸೀದಿಯಲ್ಲಿ ಭಾಷಣ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಪ್ರಕಾರ, ಶಾಲೆ, ಚರ್ಚ್, ದೇಗುಲ, ಮಸೀದಿ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಖಾಸಗಿ ಕಾರ್ಯಕ್ರಮವಾದರೂ ಆಯೋಗದ ಪೂರ್ವಾನುಮತಿ ಅಗತ್ಯ.
ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷವಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಸುಧಾಕರ್ ಅವರು ಕರೆ ನೀಡಿದ್ದರು.
ತಾಲೂಕಿನಲ್ಲಿ ಅಭಿವೃದ್ಧಿಯೇ ನನ್ನ ಮಂತ್ರ. ಕಳೆದ 10 ವರ್ಷಗಳಿಂದಲೂ ವಿರೋಧಿಗಳು ನನ್ನ ಬಗ್ಗೆ ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. 2008ರಲ್ಲಿ ಇದ್ದಂಥ ಚಿತ್ರಣ ಬದಲಾಗಿ ತಾಲೂಕಿನಲ್ಲಿ ಶಾಂತಿ, ಸೌಹರ್ದತೆ ವಾತಾವರಣ ಬೆಳೆದಿದೆ ಎಂದು ಹೇಳಿದರು.












Click it and Unblock the Notifications