ಚಿತ್ರದುರ್ಗದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ; ಗಂಡ ಸಾವು
ಚಿತ್ರದುರ್ಗ, ಜೂನ್ 14: ಪುರುಷನೊಬ್ಬನಿಂದ ಹೆಂಡತಿಗೆ ಲೈಂಗಿಕ ಕಿರುಕುಳವಾಗುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ದಂಪತಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕೊಂಡಾಪುರ ಗ್ರಾಮದಲ್ಲಿ ನಡೆದಿತ್ತು. ಇದೀಗ ನಾಪತ್ತೆಯಾದವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಘಟನೆಯಲ್ಲಿ ಕೊಂಡಾಪುರ ಗ್ರಾಮ ನಿವಾಸಿ ಪತಿ ಮೈಲಾರಪ್ಪ ಸಾವನ್ನಪ್ಪಿ, ಪತ್ನಿ ಸರೋಜಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಕೊಂಡಾಪುರದ ವಿನಯ್ ಎಂಬಾತ ಸರೋಜಮ್ಮನಿಗೆ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದು, ಪತಿ ಕೆಲಸಕ್ಕೆ ಹೋದ ನಂತರ ಪ್ರತಿದಿನ ಪೋನ್ ಕರೆ ಮಾಡಿ ಹಿಂಸೆ ಕೊಡುತ್ತಿದ್ದ. ನಿಮ್ಮನ್ನು ಒಬ್ಬ ಹುಡುಗ ಇಷ್ಟ ಪಡುತ್ತಿದ್ದಾನೆ ಎಂದು ಹೇಳಿಕೊಂಡು, ಆಡಿಯೋ ರೆಕಾರ್ಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ದಂಪತಿ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿ ನಾಪತ್ತೆಯಾಗಿದ್ದಾರೆ.

ಮೈಲಾರಪ್ಪ ಕೆಎಸ್ ಆರ್ ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕ ವೃತ್ತಿ ಮಾಡುತ್ತಿದ್ದರು. ಮೈಲಾರಪ್ಪ, 'ಸ್ನೇಹಿತರು, ನೌಕರಿ ಮಾಡುತ್ತಿದ್ದ ಇಲಾಖೆಯವರು, ಬಂಧು ಬಳಗ ಎಲ್ಲರೂ ನಮ್ಮನ್ನು ಕ್ಷಮಿಸಿ' ಎಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದೇ ಗ್ರಾಮದ ದೇವಸ್ಥಾನದ ಬಳಿ ಅವರು ತೆಗೆದುಕೊಂಡ ಕೊನೆಯ ಸೆಲ್ಫೀ ಫೋಟೊ ಕೂಡ ವೈರಲ್ ಆಗಿತ್ತು.

ಇದೀಗ ತೋಣಚೇನಹಳ್ಳಿ ಬಳಿ ಅವರು ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದ್ದು, ಸ್ಥಳದಲ್ಲೇ ಮೈಲಾರಪ್ಪ ಸಾವನ್ನಪ್ಪಿದ್ದರೆ, ಸರೋಜಮ್ಮ ಸ್ಥಿತಿ ಗಂಭೀರವಾಗಿದೆ. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿರುವುದಾಗಿ ತಿಳಿದುಬಂದಿದೆ. ಹೊಸದುರ್ಗ ತಾಲ್ಲೂಕಿನ ತೊಣಚೇನಹಳ್ಳಿ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications