ಲಂಚ, ಮಂಚ ಬಿಜೆಪಿಗೆ ಸಿಕ್ಕಿರುವ ಮೂಲಭೂತ ಬಳುವಳಿ: ಡಿಕೆಶಿ ವ್ಯಂಗ್ಯ
ಚಿತ್ರದುರ್ಗ, ಸೆಪ್ಟೆಂಬರ್ 27 : ಭಾರತೀಯ ಜನತಾ ಪಾರ್ಟಿಗೆ 40 % ಲಂಚ ಮತ್ತು ಮಂಚ ಮೂಲಭೂತವಾಗಿ ಸಿಕ್ಕಿರುವ ಬಳುವಳಿ, ಇದನ್ನು ಪ್ರಶ್ನಿಸಿದರೆ ಎಲ್ಲರೂ ನಮ್ಮ ಮೇಲೆ ಮುಗಿ ಬೀಳುವುದು ಸಾಮಾನ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಡಳಿತ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವ ತಯಾರಿ ಸಂಬಂಧ ಪೂರ್ವಭಾವಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಲಂಚ ಹಾಗೂ? ಮಂಚದ ವಿಚಾರದಲ್ಲಿ ಇಡೀ ದೇಶಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ತಾವೇ ತಪ್ಪುಮಾಡಿ ಆಕಾಶ ತಲೆ ಮೇಲೆ ಬಿದ್ದಂತೆ ಕೂಗಾಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ಸರಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಡಿಕೆ ಶಿವಕುಮಾರ್, ಮೊದಲು ತಮ್ಮ ವಿರುದ್ಧದ ಭ್ರಷ್ಟಾಚಾರ ಆಪಾದನೆಗಳಿಂದ ಮುಕ್ತರಾಗಿ ಹೊರಬರಲಿ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ನನಗೆ ಅಶೋಕ್ ಅವರಿಂದಾಗಲಿ ಅಥವಾ ಬೇರೆ ಯಾವುದೇ ಬಿಜೆಪಿ ನಾಯಕರಿಂದ ಪಾಠ ಕಲಿಯಬೇಕಾದ ಅವಶ್ಯಕತೆಯಿಲ್ಲ.

ನಾನು ಯಾವುದೇ ಅಲಿಗೇಷನ್ ಮತ್ತು ವಿಚಾರಣೆ ಬಗ್ಗೆ ಮಾತನಾಡಿಲ್ಲ, ಮೂರು ವರ್ಷಗಳಿಂದ ಅವರು ರಾಜ್ಯದ ಜನತೆಗೆ ಏನೂ ಮಾಡಲು ಆಗಿಲ್ಲ, ಮುಂದೆಯೂ ಮಾಡಲು ಆಗಲ್ಲ ಎಂದು ಆಡಳಿತ ಸರಕಾರದ ವಿರುದ್ಧ ಕಿಡಿಕಾರಿದರು.
ನನ್ನ ವಿರುದ್ಧದ ಮಾಡಿರುವ ಭ್ರಷ್ಟಾಚಾರ ಪ್ರಕರಣಗಳು ರಾಜಕೀಯ ಷಡ್ಯಂತ್ರ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಬಗ್ಗೆಯೂ ರಾಜ್ಯದ ಜನರಿಗೆ ತಿಳಿದಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡುವ ಬದಲು, ಜನರಿಂದ ಉತ್ತಮ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಿ ಎಂದು ಹೇಳಿದರು.
ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾಡಲಾಗದ್ದನ್ನು ಈಗ ಚುನಾವಣೆ ಸಮಯದಲ್ಲಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ. ಭ್ರಷ್ಟಾಚಾರ ನಡೆದಿದ್ದರಲ್ಲವೇ ಇವರು ಬಯಲಿಗೆಳೆಯುವುದು ಎಂದು ಕೆಪಿಸಿಸಿ ಅಧ್ಯಕ್ಷ ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವೇಳೆ, ಗೋಬ್ಯಾಕ್ 'ಬ್ಯಾಕ್ ರಾಹುಲ್ ಗಾಂಧಿ'ಚಳುವಳಿ ಮಾಡುವುದಾಗಿ ಬಿಜೆಪಿ ಹೇಳಿ ಎಂಬುದಕ್ಕೆ ಪ್ರತಿಕ್ರಿಯಿಸಿ " ಅವರು ರಾಹುಲ್ ಗಾಂಧಿ ಗೋಬ್ಯಾಕ್ ಅದ್ರೂ ಮಾಡಲಿ ಕಂಬ್ಯಾಕ್ ಆದ್ರೂ ಮಾಡಲಿ, ನಮ್ಮ ಯಾತ್ರೆ ಮಾತ್ರ ಅತ್ಯಂತ ರಾಜಾರೋಷವಾಗಿ ರಾಜ್ಯದಲ್ಲಿ ಸಂಚರಿಸಲಿದೆ ಎಂದರು.
ಇವತ್ತು ಕಾಂಗ್ರೆಸ್ ಪಕ್ಷವಿದೆ ನಾನು ಇಡೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರವಾಗಿ ಮನವಿ ಮಾಡುತ್ತೇನೆ. ರಾಹುಲ್ ಜೀ ನೀವು ಕಾಂಗ್ರೆಸ್ ಪಕ್ಷದ ಅದ್ಯಧ್ಯಕ್ಷರಾಗಬೇಕು. ಪಕ್ಷವನ್ನು ಬೆಳಸಬೇಕು, ಉಳಿಸಬೇಕು ಇದರಿಂದ ನೀವು ಅಧ್ಯಕ್ಷರಾಗಿ ಮುಂದುವರಿಯಬೇಕು. ಗಾಂಧಿ ಕುಟುಂಬದಿಂದ ದೇಶದ ರಕ್ಷಣೆ ಮಾತ್ರ ಮಾಡಲು ಸಾಧ್ಯ. ದೇಶದ ರಕ್ಷಣೆಗೆ ನೀವು ಶ್ರಮಿಸುತ್ತಿದ್ದೀರಿ , ಹಾಗಾಗಿ ನೀವು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಿ ಎಂದು ಮನವಿ ಮಾಡಿದರು.












Click it and Unblock the Notifications