ಕಾಂಗ್ರೆಸ್ ಪಕ್ಷದ ಎಕ್ಸ್ಪೈರಿ ಡೇಟ್ ಮುಗಿದಿದ್ದು, ಗುಜರಿ ಅಂಗಡಿ ಸೇರಲಿದೆ: ಶ್ರೀರಾಮುಲು
ಚಿತ್ರದುರ್ಗ, ನವೆಂಬರ್ 22: ''ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಎಕ್ಸ್ಪೈರಿ ಡೇಟ್ ಮುಗಿದಿದ್ದು ಮುಂದಿನ ದಿನಗಳಲ್ಲಿ ಗುಜರಿ ಅಂಗಡಿ ಸೇರಲಿದೆ'' ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶ ಕಾರ್ಯಕ್ರಮ ಕುರಿತು ಮಾತನಾಡಿದ ಅವರು "ಕಾಂಗ್ರೆಸ್ ಪಕ್ಷದ ಎಕ್ಸ್ಪೈರಿ ಡೇಟ್ ಮುಗಿದುಹೋಗಿದೆ. ಮುಂದಿನ ದಿನಗಳಲ್ಲಿ ಅಂತಹ ಪಕ್ಷ ಗುಜುರಿ ಅಂಗಡಿ ಸೇರಲಿದೆ. ದೇಶದಲ್ಲಿ ಪ್ರಧಾನಿ ಮೋದಿ ಕಾಲಿಟ್ಟಲ್ಲೆಲ್ಲಾ ಜನ ಸೇರುತ್ತಿದ್ದಾರೆ. ಎಲ್ಲೆಲ್ಲಿ ಅವರು ಕಾಲಿಡುತ್ತಾರೋ ಅಲ್ಲಿ ಸಿಂಹ ಘರ್ಜನೆ ಮಾಡುತ್ತಿದ್ದಾರೆ. ಬಲಿಷ್ಠ ಭಾರತವನ್ನು ಕಟ್ಟುತ್ತಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಮೀರಿಸುವಂತಹ ದೇಶ ಇದ್ದರೆ, ಅದು ಭಾರತ ಮಾತ್ರ ಎಂದರು.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ 1,350 ಆಕಾಂಕ್ಷಿಗಳು
ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಿತ್ತು. ಎರಡು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿತ್ತು. ಇಂದು ಇಲ್ಲಿ ಕುಳಿತಿರುವ ಎಲ್ಲರೂ ಮಾಸ್ಕ್ ಇಲ್ಲದೆ ಕುಳಿತುಕೊಂಡಿದ್ದೀರಾ. ಪ್ರಧಾನಿ ಮೋದಿಯವರು ದೇಶದಲ್ಲಿ ಯಾರು ಜೀವ ಕಳೆದುಕೊಳ್ಳಬಾರದೆಂದು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಎನ್ನದೇ ಎಲ್ಲ ಧರ್ಮದವರೂ ಒಂದೇ ಎಂದು ತಾರತಮ್ಯ ಮಾಡದೇ ಲಸಿಕೆ ಕೊಡಿಸಿದ್ದಾರೆ ಎಂದರು.
ಮೀಸಲಾತಿ ನೀಡಿ ಮಾತು ಉಳಿಸಿಕೊಂಡಿದ್ದೇವೆ
ಕಾಂಗ್ರೆಸ್ ಹಿಂದು - ಮುಸ್ಲಿಂರನ್ನು ಹೊಡೆದು ರಾಜಕೀಯ ಮಾಡುವ ಚಾಳಿ ಹೊಂದಿದೆ, ಈಗಾಗಲೆ ಹಿಂದುಳಿದ ಪ.ಪಂ ಮತ್ತು ಪ.ಜಾತಿಗಳು ಕಾಂಗ್ರೆಸ್ ಬಿಟ್ಟು ಹೋಗ್ತಾ ಇದಾರೆ. ಸಿದ್ದರಾಮಯ್ಯ ಮಾತೆತ್ತಿದರೆ ಧಮ್, ತಾಕತ್ತು ಎಂದು ಮಾತಾಡುತ್ತಾರೆ, ಆದರೆ ಅವರು ಮುಖ್ಯಮಂತ್ರಿಯಾದರೆ ನಾವು ಮೀಸಲಾತಿ ಕೊಡಿಸಬಹುದು ಎಂದು ಕೊಂಡಿದ್ದೆವು.
ಆದರೆ ಅವರಿಗೆ ದಮ್ಮು, ತಾಕತ್ತು ಇದ್ದರೆ ಮೀಸಲಾತಿ ಕೊಡಬೇಕಿತ್ತು. ನಮಗೆ ಇರುವುದರಿಂದಲೇ ನಮ್ಮ ಮುಖ್ಯಮಂತ್ರಿ ಮೀಸಲಾತಿ ಕೊಟ್ಟಿದ್ದಾರೆ. ಹಿಂದುಳಿದ ಸಮುದಾಯದ ಬಗ್ಗೆ ಗೌರವ ಇದ್ದಿದ್ರೆ ಮೀಸಲಾತಿ ಕೊಡುತ್ತಿದ್ದರು. ನಿಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ನೀವು ಮಾಡಿದ್ದೇನು? ಮೀಸಲಾತಿ ಕೊಡಬೇಕು ಅಂದ್ರೆ ಬಿಜೆಪಿ ಸರ್ಕಾರ ಬರಬೇಕು ಎಂದು ನಾನು ಈ ಹಿಂದೆ ಹೇಳಿದ್ದೆ, ಈಗ ಮೀಸಲಾತಿ ನೀಡಿ ಮಾತು ಉಳಿಸಿಕೊಂಡಿದ್ದೇವೆ ಎಂದರು.
ರಾಹುಲ್ ಗಾಂಧಿ ಡಿಕೆಶಿ-ಸಿದ್ದುವನ್ನು ಒಟ್ಟುಗೂಡಿಸಲಿ
ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿ, ಭಾರತವನ್ನುಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ವಿಭಜನೆ ಮಾಡಿದೆ. ಈಗ ತಂದು ಜೋಡಿಸುತ್ತೀರಾ? ಅದರ ಬದಲು ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನೂ ಜೋಡಿ ಮಾಡಲಿ ಎಂದು ವ್ಯಂಗ್ಯವಾಡಿದರು. ಅಲ್ಲದೆ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಮಟಾಷ್ ಆಗುತ್ತಿದೆ. ತಮಿಳು, ಕೇರಳ ನಮ್ಮ ರಾಜ್ಯದಲ್ಲೂ ಪಾದಯಾತ್ರೆ ಮಾಡಿದ್ದಾರೆ. ಇಲ್ಲೂ ಗೆಲ್ಲುವುದಿಲ್ಲ, ಅವರು ಎಲ್ಲಾ ಕಡೆಗೂ ಹೋದರೆ ನಮಗೆ ಒಳ್ಳೆಯದು ಎಂದರು.
ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಕಾಳಗ
ಇನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಗೂಳಿ ಕಾಳಗ ನಡೆಯುತ್ತಿದೆ. ಕೊಪ್ಪಳದಲ್ಲಿ ಸಿದ್ದರಾಮಯ್ಯ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯಗೆ ಅಭ್ಯರ್ಥಿ ಘೋಷಿಸುವುದಕ್ಕೆ ಹಕ್ಕಿಲ್ಲ ಎಂದಿದ್ದಾರೆ. ಇವರಿಬ್ಬರ ನಡುವೆ ಗೂಳಿ ಕಾಳಗ ನಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಇಬ್ಬರೂ ಟವೆಲ್ ಹಾಕುತ್ತಿದ್ದಾರೆ. ಇದೊಂದು ತರ ಮ್ಯೂಸಿಕಲ್ ಚೇರ್ ಆಟವಾಗಿದೆ. ಆದರೆ ಸೂರ್ಯ ಮತ್ತು ಚಂದ್ರ ಇರುವುದು ಎಷ್ಟು ಸತ್ಯವೋ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಕ್ಷೇತ್ರ ಹುಡಕಾಟ
ರಾಜ್ಯದ ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಹುಡುಕಾಟ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮುಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಆದರೆ ನಮ್ಮ ರಾಜಾಹುಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರುಣಾದಲ್ಲಿ ಬಡಿಗೆ ಹಿಡಿದು ನಿಲ್ಲಲಿದ್ದಾರೆ. ಆ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಬೇಕು ಎಂದು ಅವರೇ ತಿರ್ಮಾನ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಗೆಲ್ಲುವ ನೆಚ್ಚಿನ ಕ್ಷೇತ್ರವಾಗಿರುವ ವರುಣಾದಲ್ಲಿ ಪೈಪೋಟಿ ನೀಡುವುದಕ್ಕೆ ಸಿದ್ದ ಎಂದು ತಿಳಿಸಿದರು.